ಸದ್ಯ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಆಡುತ್ತಿರುವ ಭಾರತ ಕ್ರಿಕೆಟ್ ತಂಡವು, ಈ ತಿಂಗಳ ಅಂತ್ಯದಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ಟಿ20 ವಿಶ್ವಕಪ್ ಗೆಲುವಿನ ನಂತರ ವಿಶ್ರಾಂತಿ ಪಡೆದಿರುವ ಹಲವು ಆಟಗಾರರು ತಂಡಕ್ಕೆ ಮರಳಲಿದ್ದಾರೆ.
ಇನ್ನು ಭಾರತ ತಂಡದ ಮುಂಬರುವ ಶ್ರೀಲಂಕಾ ಪ್ರವಾಸದ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, ವೈಟ್ಬಾಲ್ ಸರಣಿಯ ಆರಂಭವನ್ನು ಜುಲೈ 27ಕ್ಕೆ ಮುಂದೂಡಲಾಗಿದೆ ಎಂದು ಬಿಸಿಸಿಐ ಶನಿವಾರ, ಜುಲೈ 13ರಂದು ಅಧಿಕೃತಗೊಳಿಸಿದೆ.

ಮೂರು ಅಂತಾರಾಷ್ಟ್ರೀಯ ಟಿ20 ಪಂದ್ಯಗಳು ಮತ್ತು ಮೂರು ಏಕದಿನ ಪಂದ್ಯಗಳಿಗಾಗಿ ಭಾರತೀಯ ಕ್ರಿಕೆಟ್ ತಂಡವು ಈ ತಿಂಗಳ ಕೊನೆಯಲ್ಲಿ ದ್ವೀಪ ರಾಷ್ಟ್ರದ ಪ್ರವಾಸವನ್ನು ಕೈಗೊಳ್ಳಲಿದೆ. ಎರಡು ಸರಣಿಗಳಿಗೂ ಪ್ರತ್ಯೇಕ ತಂಡಗಳು ಮತ್ತು ನಾಯಕರನ್ನು ಘೋಷಿಸುವ ಸಾಧ್ಯತೆ ಇದೆ.
ಮೂಲತಃ ಮೊದಲ ಟಿ20 ಪಂದ್ಯವನ್ನು ಜುಲೈ 26ರಂದು ಆಡಬೇಕಿತ್ತು. ಆದರೆ ಅದು ಇದೀಗ ಜುಲೈ 27ರಂದು ನಡೆಯಲಿದೆ. ನಂತರ ಉಳಿದ ಎರಡು ಟಿ20 ಪಂದ್ಯಗಳನ್ನು ಜುಲೈ 28 ಮತ್ತು ಜುಲೈ 30ರಂದು ಆಡಲಾಗುತ್ತದೆ. ಎಲ್ಲ ಮೂರು ಟಿ20 ಪಂದ್ಯಗಳಿಗೆ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಆತಿಥ್ಯ ವಹಿಸಿದೆ. ಎಲ್ಲ ಟಿ20 ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಆರಂಭವಾಗಲಿವೆ.
ಈ ಮೊದಲು ಆಗಸ್ಟ್ 1ರಂದು ಪ್ರಾರಂಭವಾಗಬೇಕಿದ್ದ ಏಕದಿನ ಪಂದ್ಯಗಳು ಇದೀಗ ಆಗಸ್ಟ್ 2ರಂದು ಪ್ರಾರಂಭವಾಗಲಿವೆ. ನಂತರ ಉಳಿದ ಎರಡು ಪಂದ್ಯಗಳು ಆಗಸ್ಟ್ 4 ಮತ್ತು ಆಗಸ್ಟ್ 7ರಂದು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿವೆ. ಇದೇ ವೇಳೆ ಎಲ್ಲ ಮೂರು ಏಕದಿನ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 2.30ಕ್ಕೆ ಆರಂಭವಾಗಲಿವೆ.

ಇನ್ನು ಶ್ರೀಲಂಕಾ ಪ್ರವಾಸಕ್ಕಾಗಿ ಭಾರತ ತಂಡವನ್ನು ಇನ್ನೂ ಪ್ರಕಟಿಸಿಲ್ಲ. ಮುಂದಿನ ವಾರದ ಆರಂಭದಲ್ಲಿ ಭಾರತ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಮತ್ತು ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.
ಜುಲೈ 8ರಂದು ಪಿಟಿಐ ವರದಿ ಮಾಡಿದಂತೆ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಹಿರಿಯ ಆಟಗಾರರು ಈ ಪ್ರವಾಸದಿಂದ ವಿಶ್ರಾಂತಿ ಪಡೆಯಲು ಸಿದ್ಧರಾಗಿದ್ದಾರೆ. ಹೀಗಾಗಿ ಮತ್ತೊಮ್ಮೆ ಯುವ ತಂಡವನ್ನು ನಿರೀಕ್ಷಿಸಬಹುದು.
ಭಾರತ ತಂಡವು ಗೌತಮ್ ಗಂಭೀರ್ ಅವರಲ್ಲಿ ಹೊಸ ಮುಖ್ಯ ಕೋಚ್ ಅನ್ನು ಹೊಂದಿರುತ್ತದೆ. ಮೊತ್ತೊಂದೆಡೆ ಶ್ರೀಲಂಕಾ ತಂಡವು ಹಂಗಾಮಿ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವ ಸನತ್ ಜಯಸೂರ್ಯ ಅವರ ಚುಕ್ಕಾಣಿಯಲ್ಲಿ ಹೊಸ ವ್ಯಕ್ತಿಯನ್ನು ಹೊಂದಿರಲಿದೆ.