
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯದ ಆರಂಭಕ್ಕೆ ಒಂದು ದಿನ ಮೊದಲು ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಹೇಳಿದೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗಾಗಿ ಬಿಸಿಸಿಐ ಪ್ರಕಟಿಸಿದ ತಂಡದಲ್ಲಿ ಮೊದಲು ಜಸ್ಪ್ರೀತ್ ಬುಮ್ರಾ ಹೆಸರು ಇರಲಿಲ್ಲ. ಆದರೆ, ಜನವರಿ ಮೂರರಂದು ಜಸ್ಪ್ರೀತ್ ಬುಮ್ರಾ ಫಿಟ್ ಆಗಿದ್ದಾರೆ ಎಂದು ಎನ್ಸಿಎ ಘೋಷಿಸಿದ ಬಳಿಕ ಅವರ ಹೆಸರನ್ನು ತಂಡದಲ್ಲಿ ಸೇರ್ಪಡೆ ಮಾಡಲಾಯಿತು.
ಈ ಯೂ ಟರ್ನ್ ಹೊಡೆದಿರುವ ಬಿಸಿಸಿಐ ಅವರನ್ನು ಸರಣಿಯಿಂದ ಹೊರಗಿಡಲು ನಿರ್ಧರಿಸಿದೆ. ಬೆನ್ನು ನೋವಿನ ಕಾರಣ ಬುಮ್ರಾ 2022ರ ಸೆಪ್ಟೆಂಬರ್ ತಿಂಗಳಿನಿಂದ ಕ್ರಿಕೆಟ್ನಿಂದ ದೂರವುಳಿದಿದ್ದಾರೆ. ಸದ್ಯ ಭಾರತ ತಂಡ ಮೊದಲನೇ ಪಂದ್ಯಕ್ಕಾಗಿ ಗುವಾಹಟಿಗೆ ತೆರಳಿದ್ದು, ತಂಡದ ಜೊತೆ ಬುಮ್ರಾ ತೆರಳಿಲ್ಲ.
ಕಳೆದ ಬಾರಿ ಆದ ಕಹಿ ಅನುಭವದಿಂದ ಕೊನೆಗೂ ಪಾಠ ಕಲಿತಿರುವ ಬಿಸಿಸಿಐ ಈ ಬಾರಿ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದೆ. ಟಿ20 ವಿಶ್ವಕಪ್ 2022ರ ಆರಂಭಕ್ಕೆ ಮುನ್ನ ನಡೆದ ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಬುಮ್ರಾ ಆಡಿದ್ದರು. ಫಿಟ್ ಆಗಿರದಿದ್ದರೂ ಅವರನ್ನು ಆಡಿಸಿದ ಕಾರಣ ಟಿ20 ವಿಶ್ವಕಪ್ನಿಂದಲೇ ಹೊರಗುಳಿಯಬೇಕಾಯಿತು.

ಬುಮ್ರಾ ಫಿಟ್ನೆಸ್ ಬಹಳ ಮುಖ್ಯ
2023ರ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಏಕದಿನ ವಿಶ್ವಕಪ್ ನಡೆಯುವುದರಿಂದ ಭಾರತ ತಂಡಕ್ಕೆ ಜಸ್ಪ್ರೀತ್ ಬುಮ್ರಾ ಫಿಟ್ನೆಸ್ ಬಹಳ ಮುಖ್ಯವಾಗಿದೆ. ಸದ್ಯ ಅವರು ಚೇತರಿಸಿಕೊಂಡಿದ್ದರೂ, ಒಂದೇ ಬಾರಿ ಏಕದಿನ ಪಂದ್ಯದಲ್ಲಿ ಆಡಿಸುವುದು ಉತ್ತಮವಲ್ಲ. 10 ಓವರ್ ಬೌಲಿಂಗ್ ಮಾಡಬೇಕಾಗಿರುವುದರಿಂದ ಹೆಚ್ಚಿನ ಒತ್ತಡ ಬೀಳುವ ಸಾಧ್ಯತೆ ಇದೆ.
ಫೆಬ್ರವರಿ 9 ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಡುವ ಸಾಧ್ಯತೆ ಇದೆ. ಇದೆ ಕಾರಣಕ್ಕೆ ಬಿಸಿಸಿಐ ಬುಮ್ರಾ ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದೆ.
ವೇಗಿ ಜಸ್ಪ್ರೀತ್ ಬುಮ್ರಾ ತಂಡದಿಂದ ಹೊರಗುಳಿದ ಬಳಿಕ ಅವರ ಸ್ಥಾನದಲ್ಲಿ ಉಮ್ರಾನ್ ಮಲಿಕ್ ಅಥವಾ ಅರ್ಷದೀಪ್ ಸಿಂಗ್ ಆಡುವ ಬಳಗದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ.
ಏಕದಿನ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಇಶಾನ್ ಕಿಶನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್.