ಶನಿವಾರ, ಜುಲೈ 27ರಂದು ಪಲ್ಲೆಕೆಲೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಮೂರು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಭಾರತ ಮತ್ತು ಆತಿಥೇಯ ಶ್ರೀಲಂಕಾ ತಂಡಗಳು ಸೆಣಸಾಡಲು ಸಜ್ಜಾಗಿವೆ.
ಭಾರತ ಕ್ರಿಕೆಟ್ ತಂಡದ ಶ್ರೀಲಂಕಾ ಪ್ರವಾಸವು ಶನಿವಾರ ಟಿ20 ಪಂದ್ಯದೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳನ್ನು ಒಳಗೊಂಡಿದೆ.

ಸೂರ್ಯಕುಮಾರ್ ಯಾದವ್ ಟಿ20 ತಂಡದ ನಾಯಕನಾಗಿದ್ದರೆ, ರೋಹಿತ್ ಶರ್ಮಾ ಏಕದಿನ ತಂಡದ ನಾಯಕರಾಗಿ ಮುಂದುವರೆಯಲಿದ್ದಾರೆ. ಎರಡೂ ತಂಡಗಳಿಗೂ ಯುವ ಬ್ಯಾಟರ್ ಶುಭ್ಮನ್ ಗಿಲ್ ಉಪನಾಯಕರಾಗಿರುತ್ತಾರೆ.
ಇನ್ನು 2024ರ ಐಸಿಸಿ ಟಿ20 ವಿಶ್ವಕಪ್ ಗೆದ್ದ ನಂತರ, ರಾಹುಲ್ ದ್ರಾವಿಡ್ ತಮ್ಮ ಹುದ್ದೆಯಿಂದ ಕೆಳಗಿಳಿದ ಬಳಿಕ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರಿಗೆ ಭಾರತ ತಂಡದ ಮುಖ್ಯ ಕೋಚ್ ಆಗಿ ಇದು ಮೊದಲ ನಿಯೋಜನೆಯಾಗಿದೆ.

ಭಾರತ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅವರ ಮೊದಲ ಟಾಸ್ಕ್ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಮತ್ತು ಏಕದಿನ ಸರಣಿಯಾಗಿದೆ. ಮುಂದಿನ ವರ್ಷದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಮತ್ತು 2025ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆಯುವಲ್ಲಿ ಅವರಿಗೆ ಮತ್ತಷ್ಟು ಸವಾಲುಗಳು ಕಾದಿವೆ.
ಇನ್ನು ಟೀಮ್ ಇಂಡಿಯಾ 2024ರ ಟಿ20 ವಿಶ್ವಕಪ್ನಲ್ಲಿ ತಮ್ಮ ಅದ್ಭುತ ಗೆಲುವಿನ ನಂತರ, ಶ್ರೀಲಂಕಾ ವಿರುದ್ಧದ ಸರಣಿಗೆ ಚುಟುಕು ಸ್ವರೂಪದ ವಿಶ್ವ ಚಾಂಪಿಯನ್ ಪಟ್ಟದೊಂದಿಗೆ ಬರುತ್ತಿದೆ.
ಟಿ20 ವಿಶ್ವಕಪ್ ಗೆಲುವಿನ ಬಳಿಕ, ಶುಭ್ಮನ್ ಗಿಲ್ ನಾಯಕತ್ವದ ಭಾರತ ತಂಡವು ಜಿಂಬಾಬ್ವೆ ತಂಡವನ್ನು ಅವರದೇ ನೆಲದಲ್ಲಿ 4-1 ಅಂತರದಿಂದ 5 ಪಂದ್ಯಗಳ ಟಿ20 ಸರಣಿ ವಶಪಡಿಸಿಕೊಂಡಿತು. ಗಮನಾರ್ಹ ಚೊಚ್ಚಲ ನಾಯಕತ್ವದ ನಂತರ, ಯುವ ಆಟಗಾರ ಶುಭ್ಮನ್ ಗಿಲ್ ಅವರನ್ನು ತಂಡದ ಹೊಸ ಉಪನಾಯಕನಾಗಿ ನೇಮಿಸಲಾಯಿತು.
ನೂತನ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಮತ್ತು ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ನೇತೃತ್ವದಲ್ಲಿ ಭಾರತ ತಂಡವು ತಮ್ಮ ಆಡುವ 11ರ ಬಳಗದ ಆಯ್ಕೆಯನ್ನು ಹೇಗೆ ಸಂಯೋಜಿಸುತ್ತದೆ ಎಂಬುದನ್ನು ನೋಡಲು ಕುತೂಹಲಕಾರಿಯಾಗಿದೆ.
ಸ್ಥಳ ಮತ್ತು ದಿನಾಂಕ: ಭಾರತ vs ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯವು ಶನಿವಾರ, ಜುಲೈ 27ರಂದು ಪಲ್ಲೆಕೆಲೆಯ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದೆ.
ಮೊದಲ ಟಿ20 ಪಂದ್ಯದ ಸಮಯ: ಭಾರತ vs ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯವು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದೆ.
ಭಾರತ vs ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯವನ್ನು ಟಿವಿಯಲ್ಲಿ ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ನೇರಪ್ರಸಾರವಾಗಿ ವೀಕ್ಷಿಸಬಹುದಾಗಿದೆ. ಅಲ್ಲದೆ, Sonyliv ಅಪ್ಲಿಕೇಶನ್ನಲ್ಲಿ ಲೈವ್-ಸ್ಟ್ರೀಮ್ ಆಗಿ ನೋಡಬಹುದು.
ಶುಭ್ಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಅರ್ಶ್ದೀಪ್ ಸಿಂಗ್.
ಪಾಥುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಕಮಿಂದು ಮೆಂಡಿಸ್, ದಿನೇಶ್ ಚಾಂಡಿಮಲ್, ಚರಿತ್ ಅಸಲಂಕಾ (ನಾಯಕ), ವನಿಂದು ಹಸರಂಗ, ದಸುನ್ ಶನಕ, ಮಹೇಶ ತೀಕ್ಷಣ, ದಿಲ್ಶನ್ ಮಧುಶಂಕ, ಮಥೀಶ ಪತಿರಣ, ಅಸಿತ ಫೆರ್ನಾಂಡೋ.