
ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ಗುರುವಾರ ನಡೆಯಲಿದೆ. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದು ಮೂರು ಪಂದ್ಯಗಳ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಇದೀಗ ಎರಡನೇ ಪಂದ್ಯಕ್ಕಾಗಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಸಜ್ಜಾಗಿದ್ದು ಹಾರ್ದಿಕ್ ಪಾಂಡ್ಯ ಪಡೆ ಬುಧವಾರ ರಾತ್ರಿ ಪುಣೆ ತಲುಪಿದೆ.
ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ಹಲವು ಆಟಗಾರರು ವಿಫಲವಾಗಿದ್ದರು. ಅದರಲ್ಲೂ ಅಗ್ರ ಕ್ರಮಾಂಕದ ಮೇಲಿದ್ದ ನಿರೀಕ್ಷೆ ಹುಸಿಯಾಗಿತ್ತು. ಹೀಗಾಗಿ ಎರಡನೇ ಪಂದ್ಯದಲ್ಲಿ ಹಿಂದಿನ ಪಂದ್ಯದಲ್ಲಿ ಮಾಡಿದ ತಪ್ಪನ್ನು ತಿದ್ದುಕೊಂಡು ಕಣಕ್ಕಿಳಿಯಲು ಸಜ್ಜಾಗಿದೆ. ಹೀಗಾಗಿ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಹಾಗೂ ಇಶಾನ್ ಕಿಶನ್ ಪುಣೆಯಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಇನ್ನು ಬೌಲಿಂಗ್ನಲ್ಲಿ ಯುಜುವೇಂದ್ರ ಚಾಹಲ್ ನೀರಸ ಪ್ರದರ್ಶನ ನೀಡಿದ್ದರು. ಪುಣೆಯಲ್ಲಿ ಅವರಿಗೂ ಮತ್ತೊಂದು ಅವಕಾಶ ದೊರೆಯಲಿದೆ.
ಇನ್ನು ಸಂಜು ಸ್ಯಾಮ್ಸನ್ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಅಂತಿಮ ಎರಡು ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಮೊಣಕಾಲಿನ ಗಾಯದಿಂದಾಗಿ ಸಂಜು ಉಳಿದ ಎರಡು ಪಂದ್ಯಗಳಿಗೆ ಅಲಭ್ತವಾಗಲಿದ್ದಾರೆ ಎಂಬುದನ್ನು ಬಿಸಿಸಿಐ ಖಚಿತಪಡಿಸಿದ್ದು ಜಿತೇಶ್ ಶರ್ಮಾ ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇನ್ನು ಸಂಜು ಸ್ಯಾಮ್ಸನ್ ಅಲಭ್ಯವಾಗಿರುವ ಕಾರಣ ಋತುರಾಜ್ ಗಾಯಕ್ವಾಡ್ಗೆ ಅವಕಾಶ ದೊರೆಯುವ ಸಾಧ್ಯತೆ ಹೆಚ್ಚಿದೆ.
ಇನ್ನು ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಅಂತಿಮ ಎಸೆತದಲ್ಲಿ ಫಲಿತಾಂಶ ತನ್ನ ಪರವಾಗಿಸಿಕೊಂಡಿತ್ತು. ರೋಚಕವಾಗಿ ನಡೆದ ಕಾದಾಟದಲ್ಲಿ ಟೀಮ್ ಇಂಡಿಯಾ ಕೇವಲ 2 ರನ್ಗಳ ಅಂತರದ ಗೆಲುವು ಸಾಧಿಸಿತ್ತು. ಬ್ಯಾಟಿಂಗ್ನಲ್ಲಿ ದೀಪಕ್ ಹೂಡಾ, ಅಕ್ಷರ್ ಪಟೇಲ್ ಮಿಂಚಿನ ಪ್ರದರ್ಶನ ನೀಡಿದ್ದರೆ ಬೌಲಿಂಗ್ನಲ್ಲಿ ಶಿವಂ ಮಾವಿ 4 ವಿಕೆಟ್ ಕಿತ್ತು ಮಿಂಚಿದ್ದರು.
ಇತ್ತಂಡಗಳ ಸ್ಕ್ವಾಡ್ ಹೀಗಿದೆ
ಭಾರತ ತಂಡ: ಇಶಾನ್ ಕಿಶನ್(ವಿಕೆಟ್ ಕೀಪರ್), ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡಾ, ಅಕ್ಸರ್ ಪಟೇಲ್, ಹರ್ಷಲ್ ಪಟೇಲ್, ಶಿವಂ ಮಾವಿ, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಹಾಲ್, ಮುಖೇಶ್ ಕುಮಾರ್, ಅರ್ಷದೀಪ್ ಸಿಂಗ್, ಋತುರಾಜ್ ಗಾಯಕ್ವಾಡ್, ವಾಷಿಂಗ್ಟನ್ ಸುಂದರ್, ರಾಹುಲ್ ತ್ರಿಪಾಠಿ, ಜಿತೇಶ್ ಶರ್ಮಾ
ಶ್ರೀಲಂಕಾ ತಂಡ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನ, ಮಹೇಶ್ ತೀಕ್ಷಣ, ಕಸುನ್ ರಜಿತ, ದಿಲ್ಶನ್ ಮಧುಶಂಕ, ಲಹಿರು ಕುಮಾರ, ದುನಿತ್ ವೆಳ್ಳಾಲಗೆ, ಸದೀರ ಸಮರವಿಕ್ರಮ, ಅವಿಷ್ಕ ಫೆರ್ನಾಂಡೋ, ಅಶೇನ್ ಬಂಡಾರ, ಪ್ರಮೋದ್ ಮದುಶನ್, ನುವಾನ್ ತುಷಾರ