ಆಗಸ್ಟ್ 7 ಬುಧವಾರ, ಭಾರತ ಮತ್ತು ಶ್ರೀಲಂಕಾ ನಡುವಿನ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯ ಇಂದು ನಡೆಯಲಿದೆ. ಈ ಪಂದ್ಯವನ್ನು ಗೆದ್ದು ಸರಣಿಯನ್ನು ಸಮಬಲದಲ್ಲಿ ಅಂತ್ಯಗೊಳಿಸಲು ಟೀಮ್ ಇಂಡಿಯಾ ಸಿದ್ಧತೆ ನಡೆಸಿದೆ.
ಶ್ರೀಲಂಕಾ ಪ್ರವಾಸದಲ್ಲಿ ಟಿ20 ಸರಣಿಯನ್ನು ಗೆದ್ದ ನಂತರ, ಏಕದಿನ ಕ್ರಿಕೆಟ್ನಲ್ಲಿ ಭಾರತ ತಂಡವು ಇಷ್ಟು ಕೆಟ್ಟದಾಗಿ ಸೋಲುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಭಾರತ ಸುಲಭವಾಗಿ ಗೆಲ್ಲುವ ಬದಲು ಟೈ ಮಾಡಿಕೊಂಡಿತ್ತು. ಬಳಿಕ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ರದರ್ಶನ ಅತ್ಯಂತ ನಿರಾಶಾದಾಯಕವಾಗಿತ್ತು.

ಶ್ರೀಲಂಕಾ ವಿರುದ್ಧ ಕಳೆದೆರೆಡು ಏಕದಿನ ಪಂದ್ಯಗಳಲ್ಲಿ ನಾಯಕ ರೋಹಿತ್ ಶರ್ಮಾ ಅದ್ಭುತವಾಗಿ ಬ್ಯಾಟಿಂಗ್ ಪ್ರದರ್ಶಿಸಿದ್ದು, ಸತತ ಎರಡು ಅರ್ಧಶತಕಗಳನ್ನು ಬಾರಿಸಿ ಮಿಂಚಿದ್ದರು. ಆದರೆ ಇನ್ನೊಂದು ತುದಿಯಲ್ಲಿ ರೋಹಿತ್ಗೆ ಬೆಂಬಲ ಸಿಗಲಿಲ್ಲ.
ಮಧ್ಯಮ ಕ್ರಮಾಂಕದ ಬ್ಯಾಟರ್ಸ್ ನಿರಂತರವಾಗಿ ವೈಫಲ್ಯ ಅನುಭವಿಸುತ್ತಿದ್ದಾರೆ. ಆರಂಭಿಕರು ವಿಕೆಟ್ಗಳನ್ನು ಕಳೆದುಕೊಂಡಾಗ ಮಧ್ಯಮ ಕ್ರಮಾಂಕದ ಬ್ಯಾಟರ್ಸ್ ದೊಡ್ಡ ಇನ್ನಿಂಗ್ಸ್ ಆಡಲು ಪರದಾಟ ನಡೆಸುತ್ತಿದ್ದಾರೆ.
ಮೊದಲ ಏಕದಿನ ಪಂದ್ಯದ ಸೋಲಿಗೆ ಶಿವಂ ದುಬೆ ಕಾರಣವಾಗಿದ್ದರು. ಕೊನೆಯಲ್ಲಿ ಒಂದು ರನ್ ಗಳಿಸಲು ಸಾಧ್ಯವಾಗದೆ ವಿಕೆಟ್ ಕಳೆದುಕೊಂಡಿದರು. ಇನ್ನು ಎರಡನೇ ಏಕದಿನ ಪಂದ್ಯದಲ್ಲಿ ಶಿವಂ ದುಬೆಗೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತು.
ಆದರೆ ದುಬೆ ತಮ್ಮ ಬ್ಯಾಟ್ನಿಂದ ವಿಶೇಷವಾದುದನ್ನು ಮಾಡಲು ಸಾಧ್ಯವಾಗಲಿಲ್ಲ. ನಂತರ ಬೌಲಿಂಗ್ನಲ್ಲೂ ಅವರ ಪ್ರದರ್ಶನ ಸಾಧಾರಣವಾಗಿತ್ತು. ಇದಲ್ಲದೇ ಮೊದಲ ಏಕದಿನ ಪಂದ್ಯದಲ್ಲೂ ತಂಡಕ್ಕೆ ಸುಲಭದ ಗೆಲುವಿನಲ್ಲಿ ನೆರವಾಗಲಿಲ್ಲ.
ಶಿವಂ ದುಬೆ ಎರಡೂ ಏಕದಿನ ಪಂದ್ಯಗಳಲ್ಲಿ ಆಲ್ ರೌಂಡರ್ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಕೊನೆಯ ಓವರ್ಗಳಲ್ಲಿ ಒತ್ತಡದಲ್ಲಿ ದೊಡ್ಡ ಹೊಡೆತಗಳನ್ನು ಹೊಡೆಯಲು ದುಬೆ ಅವರಿಂದ ಸಾಧ್ಯವಾಗುತ್ತಿಲ್ಲ.
ಇಂತಹ ಸಂರ್ಭದಲ್ಲಿ ರಿಯಾನ್ ಪರಾಗ್ ಅವರಂತಹ ಆಲ್ ರೌಂಡರ್ ಬೆಂಚ್ ಕಾಯುತ್ತಿದ್ದಾರೆ. ಪರಾಗ್ ಕೂಡ ಸ್ಪಿನ್ ಬೌಲಿಂಗ್ ಮಾಡಬಲ್ಲರು. ಜೊತೆಗೆ ವೇಗದ ಬೌಲರ್ಗಳಿಗೆ ಚೆನ್ನಾಗಿ ಬ್ಯಾಟಿಂಗ್ ಆಡಬಲ್ಲರು. ಕೊಲಂಬೊ ಪಿಚ್ನಿಂದ ಸ್ಪಿನ್ನರ್ಗಳಿಗೆ ನಿರಂತರ ನೆರವು ಸಿಗುತ್ತಿದೆ. ಹೀಗಾಗಿ ರಿಯಾನ್ ಪರಾಗ್ ಅವರಿಗೆ ನಾಯಕ ರೋಹಿತ್ ಶರ್ಮಾ ಪ್ಲೇಯಿಂಗ್-11 ರಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಇದುವರೆಗೆ ರಿಷಭ್ ಪಂತ್ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಕಾರು ಅಪಘಾತದ ನಂತರ ಹಿಂತಿರುಗಿದ ಬಳಿಕವೂ, ಪಂತ್ ಏಕದಿನ ಅಥವಾ ಟೆಸ್ಟ್ ಪಂದ್ಯವನ್ನು ಆಡಲು ಸಾಧ್ಯವಾಗಿಲ್ಲ. ಆದರೆ, ಪಂತ್ ನಿರಂತರವಾಗಿ ಟಿ20 ಪಂದ್ಯಗಳನ್ನು ಮಾತ್ರ ಆಡುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಪಂತ್ ತಮ್ಮ ಫಿಟ್ನೆಸ್ ಅನ್ನು ದೀರ್ಘ ಸ್ವರೂಪ ಕ್ರಿಕೆಟ್ನಲ್ಲಿಯೂ ಸಾಬೀತುಪಡಿಸಲು ರೆಡಿಯಾಗಿದ್ದಾರೆ. ಇದೀಗ ನಾಯಕ ರೋಹಿತ್ ಶರ್ಮಾ ಅವರು ಶ್ರೇಯಸ್ ಅಯ್ಯರ್ ಅಥವಾ ಕೆಎಸ್ ರಾಹುಲ್ ಬದಲಿಗೆ ತಂಡಕ್ಕೆ ಪಂತ್ ನನ್ನು ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಅಯ್ಯರ್ ಮತ್ತು ರಾಹುಲ್ ಇಬ್ಬರೂ ಬ್ಯಾಟಿಂಗ್ ಅಗತ್ಯವಿರುವಾಗ ತಂಡಕ್ಕೆ ಆಸರೆಯಾಗುತ್ತಿಲ್ಲ. ಹೀಗಾಗಿ ಇಬ್ಬರಲ್ಲಿ ಒಬ್ಬರು ತಂಡದಿಂದ ಹೊರಗುಳಿಯುವುದು ಬಹುತೇಕ ಖಚಿತ.