ದುಬೈ: ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಟೀಮ್ ಇಂಡಿಯಾ, ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ, ಫೈನಲ್ಗೆ ಅಜೇಯವಾಗಿ ಹೋಗುವ ಆಸೆಯನ್ನು ಸೂರ್ಯಕುಮಾರ್ ಪಡೆ ಕಾಣುತ್ತಿದೆ. ಆಡಿರುವ 2 ಸೂಪರ್ 4 ಹಂತದ ಪಂದ್ಯಗಳಲ್ಲಿ ಜಯ ಸಾಧಿಸಿರುವ ಭಾರತ, ಸ್ಥಿರ ಪ್ರದರ್ಶನ ನೀಡುತ್ತಿದೆ. ಇನ್ನು ಶ್ರೀಲಂಕಾ ಈಗಾಗಲೇ ಈ ಟೂರ್ನಿಯಿಂದ ಹೊರ ನಡೆದಿದೆ.
ಭಾರತ ಹಾಗೂ ಶ್ರೀಲಂಕಾ ತಂಡಗಳು ಈಗಾಗಲೇ 31 ಟಿ20 ಪಂದ್ಯಗಳನ್ನು ಆಡಿವೆ. ಈ ವೇಳೆ ಭಾರತ ತಂಡ 21 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಶ್ರೀಲಂಕಾ 9 ಪಂದ್ಯಗಳನ್ನು ಗೆದ್ದು ಬೀಗಿದೆ. ಇನ್ನು ಲೀಗ್ ಹಂತದ ಪಂದ್ಯದಲ್ಲಿ ಉಭಯ ತಂಡಗಳು ಆಡಿರುವ ಮೂರು ಪಂದ್ಯಗಳನ್ನು ಗೆದ್ದು ಬೀಗಿದ್ದವು. ಆದರೆ ಶ್ರೀಲಂಕಾ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಪಾಕ್ ಹಾಗೂ ಬಾಂಗ್ಲಾದೇಶದ ವಿರುದ್ಧ ಸೋಲು ಕಂಡಿತ್ತು. ಹೀಗಾಗಿ ಈ ಪಂದ್ಯ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎಂಬಂತೆ ಆಗಿದೆ.

ಟೀಮ್ ಇಂಡಿಯಾದ ಬ್ಯಾಟರ್ಗಳು ಭರ್ಜರಿ ಫಾರ್ಮ್ನಲ್ಲಿದ್ದು, ಈ ಲಯವನ್ನು ಮುಂದುವರೆಸುವ ಆಸೆಯನ್ನು ಹೊಂದಿದ್ದಾರೆ. ಆರಂಭಿಕರಾದ ಅಭಿಷೇಕ್ ಶರ್ಮಾ, ಶುಭಮನ್ ಗಿಲ್ ಪವರ್ ಪ್ಲೇನಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಬೇಕಿದೆ. ಅಭಿಷೇಕ್ ಶರ್ಮಾ ಸೂಪರ್ 4 ಹಂತದಲ್ಲಿ ಆಡಿರುವ 2 ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿರುವ ಅವರ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಇನ್ನು ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ಹಿಂದಿನ ಎರಡೂ ಪಂದ್ಯಗಳಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಹೀಗಾಗಿ ಈ ಪಂದ್ಯದಲ್ಲಿ ಲಯಕ್ಕೆ ಮರಳುವ ಅನಿವಾರ್ಯತೆ ಇದೆ.
ತಿಲಕ್ ವರ್ಮಾ ರನ್ ಕಲೆ ಹಾಕುತ್ತಿದ್ದ ಭರವಸೆ ಮೂಡಿಸಿದ್ದಾರೆ. ಸಂಜು ಸ್ಯಾಮ್ಸನ್ ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸುವ ಅನಿವಾರ್ಯತೆ ಇದೆ. ಇನ್ನು ಟೀಮ್ ಇಂಡಿಯಾದಲ್ಲಿ ಸ್ಟಾರ್ ಆಲ್ರೌಂಡರ್ಗಳು ತಮ್ಮ ಸ್ಥಿರ ಪ್ರದರ್ಶನದ ಬಲದಿಂದ ಎದುರಾಳಿ ತಂಡಕ್ಕೆ ಕಾಟ ನೀಡಬೇಕಿದೆ. ಅಂದಾಗ ಗೆಲುವಿನ ಕನಸು ನನಸಾಗುತ್ತದೆ. ಟೀಮ್ ಇಂಡಿಯಾದ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರೀತ್ ಬುಮ್ರಾ ಬಿಗುವಿನ ದಾಳಿಯನ್ನು ನಡೆಸುವ ಅನಿವಾರ್ಯತೆ ಇದೆ. ಇನ್ನು ಸ್ಪಿನ್ ಬೌಲರ್ಗಳಾದ ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ ಸರಿಯಾದ ಸ್ಥಳದಲ್ಲಿ ಬೌಲ್ ಎಸೆದು ಬ್ಯಾಟರ್ಗಳಿಗೆ ಖೆಡ್ಡ ತೋಡಬೇಕಿದೆ.

ಶ್ರೀಲಂಕಾ ಲೀಗ್ ಹಂತದಲ್ಲಿ ಸ್ಥಿರ ಪ್ರದರ್ಶನ ನೀಡಿದರೂ, ಸೂಪರ್ 4 ಹಂತದಲ್ಲಿ ಗೆಲುವಿನ ಟ್ರ್ಯಾಕ್ಗೆ ಮರಳಲು ವಿಫಲವಾಗಿತ್ತು. ಆದರೆ ಈ ಪಂದ್ಯದಲ್ಲಿ ಜಯ ಸಾಧಿಸಿ ಏಷ್ಯಾ ಕಪ್ ಟಿ20 ಟೂರ್ನಿಗೆ ಗೆಲುವಿನ ವಿದಾಯ ಹೇಳುವ ಕನಸು ಲಂಕಾ ತಂಡದ್ದಾಗಿದೆ. ಟಾಪ್ ಆರ್ಡರ್ ಬ್ಯಾಟರ್ಗಳು ಹಾಗೂ ಬೌಲರ್ಗಳು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಆಡಬೇಕಿದೆ.