
ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯಕ್ಕಾಗಿ ಟೀಂ ಇಂಡಿಯಾ ಇಂದು ಅಂತಿಮ ಸಿದ್ಧತೆ ನಡೆಸಲಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತೀಯ ಯುವ ಪಡೆ ಅಭ್ಯಾಸ ನಡೆಸಲಿದೆ.
ಬೆಳಿಗ್ಗೆ ಐಚ್ಛಿಕ ತರಬೇತಿ ಅವಧಿ ಇದ್ದು, ಮಧ್ಯಾಹ್ನ ಕಡ್ಡಾಯ ತರಬೇತಿ ಸೆಷನ್ ಇರುತ್ತದೆ. 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಜನವರಿ 3, ಮಂಗಳವಾರದಂದು ಸಂಜೆ 7 ಗಂಟೆಗೆ ಆರಂಭವಾಗಲಿದೆ.
ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಹಲವು ಯುವ ಆಟಗಾರರು ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಹಾರ್ದಿಕ್ ಪಾಂಡ್ಯ ಟಿ20 ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ರಿಷಬ್ ಪಂತ್ ಕೂಡ ಈ ಸರಣಿಗೆ ಆಯ್ಕೆಯಾಗಿರಲಿಲ್ಲ, ಇಶಾನ್ ಕಿಶನ್ ಅಥವಾ ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಆಗಿ ಕರ್ತವ್ಯ ನಿಭಾಯಿಸಲಿದ್ದಾರೆ.
ಬಾಂಗ್ಲಾದೇಶದ ವಿರುದ್ದದ ಏಕದಿನ ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದ ಸೂರ್ಯಕುಮಾರ್ ಯಾದವ್ ಮತ್ತೆ ಟಿ20 ಸರಣಿಗಾಗಿ ತಂಡಕ್ಕೆ ಮರಳಿದ್ದಾರೆ. 2022ರಲ್ಲಿ ಅತ್ಯುತ್ತಮ ಫಾರ್ಮ್ ಹೊಂದಿದ್ದ ಸೂರ್ಯಕುಮಾರ್ ಅದೇ ಪ್ರದರ್ಶನವನ್ನು ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ.

ಏಷ್ಯಾಕಪ್ ಚಾಂಪಿಯನ್ನರಿಗೆ ಯುವ ಪಡೆ ಸವಾಲು
ಏಷ್ಯಾಕಪ್ 2022ರಲ್ಲಿ ಪ್ರಮುಖ ಆಟಗಾರರು ಇದ್ದ ಭಾರತ ತಂಡವನ್ನೇ ಸೋಲಿಸಿದ್ದ ಶ್ರೀಲಂಕಾ ಫೈನಲ್ನಲ್ಲಿ ಪಾಕಿಸ್ತಾನವನ್ನು ಮಣಿಸಿ ಚಾಂಪಿಯನ್ ಆಗಿತ್ತು. ಏಷ್ಯಾಕಪ್ನಲ್ಲಿ ನೀಡಿದ ಪ್ರದರ್ಶನವನ್ನು ಭಾರತದ ವಿರುದ್ದದ ಸರಣಿಯಲ್ಲಿ ಮುಂದುವರೆಸುವ ಯೋಜನೆಯಲ್ಲಿದೆ.
ವನಿಂದು ಹಸರಂಗ, ಮಹೇಶ್ ತೀಕ್ಷಣ ಶ್ರೀಲಂಕಾದ ಪ್ರಮುಖ ಸ್ಪಿನ್ ಬೌಲರ್ ಆಗಿದ್ದಾರೆ. ಭಾನುಕಾ ರಾಜಪಕ್ಸೆ, ದಸುನ್ ಶನಕ, ಕುಸಲ್ ಮೆಂಡಿಸ್, ಚಮಿಕಾ ಕರುಣರತ್ನೆ ಬ್ಯಾಟಿಂಗ್ ವಿಭಾಗದಲ್ಲಿ ಶಕ್ತಿಯಾಗಿದ್ದಾರೆ.
ಬಲಿಷ್ಠವಾಗಿದೆ ಟೀಂ ಇಂಡಿಯಾ
ಹಿರಿಯ ಕ್ರಿಕೆಟಿಗರ ಅನುಪಸ್ಥಿತಿಯ ನಡುವೆಯೂ ಟೀಂ ಇಂಡಿಯಾ ಬಲಿಷ್ಠವಾಗಿದೆ. ಉಮ್ರಾನ್ ಮಲಿಕ್, ಶಿವಂ ಮಾವಿ, ಅರ್ಷದೀಪ್ ಸಿಂಗ್ರಂತ ವೇಗಿಗಳು ತಂಡದಲ್ಲಿದ್ದಾರೆ. ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ.
ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಅರ್ಶದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಖೇಶ್ ಕುಮಾರ್.