ಭುವಿಗೆ ಓವರ್ ನೀಡದೆ ಸೋಲು ಕಂಡಿತಾ ಭಾರತ: ಆವೇಶ್ಗೆ ಅಂತಿಮ ಓವರ್ ನೀಡಿದ ಕಾರಣ ಹೇಳಿದ ರೋಹಿತ್!

ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ ಸೋಲು ಅನುಭವಿಸಿದ್ದು ಸರಣಿಯಲ್ಲಿ ವೆಸ್ಟ್ ಇಂಡೀಸ್ 1-1 ಅಂತರದಿಂದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಅಂತಿಮ ಓವರ್ನಲ್ಲಿ 10 ರನ್ಗಳನ್ನು ರಕ್ಷಣೆ ಮಾಡುವ ಸವಾಲು ಭಾರತದ ಮುಂದಿತ್ತು. ಆವೇಶ್ ಖಾನ್ ಎಸೆದ ಈ ಓವರ್ನ ಮೊದಲ ಎರಡು ಎಸೆತದಲ್ಲಿಯೇ ವೆಸ್ಟ್ ಇಂಡೀಸ್ ಈ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಯಿತು.
ಈ ಪಂದ್ಯದ ಮುಕ್ತಾಯದ ಬಳಿಕ ಅಂತಿಮ ಓವರ್ಅನ್ನು ಆವೇಶ್ ಖಾನ್ಗೆ ನೀಡಿರುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ. ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಬೌಲಿಂಗ್ ನಡೆಸುವ ಅವಕಾಶವಿದ್ದರೂ ಯುವ ವೇಗಿಗೆ ಅಂತಿಮ ಓವರ್ ನೀಡಿದ್ದೇಕೆ ಎಂಬುದು ಪ್ರಶ್ನೆಯಾಗಿದೆ. ಈ ಬಗ್ಗೆ ನಾಯಕ ರೋಹಿತ್ ಶರ್ಮಾ ಅವರೇ ಪ್ರತಿಕ್ರಿಯಿಸಿದ್ದು ಆವೇಶ್ ಖಾನ್ಗೆ ಈ ಕಠಿಣ ಓವರ್ ನೀಡಲು ಕಾರಣವೇನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಭುವಿ ಎರಡು ಓವರ್ ಬಾಕಿಯಿತ್ತು
ಇನ್ನು ಅಂತಿಮ ಓವರ್ನಲ್ಲಿ 10 ರನ್ಗಳನ್ನು ರಕ್ಷಣೆ ಮಾಡುವ ಸಂದರ್ಭದಲ್ಲಿ ಬಹುತೇಕರು ಈ ಅಂತಿಮ ಓವರ್ಅನ್ನು ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ಗೆ ನಾಯಕ ನೀಡಬಹುದು ಎಂದು ಭಾವಿಸಿದ್ದರು. ಯಾಕೆಂದರೆ ಭುವಿ ಕೇವಲ ಎರಡು ಓವರ್ಗಳ ಬೌಲಿಂಗ್ ದಾಳಿಯನ್ನಷ್ಟೇ ನಡೆಸಿದ್ದರು. ಅದು ಕೂಡ 6ರ ಎಕಾನಮಿಯಲ್ಲಿ ಬೌಲಿಂಗ್ ನಡೆಸಿರುವುದು ಒಂದು ಕಾರಣವಾದರೆ ಒತ್ತಡದ ಸಂದರ್ಭದಲ್ಲಿ ಅನುಭವ ನೆರವಾಗಬಹುದು ಎಂಬ ಲೆಕ್ಕಾಚಾರ ಎಲ್ಲರದಗಿತ್ತು. ಆದರೆ ನಾಯಕ ರೋಹಿತ್ ಶರ್ಮಾ ಆವೇಶ್ ಖಾನ್ಗೆ ಓವರ್ ನಿಡಿ ಅಚ್ಚರಿ ಮೂಡಿಸಿದ್ದರು. ಆದರೆ ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಆವೇಶ್ ಬೌಲಿಂಗ್ ನಡೆಸಲು ಸಾಧ್ಯವಾಗಲಿಲ್ಲ. ಅಂತಿಮ ಓವರ್ನ ಕೇವಲ ಎರಡು ಎಸೆತಗಳಲ್ಲಿಯೇ ವಿಂಡೀಸ್ ಗುರಿ ತಲುಪಲು ಯಶಸ್ವಿಯಾಯಿತು.

ಯುವ ಆಟಗಾರರ ಮೇಲೆ ನಾಯಕನಿಗೆ ಭರವಸೆ
ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ಯುವ ಆಟಗಾರರ ಮೇಲೆ ತನ್ನ ನಂಬಿಕೆಯ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. "ಭುವನೇಶ್ವರ್ ಕುಮಾರ್ ಇಂಥಾ ಪರಿಸ್ಥಿತಿಯಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿರುವುದನ್ನು ನಾವು ನೋಡಿದ್ದೇವೆ. ಅದನ್ನು ಆತ ಸಾಕಷ್ಟು ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಆದರೆ ಅರ್ಷ್ದೀಪ್, ಆವೇಶ್ ಖಾನ್ ಅವರಂತಾ ಆಟಗಾರರೊಗೆ ಆ ಅವಕಾಶ ನೀಡದಿದ್ದರೆ ನಿಮಗೆ ಅವರಲ್ಲಿರುವ ಸಾಮರ್ಥ್ಯ ತಿಳಿಯುವುದಿಲ್ಲ. ಇದು ಕೇವಲ ಒಂದು ಪಂದ್ಯ. ಅವರಲ್ಲಿ ಪ್ರತಿಭೆಯಿದೆ, ಕೌಶಲ್ಯವಿದೆ. ಅವರಿಗೆ ಬೆಂಬಲವನ್ನಷ್ಟೇ ನಾವು ನೀಡಬೇಕಿದೆ" ಎಂದಿದ್ದಾರೆ ನಾಯಕ ರೋಹಿತ್ ಶರ್ಮಾ.

ಸರಣಿಯಲ್ಲಿ ಸಮಬಲ
ಇನ್ನು ಈ ಫಲಿತಾಂಶದಿಂದಾಗಿ ಐದು ಪಂದ್ಯಗಳ ಟಿ20 ಸರಣಿ ಈಗ ಸಮಬಲದಲ್ಲಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಭಾರತ ಸರಣಿಯಲ್ಲಿ ಮೇಲುಗೈ ಸಾಧಿಸಿತ್ತು. ಇದೀಗ ಎರಡನೇ ಪಂದ್ಯವನ್ನು ಆತಿಥೇಯ ತಂಡ ಗೆಲ್ಲುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸುವಲ್ಲಿ ಯಶಸ್ವುಯಾಗಿದೆ. ಈಗಾಗಲೇ ಏಕದಿನ ಸರಣಿ ಕಳೆದುಕೊಂಡಿರುವ ಕಾರಣ ಟಿ20 ಸರಣಿಯನ್ನಾದರೂ ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ ನಿಕೋಲಸ್ ಪೂರನ್ ಪಡೆ.

ಭಾರತ ಆಡುವ ಬಳಗ
ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಆವೇಶ್ ಖಾನ್
ಬೆಂಚ್: ರವಿ ಬಿಷ್ಣೋಯ್, ಹರ್ಷಲ್ ಪಟೇಲ್, ಅಕ್ಸರ್ ಪಟೇಲ್, ದೀಪಕ್ ಹೂಡಾ, ಇಶಾನ್ ಕಿಶನ್, ಕುಲದೀಪ್ ಯಾದವ್, ಸಂಜು ಸ್ಯಾಮ್ಸನ್
ವೆಸ್ಟ್ ಇಂಡೀಸ್ ಆಡುವ ಬಳಗ: ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್ (ಸಿ), ರೋವ್ಮನ್ ಪೊವೆಲ್, ಶಿಮ್ರಾನ್ ಹೆಟ್ಮೆಯರ್, ಡೆವೊನ್ ಥಾಮಸ್ (ವಾಕ್), ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಓಡಿಯನ್ ಸ್ಮಿತ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್
ಬೆಂಚ್: ಶಮರ್ ಬ್ರೂಕ್ಸ್, ಕೀಮೋ ಪಾಲ್, ಹೇಡನ್ ವಾಲ್ಷ್, ರೊಮಾರಿಯೋ ಶೆಫರ್ಡ್, ಡೊಮಿನಿಕ್ ಡ್ರೇಕ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications