ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾದ ಅನುಭವಿ ಬ್ಯಾಟರ್ ಅಜಿಂಕ್ಯಾ ರಹಾನೆ ವೈಫಲ್ಯ ಅನುಭವಿಸಿದರು. ಫೋರ್ಟ್ ಬ್ಲೇರ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಅಜಿಂಕ್ಯಾ ರಹಾನೆ ಕೇವಲ ಒಂದು 8 ರನ್ಗಳನ್ನು ಮಾತ್ರ ಗಳಿಸಿ ವಿಕೆಟ್ ಕಳೆದುಕೊಂಡರು. ಇನ್ನು ಈ ಸರಣಿಯ ಮೊದಲ ಪಂದ್ಯದಲ್ಲಿಯೂ ರಹಾನೆ ವಿಫಲವಾಗಿದ್ದು 3 ರನ್ಗೆ ವಿಕೆಡ್ ಕಳೆದುಕೊಂಡಿದ್ದರು.
ಇದೀಗ ಅನುಭವಿ ಆಟಗಾರನ ವಿಚಾರಬಾಗಿ ಮಾಜಿ ಕ್ರಿಕೆಟಿಗ ದೀಪ್ ದಾಸ್ ಗುಪ್ತ ಪ್ರತಿಕ್ರಿಯೆ ನೀಡಿದ್ದು ಆಯ್ಕೆ ಮಂಡಳಿ ಅಜಿಂಕ್ಯಾ ರಹಾನೆ ಅವರಿಂದ ಏನನ್ನು ನಿರೀಕ್ಷೆ ಮಾಡಬೇಕು ಎಂಬುದನ್ನು ಮೊದಲಿಗೆ ಕಂಡುಕೊಳ್ಳಬೇಕು ಎಂದಿದ್ದಾರೆ. ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಿದ ಬಳಿಕ ರಹಾನೆಗೆ ಉಪನಾಯಕನ ಜವಾಬ್ಧಾರಿಯನ್ನು ಕೂಡ ನೀಡಲಾಗಿದೆ.

ಒಂದು ವರ್ಷಕ್ಕೂ ಅಧಿಕ ಕಾಲದಿಂದ ಟೀಮ್ ಇಂಡಿಯಾ ತಂಡದಿಂದ ಹೊರಬಿದ್ದಿದ್ದ ಅಜಿಂಕ್ಯಾ ರಹಾನೆ ದೇಶೀಯ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಶ್ರೇಯಸ್ ಐಯ್ಯರ್ ಗಾಯಗೊಂಡಿದ್ದ ಕಾರಣ ಟೀಮ್ ಇಂಡಿಯಾದಲ್ಲಿ ಮತ್ತೆ ಸ್ಥಾನವನ್ನು ಪಡೆದುಕೊಂಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ರಹಾನೆ ಭಾರತ ಪರವಾಗಿ ಉತ್ತಮ ಪ್ರದರ್ಶನ ನೀಡಿ ತಮ್ಮ ಕಮ್ಬ್ಯಾಕ್ ಸಾರಿದರು.
ಇಷ್ಟು ಮಾತ್ರವಲ್ಲದೆ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾದ ಉಪನಾಯಕ ಕೂಡ ಆಗುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಹುಬ್ಬೇರುವಂತೆ ಮಾಡಿದರು. ಆದರೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಅಜಿಂಕ್ಯಾ ರಹಾನೆ ನೀಡಿದ ಪ್ರದರ್ಶನ ಬೇಸರ ಮೂಡಿಸಿದೆ. ತಂಡದ ಅಗ್ರ ಕ್ರಮಾಂಕದ ಆಟಗಾರರಿಂದ ಉತ್ತಮ ಪ್ರದರ್ಶನ ಬರುತ್ತಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಮಿಂಚಬೇಕಿದ್ದ ರಹಾನೆ ಸತತ ಎರಡು ಇನ್ನಿಂಗ್ಸ್ಗಳಲ್ಲಿ ವೈಫಲ್ಯ ಕಂಡಿದ್ದಾರೆ.
"ಅಜಿಂಕ್ಯಾ ರಹಾಮೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಅದ್ಭುತವಾದ ಪ್ರದರ್ಶನ ನೀಡಿದರು. ಅವರು ಬಹಳ ಅದ್ಭುತವಾಗಿ ಕಾಣಿಸುತ್ತಿದ್ದರು. ಆದರೆ ಅದಾದ ಬಳಿಕ ಅವರಿಗೆ ಏನಾಗಿದೆ. ಕಳೆದ ಮೂರು ಇನ್ನಿಂಗ್ಸ್ಗಳಲ್ಲಿ ಅವರಿಂದ ಉತ್ತಮ ಪ್ರದರ್ಶನ ಬರಲಿಲ್ಲ. ಮೂರು ಇನ್ನಿಂಗ್ಸ್ ಏನು ದೊಡ್ಡದಲ್ಲ. ಆದರೆ ಮುಂದೆ ಏನು? ಅಂದರೆ ಆಯ್ಕೆಗಾರರು ಅಜಿಂಕ್ಯಾ ರಹಾನೆಯಂತಾ ಆಟಗಾರರಿಂದ ಏನನ್ನು ನಿರೀಕ್ಷಿಸಬೇಕು ಎಂಬುದನ್ನು ಕಂಡುಕೊಳ್ಳಬೇಕಿದೆ. ಅಜಿಂಕ್ಯಾ ರಹಾನೆಯಿಂದ ಅವರ ನಿರೀಕ್ಷೆಯೇನು?" ಎಂದು ಪ್ರಶ್ನಿಸಿದ್ದಾರೆ ದೀಪ್ ದಾಸ್ಗುಪ್ತ.
"ಐದು ಪಂದ್ಯಗಳಿಗೆ ಒಂದರಂತೆ ಇಂಥಾ ಇನ್ನಿಂಗ್ಸ್ ಬಂದರೆ, ಈ ರೀತಿಯ ಪ್ರಮಾಣವಿದ್ದರೆ ಆಯ್ಕೆ ಮಂಡಳಿ ಅದನ್ನು ನೆಚ್ಚಿಕೊಂಡಿರಬೇಕಾ? ಅದು ಬೇರೆ ಆಯ್ಕೆಯತ್ತ ಬೇರೆ ಆಟಗಾರರತ್ತ ಗಮನಹರಿಸುವುದು ಸೂಕ್ತ ಎನಿಸುತ್ತದೆ. ಹೀಗಾಗಿಯೇ ಆಯ್ಕೆಗಾರರು ತಮ್ಮ ನಿರೀಕ್ಷೆಗಳನ್ನು ಕಂಡುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಈ ಸರಣಿಗೆ ಅವರನ್ನು ಉಪನಾಯಕನನ್ನಾಗಿಯೂ ಮಾಡಲಾಯಿತು ಅದು ನನಗೆ ಇನ್ನಷ್ಟು ಆಶ್ಚರ್ಯ ಮೂಡಿಸಿದೆ"
"ಆದರೆ ನನ್ನ ಪ್ರಕಾರ ಒಂದು ಪಂದ್ಯದಲ್ಲಿ 70-80 ರನ್ ಬಾರಿಸಿ ನಂತರ ಮುಂದಿನ ಮೂರು ಪಂದ್ಯಗಳಲ್ಲಿ ಒಂದಂಕಿ ಅಥವಾ ಕಡಿಮೆ ರನ್ಗಳಿಗೆ ಔಟಾದರೆ ಅನುಭವಿ ಆಟಗಾರರಿಂದ ಇಂಥದ್ದನ್ನು ನಿರೀಕ್ಷಿಸಬಹುದಾ? ಆತ ಸಾಕಷ್ಟು ಹೆಚ್ಚುನ ಪ್ರಮಾಣದಲ್ಲಿ ಕ್ರಿಕೆಟ್ ಆಡಿರುವ ಆಟಗಾರ. ಒಂದು ಇನ್ನಿಂಗ್ಸ್ನಲ್ಲಿ ನಿಜಕ್ಕೂ ನಬಹಳ ಅದ್ಭುತವಾಗಿ ಕಾಣಿಸುತ್ತಾರೆ. ಆದರೆ ಅದಾದ ಬಳಿಕ ಮೂರ್ನಾಲ್ಕು ಇನ್ನಿಂಗ್ಸ್ ಅಥವಾ ಪಂದ್ಯಗಳಲ್ಲಿ ಅವರ ಸಾಮರ್ಥ್ಯವನ್ನು ಪ್ರದರ್ಶಿಸುವುದಿಲ್ಲ" ಎಂದು ಅಜಿಂಕ್ಯಾ ರಹಾನೆ ಪ್ರದರ್ಶನದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.