IND vs WI: ದ್ವಿತೀಯ ಏಕದಿನದ ವೇಳೆ ದ್ರಾವಿಡ್ ಸರ್ ತುಂಬಾ ಆತಂಕಕ್ಕೊಳಗಾಗಿದ್ದರು; ಶ್ರೇಯಸ್ ಐಯ್ಯರ್

ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ನಿನ್ನೆ ( ಜುಲೈ 14 ) ಕ್ವೀನ್ಸ್ ಪಾರ್ಕ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ 2 ವಿಕೆಟ್ಗಳ ರೋಚಕ ಜಯವನ್ನು ಸಾಧಿಸಿದ ಟೀಮ್ ಇಂಡಿಯಾ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದ ಮುನ್ನಡೆಯನ್ನು ಸಾಧಿಸುವುದರ ಮೂಲಕ ಸರಣಿಯನ್ನು ಕೈವಶಪಡಿಸಿಕೊಂಡಿದೆ.
ಈ ಮೂಲಕ ವೆಸ್ಟ್ ಇಂಡೀಸ್ ವಿರುದ್ಧ ಸತತ 12ನೇ ಏಕದಿನ ಸರಣಿಯ ಗೆಲುವನ್ನು ಸಾಧಿಸಿ ತಂಡವೊಂದರ ವಿರುದ್ಧ ಸತತವಾಗಿ ಅತಿ ಹೆಚ್ಚು ಏಕದಿನ ಸರಣಿಗಳನ್ನು ಗೆದ್ದ ದಾಖಲೆಯನ್ನು ಟೀಮ್ ಇಂಡಿಯಾ ತನ್ನ ಹೆಸರಿಗೆ ಬರೆದುಕೊಂಡಿತು. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಶಾಯ್ ಹೋಪ್ ಅಬ್ಬರದ ಶತಕದ ನೆರವಿನಿಂದ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 311 ರನ್ ಕಲೆಹಾಕಿ ಟೀಮ್ ಇಂಡಿಯಾಗೆ ಗೆಲ್ಲಲು 312 ರನ್ಗಳ ಕಠಿಣ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ ಮತ್ತು ಅಕ್ಷರ್ ಪಟೇಲ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ 49.4 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 312 ರನ್ ಕಲೆಹಾಕಿ 2 ವಿಕೆಟ್ಗಳ ರೋಚಕ ಜಯ ಸಾಧಿಸಿತು.
ಹೀಗೆ ಈ ಪಂದ್ಯ ವೀಕ್ಷಕರಿಗೆ ಮಾತ್ರವಲ್ಲದೇ ಎರಡೂ ತಂಡಗಳ ಆಟಗಾರರಲ್ಲೂ ಸಹ ರೋಚಕತೆಯನ್ನು ಹುಟ್ಟುಹಾಕಿತ್ತು. ಅದರಲ್ಲಿಯೂ ಅಂತಿಮ ಓವರ್ನಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು 8 ರನ್ ಬೇಕಿದ್ದಾಗ ರೋಚಕತೆಯ ಮಟ್ಟ ಮುಗಿಲುಮುಟ್ಟಿತ್ತು ಎಂದೇ ಹೇಳಬಹುದು. ಹೀಗೆ ದೊಡ್ಡ ಮಟ್ಟದ ಕುತೂಹಲವನ್ನು ಹುಟ್ಟುಹಾಕಿದ್ದ ಈ ಪಂದ್ಯದ ಕುರಿತಾಗಿ ಪಂದ್ಯ ಮುಕ್ತಾಯವಾದ ನಂತರ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಶ್ರೇಯಸ್ ಅಯ್ಯರ್ ಮಾತನಾಡಿದ್ದು, ಪಂದ್ಯದ ವೇಳೆ ತಮಗಾದ ಅನುಭವವನ್ನು ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.

ದ್ರಾವಿಡ್ ಸರ್ ಆತಂಕಕ್ಕೊಳಗಾಗಿದ್ದರು
ಪಂದ್ಯದ ಚೇಸಿಂಗ್ ತಂಡದ ಆಟಗಾರರಿಗೆ ತುಂಬಾ ಫನ್ ನೀಡಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಶ್ರೇಯಸ್ ಅಯ್ಯರ್ ತಂಡದ ಆಟಗಾರರೆಲ್ಲಾ ಒಟ್ಟಿಗೆ ಕುಳಿತಿದ್ದ ಸಂದರ್ಭದಲ್ಲಿ ತಮ್ಮೊಟ್ಟಿಗೆ ಕುಳಿತಿದ್ದ ರಾಹುಲ್ ದ್ರಾವಿಡ್ ಸರ್ ಆತಂಕಕ್ಕೊಳಗಾಗಿದ್ದರು ಹಾಗೂ ಪದೇ ಪದೇ ಸಂದೇಶವನ್ನು ರವಾನಿಸುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ.

ಅಕ್ಷರ್ ಪಟೇಲ್ ಪ್ರದರ್ಶನವನ್ನು ಕೊಂಡಾಡಿದ ಅಯ್ಯರ್
ಇನ್ನೂ ಮುಂದುವರಿದು ಮಾತನಾಡಿದ ಶ್ರೇಯಸ್ ಅಯ್ಯರ್ ಈ ಪಂದ್ಯದಲ್ಲಿ ತಂಡದ ಹಲವು ಆಟಗಾರರು ಒತ್ತಡದ ನಡುವೆಯೂ ಉತ್ತಮ ಪ್ರದರ್ಶನವನ್ನು ನೀಡಿದರು ಎಂದು ಹೇಳಿದ್ದಾರೆ. ಹಾಗೂ ಈ ರೀತಿಯ ಒತ್ತಡದ ಪಂದ್ಯಗಳ ಅನುಭವ ತಂಡದ ಆಟಗಾರರಿಗೆ ಈ ಹಿಂದೆಯೇ ಸಾಕಷ್ಟು ಬಾರಿ ಆಗಿದ್ದರಿಂದ, ಇದೇನೂ ಹೊಸದಾಗಿರಲಿಲ್ಲ ಹಾಗೂ ಇದೊಂದು ಮತ್ತೊಂದು ಪಂದ್ಯವಾಗಿತ್ತಷ್ಟೇ ಎಂದು ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ. ತಂಡದ ಆಟಗಾರರೆಲ್ಲಾ ಉತ್ತಮ ಪ್ರದರ್ಶನ ನೀಡಿದ್ದು, ಅದರಲ್ಲಿಯೂ ಅಕ್ಷರ್ ಪಟೇಲ್ ತುಂಬಾ ಅದ್ಭುತವಾಗಿ ಪಂದ್ಯವನ್ನು ಫಿನಿಶ್ ಮಾಡಿದರು ಎಂದು ಅಯ್ಯರ್ ಪ್ರಶಂಸಿಸಿದ್ದಾರೆ.

ಅರ್ಧಶತಕ ಬಾರಿಸಿ ಉತ್ತಮ ಆಟವನ್ನಾಡಿದ ಶ್ರೇಯಸ್ ಅಯ್ಯರ್
ಟೀಮ್ ಇಂಡಿಯಾ 17.2 ಓವರ್ಗಳಲ್ಲಿ 79 ರನ್ಗಳಿಗೆ ತನ್ನ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ನಾಲ್ಕನೇ ವಿಕೆಟ್ಗೆ ಜತೆಯಾದ ಸಂಜು ಸ್ಯಾಮ್ಸನ್ ಮತ್ತು ಶ್ರೇಯಸ್ ಐಯ್ಯರ್ ಜೋಡಿ 99 ರನ್ಗಳ ಅಮೂಲ್ಯವಾದ ಜತೆಯಾಟವನ್ನಾಡಿ ತಂಡಕ್ಕೆ ಆಸರೆಯಾದರು. ಶ್ರೇಯಸ್ ಅಯ್ಯರ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು 71 ಎಸೆತಗಳಲ್ಲಿ 63 ರನ್ ಕಲೆ ಹಾಕುವುದರ ಮೂಲಕ ಉತ್ತಮ ಪ್ರದರ್ಶನ ನೀಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications