ಹೈದರಾಬಾದ್: ಮುತ್ತಿನ ನಗರಿಯಲ್ಲಿ ಅಬ್ಬರದ ಆಟವನ್ನು ಪ್ರದರ್ಶಿಸಿದ ಟೀಮ್ ಇಂಡಿಯಾ 133 ರನ್ಗಳಿಂದ ಬಾಂಗ್ಲಾದೇಶವನ್ನು ಮೂರನೇ ಟಿ20 ಪಂದ್ಯದಲ್ಲಿ ಮಣಿಸಿ, ಟಿ20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 6 ವಿಕೆಟ್ಗೆ 297 ರನ್ ಸೇರಿಸಿತು. ಇದಕ್ಕುತ್ತವಾಗಿ ಬ್ಯಾಟ್ ಮಾಡಿದ ಬಾಂಗ್ಲಾ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 164 ರನ್ ಕಲೆ ಹಾಕಿ ಸೋಲು ಕಂಡಿತು. ಈ ಮೂಲಕ ಭಾರತ ಟಿ20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಮೂರನೇ ಗರಿಷ್ಠ ಅಂತರದಿಂದ ಗೆದ್ದ ಪಂದ್ಯ ಎಂಬ ಹೆಗ್ಗಳಿಕೆ ಟೀಮ್ ಇಂಡಿಯಾ ಪಾಲಾಗಿದೆ.

ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿ ಜಯ ಸಾಧಿಸಿ ಆತ್ಮ ವಿಶ್ವಾಸದಲ್ಲಿ ಭಾರತ ಪ್ರವಾಸ ಬೆಳೆಸಿದ್ದ ಬಾಂಗ್ಲಾದೇಶ, ಭಾರತಕ್ಕೆ ಕಠಿಣ ಸವಾಲು ನೀಡುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಟೀಮ್ ಇಂಡಿಯಾ ಬಾಂಗ್ಲಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ ಎರಡೂ ಟೆಸ್ಟ್ ಪಂದ್ಯ ಗೆದ್ದು ಕ್ಲೀನ್ ಸ್ವೀಪ್ ಸಾಧನೆ ಮಾಡಿತ್ತು. ಈಗ ಟಿ20 ಸರಣಿಯಲ್ಲೂ ಇಂತಹದ್ದೇ ಸಾಧನೆ ಟೀಮ್ ಇಂಡಿಯಾ ಮಾಡಿದೆ.
ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಬಾಂಗ್ಲಾದೇಶದ ಆರಂಭ ಕಳಪೆ ಆಗಿತ್ತು. ಬಾಂಗ್ಲಾ ತಂಡದ ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಭರವಸೆಯ ಆಟಗರ ಲಿಟನ್ ದಾಸ್ ಸಮಯೋಚಿತ ಆಟದ ಪ್ರದರ್ಶನ ನೀಡಿದರು. ಇವರು 8 ಬೌಂಡರಿ ಸೇರಿದಂತೆ 42 ರನ್ ಸಿಡಿಸಿ ಔಟ್ ಆದರು. ಇನ್ನು ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಹೃದಯಿ ತೌಹಿದ್ ಕ್ಲಾಸಿಕ್ ಆಟದ ಪ್ರದರ್ಶನ ನೀಡಿದರು. ಇವರು 5 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 63 ರನ್ ಸಿಡಿಸಿದರು. ಅಲ್ಲದೆ ಸೋಲಿನ ಅಂತರವನ್ನು ಕಡಿಮೆ ಮಾಡುವಲ್ಲಿ ಶ್ರಮಿಸಿದರು.
ಭಾರತದ ಪರ ರವಿ ಬಿಷ್ಣೋಯಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದರು. ಇವರು 4 ಓವರ್ ಬೌಲಿಂಗ್ ನಡೆಸಿ 30 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ಇನ್ನು ಮಯಾಂಕ್ ಯಾದವ್ 32 ರನ್ ನೀಡಿ 2 ವಿಕೆಟ್ ಕಬಳಿಸಿದರು.
ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿತು. ಅಭಿಷೇಕ್ ಶರ್ಮಾ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಎರಡನೇ ವಿಕೆಟ್ಗೆ ಸಂಜು ಸ್ಯಾಮ್ಸನ್ ಹಾಗೂ ಸೂರ್ಯಕುಮಾರ್ ಯಾದವ್ 70 ಎಸೆತಗಳಲ್ಲಿ 173 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು. ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಕೇವಲ 47 ಎಸೆತಗಳಲ್ಲಿ 11 ಬೌಂಡರಿ 8 ಸಿಕ್ಸರ್ ಸಹಾಯದಿಂದ 111 ರನ್ ಸಿಡಿಸಿ ಔಟ್ ಆದರು. ನಾಯಕ ಸೂರ್ಯಕುಮಾರ್ ಯಾದವ್ 8 ಬೌಂಡರಿ, 5 ಸಿಕ್ಸರ್ ನೆರವಿನಿಂದ 75 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 47 ರನ್ ಸಿಡಿಸಿದರು.