ಕೌಂಟಿ ತಂಡದ ಪರ ಆಡುತ್ತಿದ್ದಾಗ ಗಾಯ
ಭಾರತ ಜಿಂಬಾಬ್ವೆ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿದೆ. ಈ ಸರಣಿಯಲ್ಲಿ ಭಾಗವಹಿಸುವ ತಂಡದಲ್ಲಿ ವಾಶಿಂಗ್ಟನ್ ಸುಂದರ್ ಅವಕಾಶ ಪಡೆದುಕೊಂಡಿದ್ದರು. ಆದರೆ ಕೌಂಟಿ ತಂಡ ಲಂಕಾಶೈರ್ ತಂಡದ ಪರವಾಗಿ ಏಕದಿನ ಮಾದರಿಯಲ್ಲಿ ಆಡುತ್ತಿದ್ದಾಗ ವಾಶಿಂಗ್ಟನ್ ಸುಂದರ್ ಭುಜದ ಗಾಯಕ್ಕೆ ಒಳಗಾಗಿದ್ದಾರೆ. ಹೀಗಾಗಿ ಬೆಂಗಳೂರಿನ ಎನ್ಸಿಎನಲ್ಲಿ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ವಾಶಿ ಅಲಭ್ಯತೆಯನ್ನು ಸ್ಪಷ್ಟಪಡಿಸಿದ ಬಿಸಿಸಿಐ ಅಧಿಕಾರಿ
ಜಿಂಬಾಬ್ವೆ ಸರಣಿಯಲ್ಲಿ ಭಾಗವಹಿಸಲಿರುವ ಭಾರತೀಯ ಆಟಗಾರರ ಬಳಗ ಈಗಾಗಲೇ ಹರಾರೆಗೆ ತಲುಪಿದ್ದು ಅಭ್ಯಾಸದಲ್ಲಿ ನಿರತವಾಗಿದೆ. ಈ ಸಂದರ್ಭದಲ್ಲಿ ವಾಶಿಂಗ್ಟನ್ ಗಾಯದ ವಿಚಾರವಾಗಿ ಬಿಸಿಸಿಐನ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. "ಜಿಂಬಾಬ್ವೆ ಸರಣಿಯಿಂದ ವಾಶಿಂಗ್ಟನ್ ಸುಂದರ್ ಹೊರಬಿದ್ದಿದ್ದಾರೆ. ರಾಯಲ್ ಲಂಡನ್ ಕಪ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಎಡ ಭುಜಕ್ಕೆ ಅವರು ಗಾಯಗೊಂಡಿದ್ದಾರೆ. ಅವರು ಬೆಂಗಳೂರಿನ ಎನ್ಸಿಎನಲ್ಲಿ ರಿಹ್ಯಾಬ್ನಲ್ಲಿ ಭಾಗಿಯಾಗಲಿದ್ದಾರೆ" ಎಂದು ಹೇಳಿಕೆ ನೀಡಿದ್ದಾರೆ.
ಜಿಂಬಾಬ್ವೆ ವಿರುದ್ಧದ ಸರಣಿಗೆ ಕ್ಷಣಗಣನೆ
ಆಗಸ್ಟ್ 18ರಿಂದ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಆರಂಭವಾಗಲಿದ್ದು ಕೆಎಲ್ ರಾಹುಲ್ ಭಾರತ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಕೆಎಲ್ ರಾಹುಲ್ ಕೂಡ ಗಾಯದಿಂದಾಗಿ ಕಳೆದ ಸುಮಾರು ಎರಡು ತಿಂಗಳಿನಿಂದ ಕ್ರಿಕೆಟ್ನಿಂದ ದೂರವುಳಿದಿದ್ದರು. ಈ ಸರಣಿಯ ಮೂಲಕ ರಾಹುಲ್ ಕಮ್ಬ್ಯಾಕ್ ಮಾಡುತ್ತಿದ್ದಾರೆ. ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸಹಿತ ಕೆಲ ಪ್ರಮುಖ ಆಟಗಾರರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದು ಮೊದಲಿಗೆ ಶಿಖರ ಧವನ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿತ್ತು. ಬಳಿಕ ರಾಹುಲ್ಗೆ ಈ ಜವಾಬ್ಧಾರಿ ವಹಿಸಲಾಗಿದೆ.
ಪದೇ ಪದೇ ಗಾಯಕ್ಕೆ ಒಳಗಾಗುತ್ತಿರುವ ಸುಂದರ್
ಕಳೆದ ಒಂದು ವರ್ಷದಿಂದ ವಾಶಿಂಗ್ಟನ್ ಸುಂದರ್ ಪದೇ ಪದೇ ಗಾಯ ಹಾಘೂ ಕೊರೊನಾ ಕಾರಣದಿಂದಾಗಿ ಹಲವು ಸರಣಿಗಳಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ. 2021ರ ಜುಲೈನಲ್ಲಿ ಇಂಗ್ಲೆಂಡ್ನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಗೆ ಸಿದ್ಧತೆಯ ಭಾಗವಾಗಿ ಅಭ್ಯಾಸ ಪಂದ್ಯದಲ್ಲಿ ಆಡುತ್ತಿದ್ದಾಗ ಬೆರಳಿನ ಗಾಯಕ್ಕೆ ಒಳಗಾಗಿದ್ದರು. ಅದಾದ ಬಳಿಕ ಒಂದಾದ ಬಳಿಕ ಮತ್ತೊಂದರಂತೆ ಗಾಯಕ್ಕೆ ಒಳಗಾಗುತ್ತಿದ್ದಾರೆ.
ಬೆರಳಿನ ಗಾಯಕ್ಕೆ ಒಳಗಾದ ಬಳಿಕ ಸಂಪೂರ್ಣ ದೇಶೀಯ ಕ್ರಿಕೆಟ್ ಋತುವನ್ನು ವಿಶ್ರಾಂತಿಯಲ್ಲಿಯೇ ಕಳೆದ ಸುಂದರ್ ದಕ್ಷಿಣ ಆಫ್ರಿಕಾ ವಿರುದ್ಧದ ಜನವರಿಯಲ್ಲಿ ನಡೆದ ಸರಣಿಗೆ ಮುನ್ನ ಕೋರೊನಾವೈರಸ್ಗೆ ತುತ್ತಾದರು. ಅದಾಗಿ ಒಂದು ತಿಂಗಳ ಬಳಿಕ ಮಂಡಿರಜ್ಜು ಗಾಯಕ್ಕೆ ತುತ್ತಾಗಿ ತವರಿನಲ್ಲಿ ನಡೆದ ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದಲೂ ಹೊರಗುಳಿದರು. ಐಪಿಎಲ್ನಿಂದಲೂ ಕೆಲ ಪಂದ್ಯಗಳಲ್ಲಿ ಸುಂದರ್ ಆಡಿರಲಿಲ್ಲ.