
2022ರಲ್ಲಿ ಟೀಮ್ ಇಂಡಿಯಾದಲ್ಲಿ ಅದ್ಭುತ ಪ್ರದರ್ಶನ ನೀಡಿ ಅಭಿಮಾನಿಗಳನ್ನು ಮನರಂಜಿಸಿದ ಇಬ್ಬರು ಆಟಗಾರರು ಎಂದರೆ ಅದು ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್. ಟೀಮ್ ಇಂಡಿಯಾದಿಂದ ಹೇಳಿಕೊಳ್ಳುವಂತಾ ಮಹತ್ವದ ಫಲಿತಾಂಶಗಳು ದೊಡ್ಡ ವೇದಿಕೆಯಲ್ಲಿ ಬಾರದಿದ್ದರೂ ಈ ಇಬ್ಬರು ಆಟಗಾರರು ಅಭಿಮಾನಿಗಳ ಹೃದಯ ಗೆದ್ದಿದ್ದರು. ಇದೀಗ ಈ ಜೋಡಿ ಭಾರತೀಯ ತಂಡದಲ್ಲಿ ಹೊಸ ಜವಾಬ್ಧಾರಿಯನ್ನು 2023ರ ಮೊದಲ ಸರಣಿಯಲ್ಲಿ ವಹಿಸಿಕೊಂಡಿರುವುದು ಕುತೂಹಲ ಮೂಡಿಸಿದೆ.
ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾವನ್ನು ಮುನ್ನಡೆಸಿದರೆ ಸೂರ್ಯಕುಮಾರ್ ಯಾದವ್ ಉಪನಾಯಕನ ಜವಾಬ್ಧಾರಿ ಹೊರಲಿದ್ದಾರೆ. ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಪಂದ್ಯ ಮಂಗಳವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ಟೀಮ್ ಇಂಡಿಯಾ ಹಲವಯ ಪ್ರಮುಖ ಆಟಗಾರರನ್ನು ಹೊರಗಿಟ್ಟು ಈ ಸರಣಿಯಲ್ಲಿ ಕಣಕ್ಕಿಳಿಯುತ್ತಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಭುವನೇಶ್ವರ್ ಕುಮಾರ್ ಸೇರಿದಂತೆ ಹಲವು ಆಟಗಾರರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಈ ಮೂಲಕ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ವಿಶೇಷ ವೇದಿಕೆ ದೊರೆತಿದೆ. ಈ ಅವಕಾಶವನ್ನು ಯಾವೆಲ್ಲಾ ಆಟಗಾರರು ಬಳಸಿಕೊಳ್ಳಳಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಪೋಟಕ ಪ್ರದರ್ಶನ ನೀಡಿದ್ದ ಇಶಾನ್ ಕಿಶನ್ ಈ ಸರಣಿಯಲ್ಲಿಯೂ ಆರಂಭಿಕನಾಗಿ ಕಣಕ್ಕಿಳಿದು ಮಿಂಚುವ ವಿಶ್ವಾಸ ಮೂಡಿಸಿದ್ದಾರೆ. ಶುಬ್ಮನ್ ಗಿಲ್ ಈ ಪಂದ್ಯದ ಮೂಲಕ ಚುಟುಕು ಮಾದರಿಗೆ ಪದಾರ್ಪಣೆ ಮಾಡುವ ಸಾಧ್ಯತೆಯಿದೆ.
ಶ್ರೀಲಂಕಾ ಸ್ಕ್ವಾಡ್: ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ದಸುನ್ ಶನಕ (ನಾಯಕ), ಪಾತುಮ್ ನಿಸ್ಸಾಂಕ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ವನಿಂದು ಹಸರಂಗ, ಚಾಮಿಕ ಕರುಣಾರತ್ನ, ಮಹೇಶ್ ತೀಕ್ಷಣ, ದಿಲ್ಶನ್ ಮಧುಶಂಕ, ಲಹಿರು ಕುಮಾರ, ಅವಿಷ್ಕ ಫೆರ್ನಾಂಡೋ, ಅಶೇನ್ ಬಂಡಾರ, ಪ್ರಮೋದ್ ಮದುಶನ್, ದುನಿತ್ ವೆಲ್ಲಲಾಗೆ, ನುವಾನ್ ತುಷಾರ, ಕಸುನ್ ರಜಿತ, ಸದೀರ ಸಮರವಿಕ್ರಮ
ಟೀಮ್ ಇಂಡಿಯಾ ಸ್ಕ್ವಾಡ್: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ರಾಹುಲ್ ತ್ರಿಪಾಠಿ, ಮುಖೇಶ್ ಕುಮಾರ್, ಶುಬ್ಮನ್ ಗಿಲ್, ಶಿವಂ ಮಾವಿ