
ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಗುರುವಾರ ಲಕ್ನೋದಲ್ಲಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಭಾರತ ಹಾಗೂ ಶ್ರೀಲಂಕಾ ಎರಡೂ ತಂಡಗಳು ಕೂಡ ಈಗಾಗಲೇ ಲಕ್ನೋಗೆ ಬಂದಿಳಿದಿದೆ. ಭಾರತ ತಂಡ ಸೋಮವಾರ ಲಕ್ನೋ ತಲುಪಿದ್ದರೆ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಶ್ರೀಲಂಕಾ ಮಂಗಳವಾರ ಬೆಳಿಗ್ಗೆ ಬಂದಿಳಿದಿದೆ.
ಇನ್ನು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಮಂಗಳವಾರ ನೆಟ್ ಅಭ್ಯಾಸವನ್ನು ಆರಂಭಿಸಿದೆ. ಲಕ್ನೋದ ಏಕಾನ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಆಟಗಾರರು ಶ್ರೀಲಂಕಾ ವಿರುದ್ಧಧ ಮೂರು ಪಂದ್ಯಗಳ ಟಿ20 ಸರಣಿಗಾಗಿ ಮಂಗಳವಾರ ಬೆವರಿಳಿಸಿದ್ದಾರೆ. ಮೊದಲ ಪಂದ್ಯಕ್ಕಾಗಿ ಅಭ್ಯಾಸ ನಡೆಸಿದ ಕೆಲ ಚಿತ್ರಗಳನ್ನು ಬಿಸಿಸಿಐ ತನ್ನ ಅಧಿಕರತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದೆ.
ಇನ್ನು ಈ ಫೋಟೋದಲ್ಲಿ ನಾಯಕ ರೋಹಿತ್ ಶರ್ಮಾ, ಗಾಯದಿಂದ ತಂಡಕ್ಕೆ ವಾಪಾಸಾಗಿರುವ ರವೀಂದ್ರ ಜಡೇಜಾ, ಶ್ರೇಯಸ್ ಐಯ್ಯರ್ ಹಾಗೂ ಇಶಾನ್ ಕಿಶನ್ ಬ್ಯಾಟಿಂಗ್ ಅಭ್ಯಾಸದಲ್ಲಿ ತೊಡಗಿರುವ ಚಿತ್ರಗಳಿವೆ. ಇನ್ನು ಮತ್ತೊಂದು ಚಿತ್ರದಲ್ಲಿ ಆಟಗಾರರನ್ನು ಒಗ್ಗೂಡಿಸಿ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನ ನೀಡುತ್ತಿರುವ ಚಿತ್ರವಿದೆ.
ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನಿಡಿ ಮಿಂಚಿರುವ ವೆಂಕಟೇಶ್ ಐಯ್ಯರ್ ಶ್ರೀಲಂಕಾ ವಿರುದ್ಧದ ಸರಣಿಗಾಗಿ ಬೌಲಿಂಗ್ ಅಭ್ಯಾಸದಲ್ಲಿ ತೊಡಗಿರುವುದು ಕಂಡುಬಂದಿದೆ. ಇನ್ನು ಉತ್ತರ ಪ್ರದೇಶ ಮೂಲದವರಾದ ಕುಲ್ದೀಪ್ ಯಾದವ್ ತವರು ಅಂಗಳದಲ್ಲಿ ಅವಕಾಶ ದೊರೆತರೆ ಮಿಂಚುವ ವಿಶ್ವಾಸದಲ್ಲಿದ್ದು ಅದಕ್ಕಾಗಿ ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ವೇಗಿಗಳಾದ ಭವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬೂಮ್ರಾ ಕೂಡ ಬೌಲಿಂಗ್ ಅಭ್ಯಾಸ ನಡೆಸಿ ಬೆವರಿಳಿಸಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಅಂತ್ಯವಾಗಿರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ವೈಟ್ವಾಶ್ ಮಾಡುವ ಮೂಲಕ ಸರಣಿಯನ್ನು ವಶಕ್ಕೆ ಪಡೆದ ಉತ್ಸಾಹದಲ್ಲಿದೆ. ಇದೀಗ ಶ್ರೀಲಂಕಾ ಪಡೆಯನ್ನು ರೋಹಿತ್ ಪಡೆ ಎದುರಿಸಲು ಸಂಪೂರ್ಣವಾಗಿ ಸಜ್ಜಾಗಿದೆ. ಮೊದಲಿಗೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದ್ದು ಮೊದಲ ಪಂದ್ಯ ಗುರುವಾರ ಲಕ್ನೋದ ಏಕಾನ ಕ್ರೀಡಾಂಗಣದಲ್ಲಿ ನಡೆಯಲಿದೆ. ನಂತರ ಶನಿವಾರ ಹಾಗೂ ಭಾನುವಾರ ಧರ್ಮಶಾಲಾದಲ್ಲಿ ಅಂತಿಮ ಎರಡು ಟಿ20 ಪಂದ್ಯಗಳು ನಡೆಯಲಿದೆ. ಇನ್ನು ಈ ಟಿ20 ಸರಣಿಯಿಂದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ರಿಷಬ್ ಪಂತ್ಗೆ ವಿಶ್ರಾಂತಿ ನೀಡಲಾಗಿದ್ದು ವೇಗಿ ದೀಪಕ್ ಚಾಹರ್ ಗಾಯಗೊಂಡು ಹೊರಬಿದ್ದಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಪಂತ್ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಭಾರತ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಸಂಜು ಸ್ಯಾಮ್ಸನ್, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅವೇಶ್ ಖಾನ್
ಶ್ರೀಲಂಕಾ ಸ್ಕ್ವಾಡ್: ದಸುನ್ ಶನಕಾ (ನಾಯಕ), ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಚರಿತ್ ಅಸಲಂಕ (ಉಪನಾಯಕ), ದಿನೇಶ್ ಚಾಂಡಿಮಾಲ್, ದನುಷ್ಕ ಗುಣತಿಲಕ, ಕಮಿಲ್ ಮಿಶ್ರಾ, ಜನಿತ್ ಲಿಯಾನಗೆ, ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಲಹಿರು ಎಫ್ ಕುಮಾರ, ದುಷ್ಮಂತ ಚಮೀರ, ಲಹಿರು ಎಫ್ ಕುಮಾರ, ಮಹೇಶ್ ತೀಕ್ಷಣ, ಜೆಫ್ರಿ ವಾಂಡರ್ಸೆ, ಪ್ರವೀಣ್ ಜಯವಿಕ್ರಮ, ಆಶಿಯನ್ ಡೇನಿಯಲ್