
ನವದೆಹಲಿ, ಜುಲೈ 22: ಐಸಿಸಿ ವಿಶ್ವಕಪ್ 2019ರ ಫೈನಲ್ ಪಂದ್ಯದಲ್ಲಿ ಬೌಂಡರಿ ಸಂಖ್ಯೆಗಳ ಆಧಾರದಲ್ಲಿ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಆಗಿ ಘೋಷಿಸಿದ್ದನ್ನು ಭಾರತದ ಬೌಲಿಂಗ್ ಕೋಚ್ ಭರತ್ ಅರುಣ್ ಟೀಕಿಸಿದ್ದಾರೆ. ಇಂಥ ಸಂದರ್ಭಗಳಲ್ಲಿ ವಿಜೇತ ತಂಡ ಗುರುತಿಸಲು ಬೇರೆ ವಿಧಾನ ಪಾಲಿಸಲು ಅವರು ಸಲಹೆ ನೀಡಿದ್ದಾರೆ.
ಕ್ರಿಕೆಟ್ ಕಾಶಿ ಎಂದು ಕರೆಯಲ್ಪಡುವ ಲಂಡನ್ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಎರಡೂ ತಂಡಗಳೂ 241 ರನ್ ಬಾರಿಸಿ ಪಂದ್ಯವನ್ನು ಟೈ ಮಾಡಿಕೊಂಡಿದ್ದವು. ಅನಂತರ ನಡೆದ ಸೂಪರ್ ಓವರ್ನಲ್ಲೂ ಇತ್ತಂಡಗಳು 15 ರನ್ಗಳ ಸಮಬಲ ಸಾಧಿಸಿದ್ದವು.
ಆದರೆ ಬೌಂಡಿರಿ ಸಂಖ್ಯೆಗಳ ನಿಯಮವನ್ನು ಅನುಸರಿಸಿ ಇಯಾನ್ ಮಾರ್ಗನ್ ನಾಯಕತ್ವದ ಇಂಗ್ಲೆಂಡನ್ನು ವಿಜೇತ ತಂಡವೆಂದು ಘೋಷಿಸಲಾಯ್ತು. ಇಂಗ್ಲೆಂಡ್ ಚೊಚ್ಚಲ ಟ್ರೋಫಿ ಗೆದ್ದು ಇತಿಹಾಸ ಬರೆಯಿತಾದರೂ ಕೇನ್ ವಿಲಿಯಮ್ಸನ್ ಬಳಗದ ಚೊಚ್ಚಲ ವಿಶ್ವಕಪ್ ಟ್ರೋಫಿಯ ಕನಸು ಮಣ್ಣುಪಾಲಾಗಿತ್ತು. ಹೀಗಾಗಿ ಬೌಂಡರಿ ಕೌಂಟ್ ನಿಯಮಕ್ಕೆ ಕ್ರಿಕೆಟ್ ವಲಯದಿಂದ ಟೀಕೆಯೂ ವ್ಯಕ್ತವಾಗಿತ್ತು.
'ಸಚಿನ್ ತೆಂಡೂಲ್ಕರ್ ಹೇಳಿದ ಒಂದು ಹೆಚ್ಚುವರಿ ಓವರ್ ವಿಧಾನವನ್ನು ನಾನು ಒಪ್ಪಿದ್ದೇನೆ. ರನ್ ಮೂಲಕ ವಿಜೇತ ತಂಡ ಗುರುತಿಸಲು ಇನ್ನೂ ಅನೇಕ ವಿಧಾನಗಳಿರುವಾಗಲೂ ಯಾಕೆ ಬೌಂಡರಿ ಕೌಂಟ್ ವಿಧಾನವನ್ನು ನೆಚ್ಚಿಕೊಂಡಿದ್ದಾರೆ? ವಿಕೆಟ್ ಪತನದ ಮೂಲಕ ವಿಜೇತರನ್ನು ಗುರುತಿಸೋದೂ ಅತ್ಯುತ್ತಮ ವಿಧಾನ,' ಎಂದು ಭರತ್ ಅರುಣ್ ಸ್ಪೋರ್ಟ್ಸ್ ಸ್ಟಾರ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಸೆಮಿಫೈನಲ್ ಹಂತದಲ್ಲಿ ಟೂರ್ನಿಯ ಅಂಕಪಟ್ಟಿಯ ಅಗ್ರ ಎರಡರಲ್ಲಿ ಗುರುತಿಸಿಕೊಂಡ ತಂಡಗಳಿಗೆ ಹೆಚ್ಚಿನ ಅನುಕೂಲ ಒದಗಿಸಬೇಕು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಅಗ್ರ ಎರಡು ಸ್ಥಾನಿಗಳಿಗೆ ಹೆಚ್ಚಿನ ಅವಕಾಶಗವಿರುವಂತೆ ವಿಶ್ವಕಪ್ನಲ್ಲೂ ನಿಯಮ ತರಬೇಕೆಂದು ಭರತ್ ಸಲಹೆ ನೀಡಿದ್ದಾರೆ.