ಬೆಂಗಳೂರು, ಆಗಸ್ಟ್ 15: ಸದ್ಯಕ್ಕೆ ಶ್ರೀಲಂಕಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡ, ಅಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದೆ. ಸೋಮವಾರವಷ್ಟೇ ಮುಗಿದ ಶ್ರೀಲಂಕಾ ವಿರುದ್ಧದ ಮೂರು ಟೆಸ್ಟ್ ಪಂದ್ಯದಲ್ಲಿ ಜಯ ಕಂಡ ಕೊಹ್ಲಿ ಪಡೆ, ಆ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.
ಇದಾದ ನಂತರ, ಲಂಕಾ ವಿರುದ್ಧವೇ ನಡೆಯಲಿರುವ ಏಕದಿನ ಸರಣಿಗಾಗಿ ಕ್ಯಾಂಡಿಗೆ ಪ್ರಯಾಣ ಬೆಳೆಸಿರುವ ಟೀಂ ಇಂಡಿಯಾ, ಆಗಸ್ಟ್ 15ರಂದು ಕ್ಯಾಂಡಿಯಲ್ಲೇ ವಾಸ್ತವ್ಯ ಹೂಡಿತ್ತು.

ಭಾರತದ 71ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ, ಕ್ಯಾಂಡಿಯಲ್ಲಿ ತಾವು ತಂಗಿರುವ ಹೋಟೆಲ್ ನ ಆಜುಬಾಜಿನಲ್ಲೇ ತ್ರಿವರ್ಣ ಧ್ವಜ ಹಾರಿಸಿದ ಭಾರತೀಯ ಆಟಗಾರರು ಧ್ವಜಕ್ಕೆ ವಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಟ್ವಿಟ್ಟರ್ ನಲ್ಲಿ ಎಲ್ಲಾ ಭಾರತೀಯರಿಗೆ ಶುಭ ಹೇಳಿರುವ ವಿರಾಟ್ ಕೊಹ್ಲಿ, ಆಗಸ್ಟ್ 15 ತಮ್ಮ ತಂದೆಯ ಹುಟ್ಟುಹಬ್ಬವೂ ಇರುವುದರಿಂದ ತಮಗೆ ಪ್ರತಿ ಸ್ವಾತಂತ್ರ್ಯೋತ್ಸವವು ಡಬಲ್ ಖುಷಿ ಕೊಡುವ ದಿನವಾಗಿದೆ ಎಂದು ಹೇಳಿದ್ದಾರೆ.