ಭಾನುವಾರ, ಡಿಸೆಂಬರ್ 10ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಹೇಗೆ ಪ್ರೇರೇಪಿಸಿದರು ಎಂಬುದರ ಕುರಿತು ಕನ್ನಡತಿ ಶ್ರೇಯಾಂಕಾ ಪಾಟೀಲ್ ಮಾತನಾಡಿದ್ದಾರೆ.
ಶ್ರೇಯಾಂಕಾ ಪಾಟೀಲ್ ಅಂತಿಮ ಪಂದ್ಯದಲ್ಲಿ 4 ಓವರ್ಗಳಲ್ಲಿ 19 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 21 ವರ್ಷದ ಯುವ ಆಟಗಾರ್ತಿ ಇಂಗ್ಲೆಂಡ್ನ ಬೆಸ್ ಹೀತ್, ಸೋಫಿ ಎಕ್ಲೆಸ್ಟೋನ್ ಮತ್ತು ಫ್ರೇಯಾ ಕೆಂಪ್ ಅವರ ವಿಕೆಟ್ ಪಡೆದರು. ಇದರಿಂದ ಭಾರತ ಮಹಿಳಾ ತಂಡವು ಪಂದ್ಯವನ್ನು 4 ವಿಕೆಟ್ಗಳಿಂದ ಗೆಲ್ಲಲು ಸಾಧ್ಯವಾಯಿತು.

"ಪಂದ್ಯದ ದಿನ ನೀವು ನನ್ನ ಬೌಲಿಂಗ್ ಬಗ್ಗೆ ಮಾತನಾಡಿದ್ದು ನನಗೆ ನೆನಪಿದೆ. ಶೇ.100ರಷ್ಟು ಮಾತ್ರ ನೀಡಿ, 120 ಪ್ರತಿಶತದಷ್ಟು ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದರು. ನಾನು ನನ್ನ 100 ಪ್ರತಿಶತವನ್ನು ನೀಡಿದ್ದೇನೆ ಮತ್ತು ನಾವು ಬಯಸಿದ ಫಲಿತಾಂಶವನ್ನು ನಾವು ಪಡೆದುಕೊಂಡಿದ್ದೇವೆ," ಎಂದು ಶ್ರೇಯಾಂಕಾ ಪಾಟೀಲ್ ಅವರು ಸ್ಮೃತಿ ಮಂಧಾನ ಅವರ ಸಂದರ್ಶನದಲ್ಲಿ ಹೇಳಿದ್ದಾರೆ. ಇದನ್ನು ಬಿಸಿಸಿಐ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ.
ಈ ಹಿಂದೆ ವಾಂಖೆಡೆಯಲ್ಲಿ ನಡೆದ ಮೊದಲ ಟಿ20 ಪಂದ್ಯಕ್ಕೂ ಮುನ್ನ ಕರ್ನಾಟಕ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ಗೆ ಚೊಚ್ಚಲ ಭಾರತ ತಂಡದ ಕ್ಯಾಪ್ ನೀಡಿದ್ದು ಅನುಭವಿ ಬ್ಯಾಟರ್ ಸ್ಮೃತಿ ಮಂಧಾನ.
ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ (ಡಬ್ಲ್ಯುಪಿಎಲ್) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಪರವಾಗಿ ಸ್ಮೃತಿ ಮಂಧಾನಾ ನಾಯಕತ್ವದಲ್ಲಿ ಶ್ರೇಯಾಂಕಾ ಪಾಟೀಲ್ ಆಡುತ್ತಿದ್ದಾರೆ.
"ನಾನು ಚಿಕ್ಕಂದಿನಿಂದಲೂ ಕನಸು ಕಾಣುತ್ತಿದ್ದೆ ಮತ್ತು ನಂತರ ನಿಮ್ಮಿಂದ ಟೀಮ್ ಇಂಡಿಯಾ ಕ್ಯಾಪ್ ಪಡೆಯುವುದು ವಿಶೇಷ ಕ್ಷಣವಾಗಿತ್ತು. ನಾನು ಇದನ್ನು ಯಾವಾಗಲೂ ಉಲ್ಲೇಖಿಸುತ್ತೇನೆ ಮತ್ತು ಅದನ್ನು ನನ್ನ ನೋಟ್ಬುಕ್ನಲ್ಲಿ ಬರೆದಿದ್ದೇನೆ," ಎಂದು ಶ್ರೇಯಾಂಕಾ ಹೇಳಿದರು.

ಮೊದಲೆರಡು ಪಂದ್ಯಗಳಲ್ಲಿ ಸೋತ ಬಳಿಕ, ಭಾರತ ಮಹಿಳಾ ತಂಡ ಗೆಲುವಿನ ಹಾದಿಗೆ ಮರಳಿದ್ದಕ್ಕೆ ಸ್ಮೃತಿ ಮಂಧಾನ ಕೂಡ ಸಂತೋಷಪಟ್ಟರು. ಶ್ರೇಯಾಂಕಾ ಪಾಟೀಲ್ ಅವರ ಸ್ವಭಾವವನ್ನು ಜೆಮಿಮಾ ರೋಡ್ರಿಗಸ್ಗೆ ಹೋಲಿಸಿದ ಮಂಧಾನ, ಅಂತಹ ಆಟಗಾರ್ತಿಯರು ಡ್ರೆಸ್ಸಿಂಗ್ ರೂಮ್ ಅನ್ನು ಧನಾತ್ಮಕವಾಗಿರಿಸಲು ಸಹಾಯ ಮಾಡುತ್ತಾರೆ ಎಂದರು.
"ದೀರ್ಘ ಸಮಯದ ನಂತರ ಮೊದಲ ಗೆಲುವು ಪಡೆದಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಆಶಾದಾಯಕವಾಗಿ, ನಾವು ಈ ಫಾರ್ಮ್ ಅನ್ನು ಟೆಸ್ಟ್ ಸ್ವರೂಪದಲ್ಲಿ ಮುಂದುವರಿಸಬಹುದು," ಎಂದು ಸ್ಮೃತಿ ಮಂಧಾನ ತಿಳಿಸಿದರು.
"ನಿಮ್ಮಲ್ಲಿ (ಶ್ರೇಯಾಂಕಾ ಪಾಟೀಲ್) ನಾನು ಇನ್ನೊಬ್ಬ ಜೆಮಿಮಾರನ್ನು ಕಂಡುಕೊಂಡಿದ್ದೇನೆ ಎಂದು ನಾನು ಭಾವಿಸುತ್ತೇನೆ. ನೀವಿಬ್ಬರೂ ಯಾವಾಗಲೂ ಚಿಲಿಪಿಲಿ ಮಾಡುತ್ತಿರಿ, ಯಾವಾಗಲೂ ಡ್ರೆಸ್ಸಿಂಗ್ ರೂಮ್ ಅನ್ನು ಹಗುರವಾಗಿರಿಸಿಕೊಳ್ಳುತ್ತೀರಿ. ಇದು ತಂಡದ ವಾತಾವರಣದಲ್ಲಿ ಈ ರೀತಿಯ ಪಾತ್ರಗಳು ನಿಜವಾಗಿಯೂ ಮುಖ್ಯವಾಗಿವೆ," ಎಂದು ಸ್ಮೃತಿ ಮಂಧಾನ ಅಭಿಪ್ರಾಯಪಟ್ಟರು.