
ಅಂತಿಮ 2 ಪಂದ್ಯಗಳಿಂದ ರೋಹಿತ್ ಹೊರಗುಳಿಯಲಿ
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಗಾಯಗೊಂಡಿರುವ ಕಾರಣ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಎರಡು ಪಂದ್ಯಗಳಿಂದ ವಿಶ್ರಾಂತಿ ಪಡೆಯಲಿ ಎಂದು ಮಾಜಿ ಕ್ರಿಕೆಟಿಗ ದಾನಿಶ್ ಕನೆರಿಯಾ ಸಲಹೆ ನೀಡಿದ್ದಾರೆ. ಮುಂಬರುವ ಕೆಲ ತಿಂಗಳುಗಳು ಭಾರತ ತಂಡಕ್ಕೆ ಬಹಳ ಪ್ರಮುಖವಾಗಿರುವ ಕಾರಣ ರೋಹಿತ್ ಶರ್ಮಾ ಸಂಪೂರ್ಣ ಫಿಟ್ನೆಸ್ ಪಡೆಯುವುದು ತಂಡದ ದೃಷ್ಟಿಯಿಂದ ಮುಖ್ಯವಾಗಿದೆ. ಈ ಸಂದರ್ಭದಲ್ಲಿ ನೋವು ಉಲ್ಬಣವಾಗದಂತೆ ತಡೆಯಲು ರೋಹಿತ್ ಶರ್ಮಾ ವಿಂಡೀಸ್ ವಿರುದ್ಧದ ಕೊನೆಯ ಎರಡು ಪಂದ್ಯಗಳಲ್ಲಿ ಆಡದೆ ಉಳಿಯುವುದು ಉತ್ತಮ ಎಂದಿದ್ದಾರೆ ದಾನಿಶ್ ಕನೆರಿಯಾ.

ನಾಯಕತ್ವಕ್ಕೆ ಸಾಕಷ್ಟು ಆಯ್ಕೆಗಳಿದೆ
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ದಾನಿಶ್ ಕನೆರಿಯಾ "ಆಟಗಾರನಾಗಿ ಅವರು ನೋವು ಅನುಭವಿಸಿದ್ದನ್ನು ನಾನು ನೋಡಿದ್ದೇನೆ. ಅವರು ತಮ್ಮ ಫಿಟ್ನೆಸ್ನ ಮೇಲೆ ಹೆಚ್ಚು ಆದ್ಯತೆಯನ್ನು ನೀಡಬೇಕು. ಅವರಿಗೆ ಅಗತ್ಯವಿದ್ದರೆ ಮುಂದಿನ ಎರಡು ಪಂದ್ಯಗಳಿಂದಲೂ ವಿಶ್ರಾಂತಿ ಪಡೆಯಲಿ. ಏಷ್ಯಾ ಕಪ್ ಹಾಗೂ ಟಿ20 ವಿಶ್ವಕಪ್ಗೆ ಭಾರತಕ್ಕೆ ರೋಹಿತ್ ಶರ್ಮಾ ಅಗತ್ಯವಿದ್ದಾರೆ, ಅವರಿಗೆ ವಿಶ್ರಾಂತಿ ನೀಡಿದರೂ ಮುಂದಿನ ಎರಡು ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಲು ಶ್ರೇಯಸ್, ಸಂಜು ಸ್ಯಾಮ್ಸನ್, ರಿಷಬ್ ಪಂತ್ ಮೊದಲಾದ ಆಟಗಾರರಿದ್ದಾರೆ" ಎಂದಿದ್ದಾರೆ ದಾನಿಶ್ ಕನೆರಿಯಾ.

ಸೂರ್ಯಕುಮಾರ್ ಯಾದವ್ ಬಗ್ಗೆ ಪ್ರಶಂಸೆ
ಇನ್ನು ರೋಹಿತ್ ಶರ್ಮಾ ನಿರ್ಗಮನದ ಬಳಿಕ ಸೂರ್ಯಕುಮಾರ್ ಯಾದವ್ ಅದ್ಭುತ ಪ್ರದರ್ಶನ ನಿಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. 44 ಎಸೆತಗಳಲ್ಲಿ 76 ರನ್ಗಳನ್ನು ಬಾರಿಸಿದ ಸೂರ್ಯಕುಮಾರ್ ಯಾದವ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಈ ಸಂದರ್ಭದಲ್ಲಿ ಸೂರ್ಯಕುಮಾರ್ ಯಾದವ್ ಅವರ ಹೊಡೆತಗಳ ಬಗ್ಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಆತನೋರ್ವ ಅದ್ಭುತವಾದ ಆಟಗಾರ ಎಂಬುದು ನಮಗೆಲ್ಲಾ ತಿಳಿದಿದೆ. ಆದರೆ ಮಾಡರ್ನ್ ಕ್ರಿಕೆಟ್ನಲ್ಲಿ ಅವರಂತೆ ಅದ್ಭುತವಾದ ಫ್ಲಿಕ್ ಹೊಡೆತಗಳನ್ನು ಬಾರಿಸುವ ಆಟಗಾರ ಯಾರೂ ಇಲ್ಲ. ನಿಜಕ್ಕೂ ಅಮೋಘ" ಎಂದಿದ್ದಾರೆ ದಾನಿಶ್ ಕನೆರಿಯಾ.

ಸರಣಿಯಲ್ಲಿ ಮುನ್ನಡೆ ಸಾಧಿಸಿರುವ ಭಾರತ
ಇನ್ನು ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಈಗ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಟೀಮ್ ಇಂಡಿಯಾ ಎರಡನೇ ಪಂದ್ಯದಲ್ಲಿ ರೋಚಕ ಸೆಣೆಸಾಟದ ಬಳಿಕ ಸೋಲು ಅನುಭವಿಸಿತ್ತು. ಆದರೆ ಮೂರನೇ ಪಂದ್ಯದಲ್ಲಿ ಭಾರತ ತಂಡ ಎದುರಾಳಿಗೆ ಯಾವುದೇ ಅವಕಾಶ ನೀಡದಂತೆ ಅದ್ಭುತ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆಯಲ್ಲಿದೆ.


Click it and Unblock the Notifications
