
ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಗುವಾಹಟಿಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ರನ್ ಮಳೆ ಸುರಿಸಿರುವ ಭಾರತ ಶ್ರೀಲಂಕಾಗೆ ಬೃಹತ್ ಗುರಿ ಮುಂದಿಟ್ಟಿದೆ. ಮೊದಲಿಗೆ ಆರಂಭಿಕರ ಅದ್ಭುತ ಜೊತೆಯಾಟದ ನಂತರ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ವೈಭವ ಪ್ರದರ್ಶಿಸಿದ್ದು ಟೀಮ್ ಇಂಡಿಯಾ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ದೊರೆತಿದೆ. ಈ ಪಂದ್ಯವನ್ನು ಗೆಲ್ಲಲು ಶ್ರೀಲಂಕಾಗೆ ಭರ್ಜರಿ 374 ರನ್ಗಳ ಗುರಿ ನಿಗದಿಪಡಿಸಿದೆ ಟೀಮ್ ಇಂಡಿಯಾ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಭಾರತ ತಂಡವನ್ನು ಬ್ಯಾಟಿಂಗ್ಗೆ ಇಳಿಸಿತ್ತು. ಆದರೆ ಲಂಕಾ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂಥಾ ಪ್ರದರ್ಶನ ಶ್ರೀಲಂಕಾ ಬೌಲರ್ಗಳಿಂದ ಬರಲಿಲ್ಲ. ಭಾರತದ ಆರಂಭಿಕ ಜೋಡಿ ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ. ಈ ಮೂಲಕ ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸುವಲ್ಲಿ ಯಶಸ್ವಿಯಾದರು.
ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಮೊದಲ ವಿಕೆಟ್ಗೆ 143 ರನ್ಗಳ ಜೊತೆಯಾಟವನ್ನು ನೀಡುವ ಮೂಲಕ ಮೇಲುಗೈ ಸಾಧಿಸಿದರು. ಈ ಹಂತದಲ್ಲಿ 70 ರನ್ಗಳಿಸಿದ್ದ ಗಿಲ್ ವಿಕೆಟ್ ಕಳೆದುಕೊಂಡರೆ ಬಳಿಕ ವಿರಾಟ್ ಕೊಹ್ಲಿ ಕ್ರೀಸ್ಗಿಳಿದು ಬ್ಯಾಟಿಂಗ್ ಆರಂಭಿಸಿದರು. ರೋಹಿತ್-ಕೊಹ್ಲಿ ಜೋಡಿ 30 ರನ್ಗಳ ಜೊತೆಯಾಟ ನೀಡಿದ ಬಳಿಕ ನಾಯಕ ರೋಹಿತ್ ಶರ್ಮಾ 83 ರನ್ಗಳಿಸಿ ಔಟಾಗುವ ಮೂಲಕ 17 ರನ್ಗಳಿಂದ ಶತಕವಂಚಿತವಾದರು.
ಬಳಿಕ ವಿರಾಟ್ ಕೊಹ್ಲಿ ಶ್ರೇಯಸ್ ಐಯ್ಯರ್ ಹಾಗೂ ಕೆಎಲ್ ರಾಹುಲ್ ಅವರೊಂದಿಗೆ ಸೇರಿಕೊಂಡು ಭರ್ಜರಿಯಾಗಿ ಇನ್ನಿಂಗ್ಸ್ ಕಟ್ಟುತ್ತಾ ಸಾಗಿದರು. ಆಕ್ರಮಣಕಾರಿ ಹೊಡೆತಗಳನ್ನು ಬಾರಿಸಿದ ಕೊಹ್ಲಿ ತಮ್ಮ 45ನೇ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದಾರೆ. ಈ ಪಂದ್ಯದಲ್ಲಿ ಒಟ್ಟು 87 ಎಸೆತ ಎದುರಿಸಿದ ವಿರಾಟ್ ಕೊಹ್ಲಿ 113 ರನ್ ಬಾರಿಸಿ ವಿಕೆಟ್ ಕಳೆದುಕೊಂಡರು. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕೊಹ್ಲಿಯ 73ನೇ ಶತಕ ಇದಾಗಿದೆ.
ಇನ್ನು ವಿರಾಟ್ ಕೊಹ್ಲಿಗೆ ಶ್ರೇಯಸ್ ಐಯ್ಯರ್ ಹಾಗೂ ಕೆಎಲ್ ರಾಹುಲ್ ಉತ್ತಮವಾಗಿ ಸಾಥ್ ನೀಡಿದರು. ಅಮತಿಮವಾಗಿ ಟೀಮ್ ಇಂಡಿಯಾ ನಿಗದಿತ 50 ಓವರ್ಗಳಲ್ಲಿ ಭರ್ಜರಿ 373 ರನ್ ಬಾರಿಸಿದ್ದು ಶ್ರೀಲಂಕಾಗೆ ಬೃಹತ್ ಗುರಿ ನಿಗದಿಪಡಿಸಿದೆ.
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್
ಬೆಂಚ್: ಸೂರ್ಯಕುಮಾರ್ ಯಾದವ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಇಶಾನ್ ಕಿಶನ್, ಅರ್ಷದೀಪ್ ಸಿಂಗ್
ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೋ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವ, ಚರಿತ್ ಅಸಲಂಕ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುನಿತ್ ವೆಲ್ಲಲಾಗೆ, ಕಸುನ್ ರಜಿತ, ದಿಲ್ಶಾನ್ ಮಧುಶಂಕ
ಬೆಂಚ್: ಮಹೇಶ್ ತೀಕ್ಷಣ, ಲಹಿರು ಕುಮಾರ, ಅಶೇನ್ ಬಂಡಾರ, ನುವಾನಿಡು ಫೆರ್ನಾಂಡೋ, ಪ್ರಮೋದ್ ಮದುಶನ್, ಜೆಫ್ರಿ ವಂಡರ್ಸೆ, ಸದೀರ ಸಮರವಿಕ್ರಮ