
ರೋಹಿತ್ ಡಿಕ್ಲೇರ್ ಘೋಷಿಸಿದ್ದರ ಹಿಂದಿನ ಕಾರಣ
ಡಿಕ್ಲೇರ್ ಕುರಿತು ಮಾತನಾಡಿರುವ ರವೀಂದ್ರ ಜಡೇಜಾ ಡಿಕ್ಲೇರ್ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದೇ ತಾನು ಎಂಬ ಹೇಳಿಕೆಯನ್ನು ನೀಡಿದ್ದಾರೆ. ತಾನು ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಚೆಂಡು ಬೌನ್ಸ್ ಆಗಲು ಶುರುವಾಯಿತು ಎಂದಿರುವ ರವೀಂದ್ರ ಜಡೇಜಾ ಅದೇ ಸಮಯದಲ್ಲಿ ಶ್ರೀಲಂಕಾ ಆಟಗಾರರು ತೀವ್ರ ದಣಿದಿದ್ದರು ಹೀಗಾಗಿ ಡಿಕ್ಲೇರ್ ತೆಗೆದುಕೊಳ್ಳಲು ಅದೇ ಸರಿಯಾದ ಸಮಯ ಎಂದು ತಾನೇ ಡಿಕ್ಲೇರ್ ತೆಗೆದುಕೊಳ್ಳುವಂತೆ ಸ್ವತಃ ಸಲಹೆ ನೀಡಿದೆ ಎಂದಿದ್ದಾರೆ. ತಾನು ದ್ವಿಶತಕ ಬಾರಿಸಿದ್ದರೆ ಮುಂದಿನ ವಿರಾಮ ಆಗಮಿಸಿ ಶ್ರೀಲಂಕಾ ಆಟಗಾರರು ಸುಧಾರಿಸಿಕೊಳ್ಳುತ್ತಿದ್ದರು, ಹೀಗಾಗಿ ದಣಿದಿದ್ದ ಅವರಿಗೆ ವಿಶ್ರಾಂತಿಯ ಅವಕಾಶ ನೀಡದೇ ಕೂಡಲೇ ಬ್ಯಾಟಿಂಗ್ ನೀಡಿದರೆ ಬೇಗನೇ ವಿಕೆಟ್ ಪಡೆಯಬಹುದು ಎಂಬುದು ರವೀಂದ್ರ ಜಡೇಜಾ ಅವರ ಮುಂದಾಲೋಚನೆಯಾಗಿತ್ತು ಹಾಗೂ ಇದೇ ಕಾರಣಕ್ಕೆ ಅವರು ಡಿಕ್ಲೇರ್ ತೆಗೆದುಕೊಳ್ಳುವ ಸಲಹೆಯನ್ನು ಸಲಹೆ ನೀಡಿದ್ದರು.

ರೋಹಿತ್ ದ್ವಿಶತಕ ಬಾರಿಸಿ ಎಂದಿದ್ದರು
ಇನ್ನೂ ಮುಂದುವರೆದು ಈ ಕುರಿತು ಮಾತನಾಡಿರುವ ರವೀಂದ್ರ ಜಡೇಜಾ ಕುಲ್ದೀಪ್ ಯಾದವ್ ಬ್ಯಾಟಿಂಗ್ ಮಾಡಲು ಬಂದಾಗ ರೋಹಿತ್ ಶರ್ಮಾ ಕುಲ್ದೀಪ್ ಮೂಲಕ ದ್ವಿಶತಕ ಪೂರೈಸು ಎಂಬ ಸಂದೇಶವನ್ನು ಕಳುಹಿಸಿದ್ದರು ಎಂದು ಹೇಳಿಕೆ ನೀಡಿ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಅವರ ವಿರುದ್ಧ ಮಾತನಾಡಿದವರ ಬಾಯಿ ಮುಚ್ಚಿಸಿದ್ದಾರೆ.

ಬೌಲಿಂಗ್ ವಿಭಾಗದಲ್ಲೂ ಜಡೇಜಾ ಅಬ್ಬರ
ಶ್ರೀಲಂಕಾ ವಿರುದ್ದದ ಈ ಪಂದ್ಯದ ಮೊದಲ ಇನ್ನಿಂಗ್ಸಿನಲ್ಲಿ ಅಜೇಯ 175 ರನ್ ಬಾರಿಸಿ ಅಬ್ಬರಿಸಿದ ರವೀಂದ್ರ ಜಡೇಜಾ ಬೌಲಿಂಗ್ ಮೂಲಕವೂ ಟೀಮ್ ಇಂಡಿಯಾ ಪಾಲಿನ ಹೀರೋ ಆಗಿದ್ದಾರೆ. 13 ಓವರ್ ಬೌಲಿಂಗ್ ಮಾಡಿರುವ ರವೀಂದ್ರ ಜಡೇಜಾ 4 ಓವರ್ ಮೇಡನ್ ಸಹಿತ 41 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದ್ದಾರೆ. ಈ ಮೂಲಕ ರವೀಂದ್ರ ಜಡೇಜಾ 5 ವಿಕೆಟ್ಗಳ ಗೊಂಚಲನ್ನು ಪಡೆದು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿಯೂ ಟೀಮ್ ಇಂಡಿಯಾಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಸದ್ಯ 400 ರನ್ಗಳ ಬೃಹತ್ ಹಿನ್ನಡೆಯನ್ನು ಅನುಭವಿಸಿರುವ ಶ್ರೀಲಂಕಾ ಫಾಲೋಆನ್ ನಿಯಮಕ್ಕೆ ಒಳಗಾಗಿ ಎರಡನೇ ಇನ್ನಿಂಗ್ಸ್ನಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದೆ.


Click it and Unblock the Notifications












