ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ನಡುವಣ 3 ಟೆಸ್ಟ್ ಸರಣಿಯ ಕೊನೆಯ ಪಂದ್ಯ ಮುಂಬೈನಲ್ಲಿ ನಡೆಯುತ್ತಿದೆ. ಸರಣಿಯ ಎರಡೂ ಪಂದ್ಯಗಳಲ್ಲಿ ಪ್ರವಾಸಿ ಕಿವೀಸ್ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಈಗ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲು ನ್ಯೂಜಿಲೆಂಡ್ ಸಿದ್ಧವಾಗಿದೆ. ಆದರೆ ಈ ಸರಣಿಯಲ್ಲಿ ಕೊನೆಯ ಟೆಸ್ಟ್ ಪಂದ್ಯ ಗೆದ್ದು ಮಾನ ಉಳಿಸಿಕೊಳ್ಳಲು ಟೀಮ್ ಇಂಡಿಯಾ ಪ್ಲ್ಯಾನ್ ಮಾಡಿಕೊಂಡಿದೆ.
ಟೀಂ ಇಂಡಿಯಾದ ಮಾಜಿ ಕೋಚ್ ಜಾನ್ ರೈಟ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರಂತಹ ಆಟಗಾರರಿಗೆ ತವರಿನಲ್ಲಿ ಕೊನೆಯ ಟೆಸ್ಟ್ ಆಗಿರಬಹುದು ಎಂದು ಹೇಳಿದ್ದಾರೆ.

ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಮಾಜಿ ಕೋಚ್ ರೈಟ್ ತಮ್ಮ ಸಾಮಾಜಿಕ ತಾಣದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಅವರು ರೋಹಿತ್, ವಿರಾಟ್, ಜಡೇಜಾ ಮತ್ತು ಅಶ್ವಿನ್ ಬಗ್ಗೆ ಮಾತನಾಡಿದ್ದಾರೆ. ಈ ಎಲ್ಲಾ ಸ್ಟಾರ್ ಆಟಗಾರರಿಗೂ ಮುಂಬೈನಲ್ಲಿ ಕೊನೆಯ ಟೆಸ್ಟ್ ಆಗುವ ಸಾಧ್ಯತೆ ಇದೆ ಎಂದು ಬರೆದುಕೊಂಡಿದ್ದಾರೆ. ಈ ಸರಣಿಯ ಬಳಿಕ ಹಲವು ಆಟಗಾರರನ್ನು ಟೀಮ್ ಇಂಡಿಯಾ ಕೈ ಬಿಡಬಹುದು ಸ್ಪಷ್ಟವಾಗುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಜಾನ್ ರೈಟ್ ತಮ್ಮ ಸಾಮಾಜಿಕ ಪೋಸ್ಟ್ನಲ್ಲಿ, "ಮುಂಬೈನಲ್ಲಿ ಶುಕ್ರವಾರದಿಂದ ಪ್ರಾರಂಭವಾಗುವ ಟೆಸ್ಟ್ ಶ್ರೇಷ್ಠ ಆಟಗಾರರಾದ ರೋಹಿತ್, ವಿರಾಟ್, ಅಶ್ವಿನ್ ಮತ್ತು ಜಡೇಜಾ ಭಾರತವನ್ನು ಒಟ್ಟಿಗೆ ಪ್ರತಿನಿಧಿಸುವ ಕೊನೆಯ ಹೋಮ್ ಟೆಸ್ಟ್ ಆಗಿರಬಹುದು" ಎಂದು ಬರೆದುಕೊಂಡಿದ್ದಾರೆ.

ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಗೆಲ್ಲಲೇ ಬಹುದು ಎಂದು ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿತ್ತು. ಆದರೆ ಈ ಎಲ್ಲ ಕನಸು ನುಚ್ಚುನೂರಾಗಿದೆ. ಟೀಮ್ ಇಂಡಿಯಾ ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ ಸೋಲು ಕಂಡಿತ್ತು. ಇದಾದ ಬಳಿಕ ಎರಡನೇ ಟೆಸ್ಟ್ ಪುಣೆಯಲ್ಲಿ ನಡೆಯಿತು. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಟೀಮ್ ಇಂಡಿಯಾ ಈ ಟೆಸ್ಟ್ ಗೆದ್ದು ಸರಣಿ ವಶಕ್ಕೆ ಪಡೆಯುವ ಕನಸು ಕಂಡಿತ್ತು. ಆದರೆ ಆ ಆಸೆ ಸಹ ವಿಫಲವಾಗಿದೆ. ಪುಣೆಯಲ್ಲಿ ನಡೆದ ಟೆಸ್ಟ್ನಲ್ಲಿ ಟೀಮ್ ಇಂಡಿಯಾ 113 ರನ್ಗಳಿಂದ ಸೋಲು ಕಂಡಿದೆ.
ಟೀಮ್ ಇಂಡಿಯಾ ತವರಿನಲ್ಲಿ ಸತತ 19ನೇ ಸರಣಿ ಗೆಲುವಿನ ಕನಸಿಗೆ ಬ್ರೇಕ್ ಬಿದ್ದಿದೆ. ಭಾರತದಲ್ಲಿ ಸತತವಾಗಿ 18 ಸರಣಿ ಗೆಲುವಿನ ನಗೆ ಬೀರಿತ್ತು. ಈ ಓಟ್ಟಕ್ಕೆ ಕಿವೀಸ್ ತಡೆ ನೀಡಿದೆ. ಅಲ್ಲದೆ ಭಾರತ 2012ರ ಬಳಿಕ ತವರಿನಲ್ಲಿ ಟೆಸ್ಟ್ ಸರಣಿ ಸೋತಿದೆ. 2012ರಲ್ಲಿ ಟಿಮ್ ಇಂಡಿಯಾ 1-2 ರಿಂದ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಸೋಲು ಕಂಡಿತ್ತು.
ಮೂರನೇ ಟೆಸ್ಟ್ ಮುಂಬೈನಲ್ಲಿ ನಡೆಯಲಿದ್ದು, ಎಲ್ಲರ ಚಿತ್ತ ವಾಂಖೇಡೆ ಅಂಗಳಕ್ಕೆ ಶಿಫ್ಟ್ ಆಗಿದೆ.