
ಅಗ್ನಿ ಪರೀಕ್ಷೆಯನ್ನು ಗೆಲ್ಲಲಿದ್ದಾರಾ ಕೆಎಲ್ ರಾಹುಲ್
ಟೀಮ್ ಇಂಡಿಯಾದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಮೊದಲ ಎರಡು ಪಂದ್ಯಗಳಲ್ಲಿಯೂ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದ ಈ ಆರಂಭಿಕ ಆಟಗಾರನ ಮೇಲೆ ಸಾಕಷ್ಟು ಒತ್ತಡವಿದೆ. ತಂಡ ನಿರೀಕ್ಷಿಸುವ ಮಟ್ಟದ ಪ್ರದರ್ಶನ ಬಾರದಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ರಾಹುಲ್ ಉತ್ತಮ ಪ್ರದರ್ಶನ ನೀಡಬೇಕಾದ ಅನಿವಾರ್ಯತೆಯಿದೆ. ಇಲ್ಲವಾದಲ್ಲಿ ಮುಂದಿನ ಹಂತಗಳಲ್ಲಿ ಆಡುವ ಬಳಗದಿಂದ ಹೊರಗುಳಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಎರಡು ಪಂದ್ಯಗಳಲ್ಲಿಯೂ ರಾಹುಲ್ ಹೀನಾಯ ಪ್ರದರ್ಶನ
ಈ ಬಾರಿಯ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆಡಿರುವ ಎರಡು ಪಂದ್ಯಗಳಲ್ಲಿಯೂ ಕೆಎಲ್ ರಾಹುಲ್ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಮೊದಲಿಗೆ ಪಾಕಿಸ್ತಾನದ ವಿರುದ್ಧದ 8 ಎಸೆತಗಳಲ್ಲಿ 4 ರನ್ಗಳಿಸಿ ನಸೀಮ್ ಶಾಗೆ ಬೌಲ್ಡ್ ಆಗಿದ್ದ ಕೆಎಲ್ ರಾಹುಲ್ ಬಳಿಕ ಎರಡನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧವೂ ವಿಫಲವಾದರು. ಈ ಪಂದ್ಯದಲ್ಲಿ 12 ಎಸೆತಗಳಲ್ಲಿ 9 ರನ್ಗಳಿಸಿ ವಿಕೆಟ್ ಔಟಾಗುವ ಮೂಲಕ ಮತ್ತೊಮ್ಮೆ ವೈಫಲ್ಯತೆ ಅನುಭವಿಸಿದ್ದಾರೆ. ಹೀಗಾಗಿ ಕೆಎಲ್ ರಾಹುಲ್ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಕೆಎಲ್ ರಾಹುಲ್ ವೈಫಲ್ಯ ಮ್ಯಾನೇಜ್ಮೆಂಟ್ಗೂ ತಲೆನೋವು ತಂದಿದೆ.

ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಪಂತ್
ಮಹತ್ವದ ಹಂತಗಳಲ್ಲಿ ವೈಫಲ್ಯತೆ ಅನುಭವಿಸುವ ಕೆಎಲ್ ರಾಹುಲ್ಗೆ ಅವಕಾಶ ನೀಡುವುದಕ್ಕೆ ಕ್ರಿಕೆಟ್ ಅಭಿಮಾನಿಗಳು ಬೇಸತ್ತಿದ್ದಾರೆ. ಕೆಎಲ್ ರಾಹುಲ್ ಬದಲಿಗೆ ಮತ್ತೋರ್ವ ಯುವ ಪ್ರತಿಭಾನ್ವಿತ ಆಟಗಾರ ರಿಷಭ್ ಪಂತ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುವ ಬಗ್ಗೆ ತಂಡ ಚಿಂತನೆ ನಡೆಸಬೇಕು ಎಂದು ಅಭಿಮಾನಿಗಳು ಒತ್ತಯಿಸುತ್ತಿದ್ದಾರೆ. ಪವರ್ಪ್ಲೇನಲ್ಲಿ ಭಾರತ ಪರಿಣಾಮಕಾರಿಯಾಗಿ ರನ್ಗಳಿಸಲು ಮೊದಲ ಎರಡು ಪಂದ್ಯಗಳಲ್ಲಿಯೂ ವಿಫಲವಾಗಿರುವ ಕಾರಣ ಮ್ಯಾನೇಜ್ಮೆಂಟ್ ಈ ವಿಚಾರವಾಗಿ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬುದು ಕುತೂಹಲವಾಗಿಯೇ ಉಳಿದುಕೊಂಡಿದೆ.

ರಾಹುಲ್ ಸಾಮರ್ಥ್ಯದ ಬಗ್ಗೆ ನಾಯಕ, ಕೋಚ್ಗೆ ವಿಶ್ವಾಸ
ಕೆಎಲ್ ರಾಹುಲ್ ಟೀಮ್ ಇಂಡಿಯಾ ವೈಟ್ಬಾಲ್ ಮಾದರಿಯಲ್ಲಿ ಹಲವು ವರ್ಷಗಳಿಂದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಕೆಎಲ್ ರಾಹುಲ್ ಅದ್ಭುತ ಪ್ರದರ್ಶನದ ಮೂಲಕ ಈಗಾಗಲೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಆಟಗಾರ. ಹಾಗಾಗಿ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ಗೆ ಕೆಎಲ್ ರಾಹುಲ್ ಮೇಲೆ ಸಹಜವಾಗಿಯೇ ಹೆಚ್ಚಿನ ವಿಶ್ವಾಸವಿದೆ. ಇನ್ನು ವಿಶ್ವಕಪ್ನ ಆರಂಭಕ್ಕೂ ಮುನ್ನ ರಾಹುಲ್ ತಮ್ಮ ಫಾರ್ಮ್ ಪ್ರದರ್ಶಿಸುವಲ್ಲಿಯೂ ಯಶಸ್ವಿಯಾಗಿದ್ದರು. ಹೀಗಾಗಿ ರಾಹುಲ್ನಂತಾ ಆಟಗಾರ ಮತ್ತೆ ಲಯವನ್ನು ಕಂಡುಕೊಳ್ಳುವುದು ಕಷ್ಟವಲ್ಲ ಎಂಬ ಅಭಿಪ್ರಾಯಗಳು ಕೂಡ ಇದೆ.


Click it and Unblock the Notifications
