
ಭಾರತ ಹಾಗೂ ಶ್ರೀಲಂಕಾ ತಂಡಗಳು ಟಿ20 ಸರಣಿಯಲ್ಲಿ ಆಡಲು ಸಜ್ಜಾಗಿದೆ. ಮೂರು ಪಂದ್ಯಗಳ ಈ ಟಿ20 ಮಾದರಿಯ ಸರಣಿಯಲ್ಲಿ ಆಡಲು ಎರಡು ತಂಡಗಳು ಕೂಡ ಲಕ್ನೋಗೆ ಆಗಮಿಸಿದ್ದು ಅಂತಿಮ ಹಂತದ ಸಿದ್ಧತೆಯನ್ನು ನಡೆಸುತ್ತಿದೆ. ಈ ಸಂದರ್ಭದಲ್ಲಿ ಭಾರತೀಯ ತಂಡದ ಪಾಳಯಕ್ಕೆ ಹಿನ್ನಡೆಯೊಂದು ಉಂಟಾಗಿದೆ. ಟಿ20 ಸರಣಿಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದ ಪ್ರಮುಖ ಆಟಗಾರ ಗಾಯದಿಂದ ಹೊರಬಿದ್ದಿದ್ದಾರೆ.
ಗಾಯಗೊಂಡು ಶ್ರೀಲಂಕಾ ಸರಣಿಯಿಂದ ಹೊರಬಿದ್ದಿರುವ ಆಟಗಾರ ಭಾರತ ತಂಡದ ವೇಗದ ಬೌಲರ್ ದೀಪಕ್ ಚಾಹರ್. ಇತ್ತೀಚೆಷ್ಟೇ ಅಂತ್ಯವಾದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಭಾಗವಹಿಸಿದ್ದ ದೀಪಕ್ ಚಾಹರ್ ಸರಣಿಯ ಅಂತಿಮ ಪಂದ್ಯದಲ್ಲಿ ಗಾಯಕ್ಕೆ ಒಳಗಾಗಿದ್ದರು. ಇದೇ ಕಾರಣದಿಂದಾಗಿ ದೀಪಕ್ ಚಾಹರ್ ಶ್ರೀಲಂಕಾ ವಿರುದ್ಧದ ಸರಣಿಯತಿಂದಲೂ ಸಂಪೂರ್ಣವಾಗಿ ಹೊರಗುಳಿದಿದ್ದಾರೆ.
ಬಿಸಿಸಿಐ ಅಧಿಕಾರಿಗಳು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ದೀಪಕ್ ಚಾಹರ್ ಹೊರಬಿದ್ದಿದ್ದು ಬೆಂಗಳೂರಿನ ಎನ್ಸಿಎನಲ್ಲಿ ರಿಹ್ಯಾಬ್ ಪ್ರಕ್ರಿಯೆಗೆ ಒಳಗಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ದೀಪಕ್ ಚಾಹರ್ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದಾರೆ.
ಇನ್ನು ದೀಪಕ್ ಚಾಹರ್ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದ ಕಾರಣ ಬದಲಿ ಆಟಗಾರನಾಗಿ ಯಾರನ್ನೂ ಹೆಸರಿಸಲಾಗಿಲ್ಲ. ಉಪ ನಾಯಕನಾಗಿ ಈ ಸರಣಿಯಲ್ಲಿ ಜಸ್ಪ್ರೀತ್ ಬೂಮ್ರಾ ಕಮ್ಬ್ಯಾಕ್ ಮಾಡಿದ್ದು ಹೀಗಾಗಿ ಬದಲಿ ಆಟಗಾರನನ್ನು ಸೇರ್ಪಡೆಗೊಳಿಸುವ ಸಾಧ್ಯತೆಯಿಲ್ಲ ಎನ್ನಲಾಗಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿ ಮುಂದಿನ ಗುರುವಾರ ಆರಂಭವಾಗಲಿದೆ.
ಇನ್ನು ದೀಪಕ್ ಚಾಹರ್ ಮಂಡಿರಜ್ಜು ಗಾಯಕ್ಕೆ ಒಳಗಾಗಿರುವ ಕಾರಣ ಐಪಿಎಲ್ನಲ್ಲಿಯೂ ಭಾಗವಹಿಸುವ ಬಗ್ಗೆ ಯಾವುದೇ ಸ್ಪಷ್ಟನೆಗಳು ದೊರೆತಿಲ್ಲ. ಐಪಿಎಲ್ ಟೂರ್ನಿ ಮಾರ್ಚ್ ಕೊನೇಯ ವಾರದಲ್ಲಿ ಆರಂಭವಾಗುವ ನಿರೀಕ್ಷೆಯಿದ್ದು ಆ ಸಂದರ್ಭದಲ್ಲಿ ದೀಪಕ್ ಚಾಹರ್ ಆಡಲು ಸಜ್ಜಾಗಲಿದ್ದಾರೆಯೇ ಎಂಬುದು ಕೂಡ ಕುತೂಹಲ ಮೂಡಿಸಿದೆ.
ಈ ಬಾತಿಯ ಐಪಿಎಲ್ನಲ್ಲಿ ದೀಪಕ್ ಚಾಹರ್ ಭಾರೀ ಮೊತ್ತಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದರು. ಈ ಹಿಂದಿನ ಬಾರಿಯೂ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡಿದ್ದ ಚಾಹರ್ ಅವರನ್ನು ಕೊಂಡುಕೊಳ್ಳಲು ಸಾಕಷ್ಟು ಪೈಪೋಟಿ ನಡೆಸಿದ್ದ ಸಿಎಸ್ಕೆ 14 ಕೋಟಿ ನೀಡಿ ಮರಳಿ ತಂಡಕ್ಕೆ ಸೇರ್ಪಡೆಗೊಳಿಸಿದೆ. ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್ನಲ್ಲಿಯೂ ಕೊಡುಗೆ ನೀಡುವ ಸಾಮರ್ಥ್ಯಹೊಂದಿರುವ ದೀಪಕ್ ಚಾಹರ್ ವೈಟ್ ಬಾಲ್ ಕ್ರಿಕೆಟ್ಗೆ ಹೇಳಿ ಮಾಡಿಸಿದ ಕ್ರಿಕೆಟಿಗ.
ಭಾರತ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಸಂಜು ಸ್ಯಾಮ್ಸನ್, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅವೇಶ್ ಖಾನ್