
ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಗೆ ಇನ್ನು ಕೇವಲ ಮೂರು ದಿನಗಳು ಮಾತ್ರವೇ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಉತ್ತರ ಪ್ರವೇಶದ ಲಕ್ನೋ ನಗರಕ್ಕೆ ಮಂಗಳವಾರ ಬಂದಿಳಿದಿದೆ. ಭಾರತ ತಂಡ ಆಗಮಿಸಿದ ಒಂದು ದಿನದ ಬಳಿಕ ಲಂಕಾ ಪಡೆ ಕೂಡ ಆಗಮಿಸಿದ್ದು ಟಿ20 ಸರಣಿಗೆ ಸಿದ್ಧತೆ ನಡೆಸಲಿದೆ.
ಶ್ರೀಲಂಕಾ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡು ಟಿ20 ಸರಣಿಯಲ್ಲಿ ಭಾಗಿಯಾಗಿತ್ತು. ಕಳೆದ ಭಾನುವಾರ ಟಿ20 ಸರಣಿಯ ಅಂತಿಮ ಪಂದ್ಯವನ್ನು ಆಡಿದ್ದ ಶ್ರೀಲಂಕಾ ಇದೀಗ ಭಾರತಕ್ಕೆ ಆಗಮಿಸಿದೆ. ಬಯೋಬಬಲ್ನಿಂದ ಬಯೋಬಬಲ್ಗೆ ಹಸ್ತಾಂತರವಾಗುತ್ತಿರುವ ಕಾರಣದಿಂದಾಗಿ ಶ್ರೀಲಂಕಾ ಆಟಗಾರರು ಕ್ವಾರಂಟೈನ್ಗೆ ಒಳಗಾಗುವ ಅಗತ್ಯವಿಲ್ಲ. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಶ್ರೀಲಂಕಾ ಆಟಗಾರರು ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಲಕ್ನೋ ತಲುಪಿದ್ದಾರೆ. ಹೋಟೆಲ್ ತಾಜ್ ಹಾಗೂ ಹಯತ್ನಲ್ಲಿ ಲಂಕಾ ಆಟಗಾರರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.
ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯನ್ನು 1-4 ಅಂತರದಿಂದ ಕಳೆದುಕೊಂಡ ನಂತರ ಭಾರತದ ವಿರುದ್ಧ ಮೇಲುಗೈ ಸಾಧಿಸಿ ತಿರುಗೇಟು ನೀಡುವ ಪ್ರಯತ್ನದಲ್ಲಿದೆ ಶ್ರೀಲಂಕಾ ತಂಡ. ಅದರಲ್ಲೂ ಆಸಿಸ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ಗೆಲುವು ಸಾಧಿಸಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು ಈ ಗೆಲುವಿನ ಲಯವನ್ನು ಮುಂದುವರಿಸುವ ವಿಶ್ವಾಸದಲ್ಲಿದೆ ಶನಕಾ ಬಳಗ. ಇನ್ನು ಈ ಬಾರಿಯ ಐಪಿಎಲ್ನಲ್ಲಿ ಲಂಕಾದ ಕೆಲ ಪ್ರಮುಖ ಆಟಗಾರರು ಹರಾಜಾಗಿದ್ದು ಭಾರತದ ನೆಲದಲ್ಲಿ ಉತ್ತಮ ಪ್ರದರ್ಶನ ನೀಡುವ ಅವಕಾಶವನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ. ವನಿಂದು ಹಸರಂಗಾ, ಮಹೇಶ್ ತೀಕ್ಷಣ ಸೇರಿದಂತೆ ಕೆಲ ಆಟಗಾರರು ಐಪಿಎಲ್ಗೆ ಆಯ್ಕೆಯಾಗಿದ್ದಾರೆ.
ಶ್ರೀಲಂಕಾ ವಿರುದ್ಧ ಮೊದಲಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಪ್ರವಾಸ ಆರಂಭವಾಗಬೇಕಿತ್ತು. ಆದರೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದ್ದು ಮೊದಲಿಗೆ ಟಿ20 ಸರಣಿ ನಡೆಯಲಿದೆ. ಮೊದಲ ಪಂದ್ಯ ಫೆಬ್ರವರಿ 24 ಗುರುವಾರ ಲಕ್ನೋದ ಏಕಾನ ಸ್ಟೇಡಿಯಂನಲ್ಲಿ ನಡೆದರೆ ಎರಡನೇ ಮತ್ತು ಮೈರನೇ ಪಂದ್ಯ ಧರ್ಮಶಾಲಾದಲ್ಲಿ ಪೆಬ್ರವರಿ 26 ಹಾಗೂ 27ರಂದು ಆಯೋಜನೆಯಾಗಲಿದೆ.
ಟಿ20 ಸರಣಿಯ ಬಳಿಕ ಭಾರತ ಹಾಗೂ ಶ್ರೀಲಂಕಾ ತಂಡಗಳು ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿದ್ದು ಎರಡು ಪಂದ್ಯಗಳ ಸರಣಿ ಇದಾಗಿದೆ. ಇದು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2021-23ರ ಭಾಗವಾಗಿದೆ. ಮೊಹಾಲಿಯಲ್ಲಿ ಮೊದಲ ಟೆಸ್ಟ್ ಪಂದ್ಯ ಮಾರ್ಚ್ 4-8ರವರೆಗೆ ನಡೆಯಲಿದ್ದು ಎರಡನೇ ಪಂದ್ಯ ಬೆಂಗಳೂರಿನಲ್ಲಿ ಮಾರ್ಚ್ 12-16ರ ವರೆಗೆ ನಡೆಯಲಿದೆ. ಈ ಪಂದ್ಯ ಅಹರ್ನಿಶಿಯಾಗಿ ನಡೆಯಲಿದೆ.
ಶ್ರೀಲಂಕಾ ಸ್ಕ್ವಾಡ್: ದಸುನ್ ಶನಕಾ (ನಾಯಕ), ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಚರಿತ್ ಅಸಲಂಕ (ಉಪನಾಯಕ), ದಿನೇಶ್ ಚಾಂಡಿಮಾಲ್, ದನುಷ್ಕ ಗುಣತಿಲಕ, ಕಮಿಲ್ ಮಿಶ್ರಾ, ಜನಿತ್ ಲಿಯಾನಗೆ, ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಲಹಿರು ಎಫ್ ಕುಮಾರ, ದುಷ್ಮಂತ ಚಮೀರ, ಲಹಿರು ಎಫ್ ಕುಮಾರ, ಮಹೇಶ್ ತೀಕ್ಷಣ, ಜೆಫ್ರಿ ವಾಂಡರ್ಸೆ, ಪ್ರವೀಣ್ ಜಯವಿಕ್ರಮ, ಆಶಿಯನ್ ಡೇನಿಯಲ್
ಭಾರತ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ದೀಪಕ್ ಚಾಹರ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಸಂಜು ಸ್ಯಾಮ್ಸನ್, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅವೇಶ್ ಖಾನ್