ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ. ನಾಲ್ಕನೇ ಇನಿಂಗ್ಸ್ನಲ್ಲಿ 371 ರನ್ಗಳನ್ನು ಚೇಸ್ ಮಾಡಿದ ಇಂಗ್ಲೆಂಡ್ ಇತಿಹಾಸ ಬರೆದಿದೆ. ಈಗ ಟೀಮ್ ಇಂಡಿಯಾ ಚಿತ್ತ ಎರಡನೇ ಟೆಸ್ಟ್ ಮೇಲೆ ನೆಟ್ಟಿದೆ. ಈ ಟೆಸ್ಟ್ಗೂ ಮುನ್ನ ಭಾರತ ತಂಡದಿಂದ ಆ ಒಬ್ಬ ಸ್ಟಾರ್ ವೇಗದ ಬೌಲರ್ನ್ನು ತಂಡದಿಂದ ಕೈ ಬಿಡಲಾಗಿದೆ.
ಎಡ್ಜ್ ಬಸ್ಟನ್ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ಗೂ ಮುನ್ನ ಟೀಮ್ ಇಂಡಿಯಾ ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಇದರಂತೆ 18 ಆಟಗಾರರ ತಂಡದಲ್ಲಿ ಸ್ಥಾನ ಪಡೆದಿದ್ದ ಹರ್ಷಿತ್ ರಾಣಾ ಅವರನ್ನು ಕೈ ಬಿಡಲಾಗಿದೆ. ಜುಲೈ 2 ರಿಂದ ಆರಂಭವಾಗುವ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ದೊಡ್ಡ ನಿರ್ಧಾರ ಕೈಗೊಂಡಿದೆ.

ಇಂಗ್ಲೆಂಡ್ ಪ್ರವಾಸಕ್ಕೆ ಟೀಮ್ ಇಂಡಿಯಾನ್ನು ಘೋಷಿಸಿದಾಗ, ಪ್ರಕಟಿತ 18 ಜನರ ತಂಡದಲ್ಲಿ ಹರ್ಷಿತ್ ರಾಣಾ ಅವರಿಗೆ ಸ್ಥಾನ ಲಭಿಸಿತ್ತು. ಇವರು ಭಾರತ "ಎ" ಪರ ಇಂಗ್ಲೆಂಡ್ ಲಯನ್ಸ್ ವಿರುದ್ಧ ಆಡಿದ 2 ಅನಧಿಕೃತ ಟೆಸ್ಟ್ ಪಂದ್ಯದ ಭಾಗವಾಗಿದ್ದರು. ಈ ಪಂದ್ಯಗಳ ಬಳಿಕ ಇವರನ್ನು ತಂಡದಲ್ಲಿ ಇರಿಸಿಕೊಳ್ಳಲಾಯಿತು. ಇದೇ ತಂಡದ ಭಾಗವಾಗಿದ್ದ ಉಳಿದ ಆಟಗಾರರು ಈಗಾಗಲೇ ತವರಿಗೆ ಮರಳಿದ್ದರು.
ಲೀಡ್ಸ್ ಪಂದ್ಯ ಮುಗಿದಿದೆ ಈಗ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಹರ್ಷಿತ್ ರಾಣಾ ಅವರನ್ನು ತಂಡದಿಂದ ಕೈ ಬಿಟ್ಟಿದೆ. ಇವರು ಈಗ ಭಾರತದ ಫ್ಲೈಟ್ ಏರಲಿದ್ದಾರೆ. ಇವರು ಎರಡನೇ ಟೆಸ್ಟ್ಗೆ ಪ್ರವಾಸ ಬೆಳೆಸಿರುವ ಭಾರತ ತಂಡದ ಭಾಗವಾಗಿಲ್ಲ.

ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಲ್ಲಿ ಹರ್ಷಿತ್ ರಾಣಾ ಅವರ ಕೊಡುಗೆ ಅಪಾರ. ದೇಶೀಯ ಟೂರ್ನಿಗಳಲ್ಲೂ ಸ್ಥಿರ ಪ್ರದರ್ಶನ ನೀಡಿದ ಇವರಿಗೆ ಬಿಸಿಸಿಐ ಆಯ್ಕೆ ಸಮಿತಿ ಬುಲವಾ ನೀಡಿತು. ಅಲ್ಲದೆ ಆಸ್ಟ್ರೇಲಿಯಾ ಪ್ರವಾಸ ಬೆಳೆಸುವ ತಂಡದಲ್ಲಿ ಸ್ಥಾನ ನೀಡಿತು. ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಹರ್ಷಿತ್ ರಾಣಾ ಅವರಿಗೆ 2 ಟೆಸ್ಟ್ ಪಂದ್ಯಗಳನ್ನು ಆಡುವ ಅವಕಾಶವನ್ನು ನೀಡಲಾಯಿತು. ಆದರೆ ಹರ್ಷಿತ್ ರಾಣಾ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಎಡವಿದರು.
ಹರ್ಷಿತ್ ರಾಣಾ ಆಡಿಲೇಡ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕೊನೆಯ ಬಾರಿಗೆ ಭಾರತ ತಂಡದ ಭಾಗವಾಗಿದ್ದರು. ಇವರು ಆಡಿದ 2 ಪಂದ್ಯಗಳಲ್ಲಿ 4 ವಿಕೆಟ್ ಕಬಳಿಸುವಲ್ಲಿ ಮಾತ್ರ ಸಫಲರಾಗಿದ್ದರು.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಆಂಡರ್ಸನ್-ತೆಂಡೂಲ್ಕರ್ ಸರಣಿಯ ಎರಡನೇ ಪಂದ್ಯ ಎಡ್ಜ್ ಬಸ್ಟನ್ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಪುಟಿದೇಳುವ ಲೆಕ್ಕಾಚಾರ ಟೀಮ್ ಇಂಡಿಯಾದ್ದಾಗಿದೆ. ಈ ವೇಳೆ ತಂಡದಲ್ಲಿ ಬದಲಾವಣೆಯ ಗಾಳಿ ಬೀಸುವ ಸಾಧ್ಯತೆ ಇದೆ.