ಚೆನ್ನೈ, ಆಗಸ್ಟ್ 14: ಬಲಿಷ್ಠ ಆಸ್ಟ್ರೇಲಿಯಾ ಎ ತಂಡದ ವಿರುದ್ಧ ತ್ರಿಕೋನ ಏಕದಿನ ಸರಣಿ ಫೈನಲ್ ಪಂದ್ಯದಲ್ಲಿ ಭಾರತ ಎ ತಂಡ ಶುಕ್ರವಾರದಂದು ನಾಲ್ಕು ವಿಕೆಟ್ ಗಳ ಅಂತರದ ಜಯ ದಾಖಲಿಸಿ ಟ್ರೋಫಿ ಎತ್ತಿ ಕುಣಿದಾಡಿದೆ. ಈ ಗೆಲುವಿಗೆ ಗುರ್ ಕೀರತ್ ಸಿಂಗ್ ಅವರ ಆಲ್ ರೌಂಡ್ ಆಟವೇ ಕಾರಣ ಎನ್ನಬಹುದು.
227 ರನ್ ಗೆಲ್ಲಲು ಗುರಿ ಪಡೆದ ಭಾರತಕ್ಕೆ ಗುರ್ ಕೀರತ್ ಸಿಂಗ್ ಆಸರೆಯಾಗಿ 87 ರನ್ ಹೊಡೆದು ಅಜೇಯರಾಗಿ ಉಳಿದು ಜಯ ತಂದಿತ್ತರು. ಕಳೆದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ಕರ್ನಾಟಕದ ಮಯಾಂಕ್ ಅಗರವಾಲ್ ಅವರು 29 ಎಸೆತಗಳಲ್ಲಿ 32 ರನ್ ಗಳಿಸಿ ಔಟ್ ಆದರು. 65 ರನ್ ಗೆ ಟಾಪ್ ಕ್ರಮಾಂಕದ ಬ್ಯಾಟ್ಸ್ ಮನ್ ಕಳೆದುಕೊಂಡರೂ ಗುರ್ ಕೀರತ್ ನೆರವಿನಿಂದ ಭಾರತ ಎ ತಂಡ ಅರ್ಹ ಜಯ ದಾಖಲಿಸಿತು.[ಮಾಯಾಂಕ್, ಪಾಂಡೆ ಶತಕ ಫೈನಲಿಗೆ ಭಾರತ ಎ]

ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡ ಉಸ್ಮಾನ್ ಖ್ವಾಜಾ 76 ರನ್ ಹಾಗೂ ಜೋ ಬರ್ನ್ 41 ಮತ್ತು ಫರ್ಗುಸನ್ 21 ಎಸೆತಗಳಲ್ಲಿ 41 ರನ್ ನೆರವಿನಿಂದ 227ರನ್ ಗಳಿಸಿತು. ಲೆಗ್ ಸ್ಪಿನ್ನರ್ ಕರಣ್ ಶರ್ಮ 10 ಓವರ್ ಗಳಲ್ಲಿ 37 ರನ್ ನೀಡಿ 3 ವಿಕೆಟ್ ಗಳಿಸಿ ಆಸೀಸ್ ತಂಡವನ್ನು ನಿಯಂತ್ರಿಸಿದರು. ಅಕ್ಷರ್ ಪಟೇಲ್ ಹಾಗೂ ಗುರ್ ಕೀರತ್ ಸಿಂಗ್ ತಲಾ 2 ವಿಕೆಟ್ ಕಿತ್ತರು.
ಈ ಹಿಂದೆ 2013ರಲ್ಲಿ ಆಸ್ಟ್ರೇಲಿಯಾ ಎ ತಂಡವನ್ನು ಭಾರತ ಎ ಮಣಿಸಿತ್ತು. ಈ ಬಾರಿ ದಕ್ಷಿಣ ಆಫ್ರಿಕಾ ಎ ತಂಡ ಮೂರನೇ ತಂಡವಾಗಿ ಸರಣಿಯಾಗಿ ಆಡಿತ್ತು. ಆದರೆ, ಫೈನಲ್ ಗೇರುವಲ್ಲಿ ವಿಫಲವಾಗಿತ್ತು. (ಪಿಟಿಐ)