ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಆಸೆ ಕನಸು ಫಲಿಸಿದೆ. ಟೀಮ್ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಚಾಂಪಿಯನ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ ಇತಿಹಾಸ ನಿರ್ಮಿಸಿದೆ. ಏಕಪಕ್ಷೀಯವಾಗಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಸ್ಥಿರ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಈ ಮೂಲಕ ಐತಿಹಾಸಿಕ ಸಾಧನೆಯನ್ನು ಮಾಡಿದೆ. ಭಾನುವಾರ ಫೈನಲ್ ಪಂದ್ಯವನ್ನು ಗೆಲ್ಲುತ್ತಿದ್ದಂತೆ ಭಾರತ ಮೂರು ದಾಖಲೆಗಳನ್ನು ನಿರ್ಮಿಸಿದೆ.
ಭಾನುವಾರ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯ ಎಲ್ಲರ ಚಿತ್ತ ಕದ್ದಿತ್ತು. ಈ ವೇಳೆ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 255 ರನ್ ಸೇರಿಸಿತು. ಈ ವೇಳೆ ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್ಗಳಾದ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ಅರ್ಧಶತಕ ಬಾರಿಸಿ ತಂಡಕ್ಕೆ ಆಧಾರವಾದರು. ಸವಾಲಿನ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡಕ್ಕೆ ಜಸ್ಪ್ರೀತ್ ಬುಮ್ರಾ ಹಾಗೂ ಅಕ್ಷರ್ ಪಟೇಲ್ ಬಹುವಾಗಿ ಕಾಡಿದರು. ಪರಿಣಾಮ ನ್ಯೂಜಿಲೆಂಡ್ 96 ರನ್ಗಳಿಂದ ಫೈನಲ್ ಪಂದ್ಯವನ್ನು ಸೋತು ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕೈ ಚೆಲ್ಲಿತು.

ವೆಸ್ಟ್ ಇಂಡೀಸ್ ಹಾಗೂ ಅಮೆರಿಕದ ಆತಿಥ್ಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ರೋಹಿತ್ ಶರ್ಮಾ ಪಡೆ ಮುಡಿಗೇರಿಸಿಕೊಂಡಿತ್ತು. ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕೆ ಇಳಿದ ಭಾರತ ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ಸ್ಪರ್ಧಿ ಎಂದೇ ಹೇಳಲಾಗಿತ್ತು. ಅಹಮದಾಬಾದ್ನಲ್ಲಿ ಭಾರತ ಭರ್ಜರಿ ಪ್ರದರ್ಶನ ನೀಡಿ ತವರಿನಲ್ಲಿ ಪ್ರಶಸ್ತಿ ಗೆದ್ದಿದೆ. ಅಲ್ಲದೆ ವಿಶ್ವದಲ್ಲೇ ಯಾವುದೇ ತಂಡ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಎರಡು ಬಾರಿ ಗೆದ್ದಿಲ್ಲ. ಈ ಸಾಧನೆ ಈಗ ಭಾರತದ ಪಾಲಾಗಿದೆ.
ಈ ಬಾರಿಯ ಟಿ20 ವಿಶ್ವಕಪ್ನ್ನು ಭಾರತ ಹಾಗೂ ಶ್ರೀಲಂಕಾ ತಂಡಗಳು ಆಯೋಜಿಸಿದ್ದವು. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಎ ಗುಂಪಿನಲ್ಲಿ ಸ್ಥಾನ ಪಡೆದಿತ್ತು. ಲೀಗ್ ಹಂತದಲ್ಲಿ ಸ್ಥಿರ ಪ್ರದರ್ಶನ ನೀಡಿದ ಭಾರತ, ಸೂಪರ್ 8 ಹಂತದಲ್ಲಿ ಸ್ಥಾನ ಪಡೆಯಿತು. ಸೂಪರ್ 8 ಹಂತದಲ್ಲಿ ಒಂದು ಪಂದ್ಯ ಸೋತರೂ ಭಾರತ, ಇದೇ ಹಂತದಲ್ಲಿ ಜಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿತು. ಈ ಮೂಲಕ ಭಾರತ ಸೆಮಿಫೈನಲ್ಗೆ ಅರ್ಹತೆ ಪಡೆಯಿತು. ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 7 ರನ್ಗಳಿಂದ ಭಾರತ ಫೈನಲ್ಗೆ ಅರ್ಹತೆ ಪಡೆದಿತ್ತು. ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಪ್ರಶಸ್ತಿ ಗೆಲ್ಲುವ ಆಸೆ ಭಾನುವಾರ ಫಲಿಸಿದೆ. ಈ ಮೂಲಕ ಭಾರತ 2011ರ ಏಕದಿನ ವಿಶ್ವಕಪ್ನ್ನು ತವರಿನಲ್ಲಿ ಗೆದ್ದಿತ್ತು. ಈ ಬಾರಿಯ ಚುಟುಕು ವಿಶ್ವಕಪ್ನ್ನು ಗೆದ್ದು ಬೀಗಿದೆ.
ಟಿ20 ವಿಶ್ವಕಪ್ನ್ನು ಈ ವರೆಗೆ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳು ತಲಾ ಎರಡು ಬಾರಿ ಗೆದ್ದಿದ್ದವು. ಆದರೆ ಯಾವುದೇ ತಂಡ ಮೂರನೇ ಬಾರಿ ಗೆದ್ದಿರಲಿಲ್ಲ. 2007ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ಈ ಸಾಧನೆ ಮಾಡಿತ್ತು. ಬಳಿಕ 2024ರಲ್ಲಿ ರೋಹಿತ್ ಶರ್ಮಾ ಪಡೆ ಈ ಸಾಧನೆ ಮಾಡಿತ್ತು. ಈಗ ಸೂರ್ಯಕುಮಾರ್ ಯಾದವ್ ಪಡೆ ಪ್ರಶಸ್ತಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ.