ಬೆಂಗಳೂರು, ಡಿಸೆಂಬರ್ 23: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಗೆ 17 ಸದಸ್ಯರ ಟೀಂ ಇಂಡಿಯಾವನ್ನು ಶನಿವಾರ ಸಂಜೆ ಪ್ರಕಟಿಸಲಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯ್ಕೆ ಸಮಿತಿ ಮುಂಬೈನಲ್ಲಿ ಸಭೆ ಸೇರಿ ತಂಡವನ್ನು ಆಯ್ಕೆ ಮಾಡಿದೆ. ಎಂಎಸ್ ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಪ್ರಕಟಿಸಿದಂತೆ ವಿರಾಟ್ ಕೊಹ್ಲಿ ತಂಡಕ್ಕೆ ನಾಯಕರಾಗಿದ್ದು, ವೇಗಿ ಮೊಹಮ್ಮದ್ ಶಮಿ ತಂಡಕ್ಕೆ ಮರಳಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ 6 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲದೆ ಮೂರು ಟೆಸ್ಟ್ ಹಾಗೂ ಟಿ20ಐ ಪಂದ್ಯಗಳನ್ನು ಟೀಂ ಇಂಡಿಯಾ ಆಡಲಿದೆ. ಡಿಸೆಂಬರ್ 27ರಂದು ಟೀಂ ಇಂಡಿಯಾ ವಿಮಾನವೇರಲಿದೆ. ಡಿಸೆಂಬರ್ 30ರಂದು ಮೊದಲ ಅಭ್ಯಾಸ ಪಂದ್ಯವಾಡಲಿದೆ.
ಭಾರತ v/s ದಕ್ಷಿಣ ಆಫ್ರಿಕಾ ಸರಣಿ ವೇಳಾಪಟ್ಟಿ
ನಾಲ್ಕು ತಿಂಗಳ ಬಳಿಕ ತಂಡಕ್ಕೆ ವೇಗಿ ಮೊಹಮ್ಮದ್ ಶಮಿ ಮರಳಿದ್ದಾರೆ. ಜತೆಗೆ ಮುಂಬೈನ ಯುವ ವೇಗಿ ಶಾರ್ದೂಲ್ ಠಾಕೂರ್, ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಕೇದಾರ್ ಜಾಧವ್ ಅವರು ತಂಡ ಸೇರಿದ್ದಾರೆ.
ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ಎಂಎಸ್ ಧೋನಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ,ಶಿಖರ್ ಧವನ್, ದಿನೇಶ್ ಕಾರ್ತಿಕ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್.
ಕೆಎಲ್ ರಾಹುಲ್ ಏಕಿಲ್ಲ?: ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದು, ಶ್ರೀಲಂಕಾ ಸರಣಿಯುದ್ದಕ್ಕೂ ಪೆವಿಲಿಯನ್ ನಲ್ಲಿ ಕುಳಿತ ಅಜಿಂಕ್ಯ ರಹಾನೆ ಅವರನ್ನು ದಕ್ಷಿಣ ಆಫ್ರಿಕಾ ಸರಣಿಗೆ ಆಯ್ಕೆ ಮಾಡಲಾಗಿದೆ. ಆದರೆ, ಲಂಕಾ ವಿರುದ್ಧ ಟಿ20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ರಾಹುಲ್ ಗೆ ಸ್ಥಾನ ಸಿಕ್ಕಿಲ್ಲ.
ಹಿರಿಯ ಆಟಗಾರರಾದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ಕೂಡಾ ತಂಡಕ್ಕೆ ಆಯ್ಕೆಯಾಗಿಲ್ಲ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್ ಹಾಗೂ ಅಕ್ಷರ್ ಪಟೇಲ್ ತಂಡದ ಸ್ಪಿನ್ ವಿಭಾಗದ ಪ್ರಮುಖರಾಗಿದ್ದಾರೆ.