
ಶ್ರೀಲಂಕಾ ನಾಯಕ ದಸುನ್ ಶನಕ ಬಹಳ ಸಮಯದಿಂದ ಭಾರತ ತಂಡಕ್ಕೆ ತಲೆನೋವಾಗಿದ್ದಾರೆ ಎಂದು ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಹೇಳಿದ್ದಾರೆ. ದಸುನ್ ಶನಕ ಭಾರತದ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡುತ್ತಲೇ ಇದ್ದಾರೆ.
ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಅವರು ಅಜೇಯ ಶತಕ ಗಳಿಸಿದ್ದರು. ಎರಡನೇ ಏಕದಿನ ಪಂದ್ಯದಲ್ಲಿ ಅವರನ್ನು ಬೇಗನೆ ಔಟ್ ಮಾಡುವ ಬಗ್ಗೆ ಭಾರತ ತಂಡ ಚಿಂತಿಸಬೇಕು ಎಂದು ಜಾಫರ್ ಅಭಿಪ್ರಾಯಪಟ್ಟಿದ್ದಾರೆ. ಭಾರತದ ವಿರುದ್ಧದ ಟಿ20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಶನಕ, ನಂತರ ಏಕದಿನ ಸರಣಿಯಲ್ಲಿ ಕೂಡ ಫಾರ್ಮ್ ಅನ್ನು ಮುಂದುವರೆಸಿದ್ದಾರೆ.
"ಭಾರತದ ವಿರುದ್ಧ ಕಳೆದ ಹಲವು ಪಂದ್ಯಗಳಿಂದ ದಸುನ್ ಶನಕ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಶನಕ ಅವರನ್ನು ಬೇಗನೆ ಔಟ್ ಮಾಡುವ ಬಗ್ಗೆ ಭಾರತ ತಂಡ ಚಿಂತಿಸಬೇಕಿದೆ. ಅವರು ಅತ್ಯುತ್ತಮ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸಿದ್ದಾರೆ. ಮೊದಲನೇ ಪಂದ್ಯದಲ್ಲಿ ಭಾರತ ಗೆದ್ದರೂ ಅವರನ್ನು ಔಟ್ ಮಾಡಲು ಸಾಧ್ಯವಾಗಲಿಲ್ಲ, ಇದರ ಬಗ್ಗೆ ಭಾರತೀಯ ಬೌಲರ್ಗಳು ಯೋಚಿಸಬೇಕು" ಎಂದರು.

ಎರಡನೇ ಪಂದ್ಯದಲ್ಲಿ ಭಾರತ ಎಚ್ಚರಿಕೆಯಿಂದ ಆಡಬೇಕು
ಮೊದಲನೇ ಪಂದ್ಯದಲ್ಲಿ ಸೋತ ಬಳಿಕ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಆಡುವ ಬಳಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. ಮಧುಶಂಕ ಬದಲಿಗೆ ಬೇರೆ ಆಟಗಾರ ಆಯ್ಕೆಯಾಗುವ ಸಾಧ್ಯತೆ ಇದೆ, ಮಹೀಶ್ ತೀಕ್ಷಣ ಕೂಡ ತಂಡಕ್ಕೆ ಮರಳುವ ಸಾಧ್ಯತೆ ಇದ್ದು, ಭಾರತ ಇನ್ನೂ ಎಚ್ಚರಿಕೆಯಿಂದ ಆಡಬೇಕು ಎಂದರು.
ಮೊದಲನೇ ಏಕದಿನ ಪಂದ್ಯದಲ್ಲಿ ದಸುನ್ ಶನಕ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದರು, ಅವರಿಗೆ ಸೂಕ್ತ ಬ್ಯಾಟರ್ ಜೊತೆಯಾಗದ ಕಾರಣ ಹೆಚ್ಚಿನ ಹೋರಾಟ ನೀಡಲು ಸಾಧ್ಯವಾಗಲಿಲ್ಲ. ಎರಡನೇ ಏಕದಿನ ಪಂದ್ಯದಲ್ಲಿ ಅವರು ಬ್ಯಾಟಿಂಗ್ನಲ್ಲಿ ಬಡ್ತಿ ಪಡೆಯುವ ಸಾಧ್ಯತೆ ಇದೆ ಎಂದು ಜಾಫರ್ ಹೇಳಿದರು.

ಎರಡೂ ತಂಡಗಳ ಸಂಭಾವ್ಯ ಪ್ಲೇಯಿಂಗ್ XI
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಉಮ್ರಾನ್ ಮಲಿಕ್, ಯುಜುವೇಂದ್ರ ಚಹಾಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೋ, ಕುಸಲ್ ಮೆಂಡಿಸ್, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ದಸುನ್ ಶನಕ, ವನಿಂದು ಹಸರಂಗ, ದುನಿತ್ ವೆಲ್ಲಲಾಗೆ/ಮಹೀಶ್ ತೀಕ್ಷಣ, ಚಾಮಿಕ ಕರುಣಾರತ್ನ, ಕಸುನ್ ರಜಿತ, ದಿಲ್ಶನ್ ಮಧುಶಂಕ/ಲಹಿರು ಕುಮಾರ.