ಆರಂಭಿಕ ವೈಫಲ್ಯ
ಭಾರತಕ್ಕೆ ಆರಂಭಿಕ ವೈಫಲ್ಯ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಶಿಖರ್ ಧವನ್, ಮುರಳಿ ವಿಜಯ್, ಕೆ.ಎಲ್.ರಾಹುಲ್ ಯಾರೂ ನಿರೀಕ್ಷಿತ ಬ್ಯಾಟಿಂಗ್ ಮಾಡಿಯೇ ಇಲ್ಲದಿರುವುದು ಕೊಹ್ಲಿ ತಲೆ ನೋವು ಹೆಚ್ಚಿಸಿದೆ.
ಮಧ್ಯಮಕ್ರಮಾಂವೂ ವಿಫಲ
ಭಾರತದ ಮಧ್ಯಮ ಕ್ರಮಾಂಕವೂ ವಿಫಲಗೊಂಡಿದೆ. ಕಳೆದ ಟೆಸ್ಟ್ನಲ್ಲಿ ಸ್ಥಾನ ಪಡೆದಿದ್ದ ಚೆತೇಶ್ವರ್ ಪುಜಾರಾ ಕೂಡ ಎರಡೂ ಇನ್ನಿಂಗ್ಸ್ನಲ್ಲಿ ವಿಫಲರಾಗಿದ್ದರು. ಅಜಿಂಕ್ಯ ರಹಾನೆ ಕೂಡ ಆಡಲಿಲ್ಲ, ದಿನೇಶ್ ಕಾರ್ತಿಕ್ ಆಡಲಿಲ್ಲ, ಇನ್ನು ಆಲ್ರೌಂಡರ್ ಎಂದು ಕರೆಸಿಕೊಳ್ಳುವ ಹಾರ್ದಿಕ್ ಪಾಂಡ್ಯಾಗೆ ಟೆಸ್ಟ್ ಆಡುವ ಪರಿಪಕ್ವತೆಯೆ ಬಂದಿಲ್ಲ ಎನಿಸುತ್ತದೆ. ಇದ್ದದರಲ್ಲಿ ರವಿಚಂದ್ರನ್ ಅಶ್ವಿನ್ ಅಲ್ಪ ಹೋರಾಟದ ಮನೋಭಾವ ತೋರಿದ್ದಾರೆ.
ಕೊಹ್ಲಿ ಮೇಲೆ ಅವಲಂಬಿತ
ಭಾರತದ ಸಂಪೂರ್ಣ ಬ್ಯಾಟಿಂಗ್ ಕೊಹ್ಲಿ ಮೇಲೆ ಅವಲಂಬಿತವಾಗಿರುವಂತೆ ಕಳೆದೆರಡು ಟೆಸ್ಟ್ ಪಂದ್ಯದಲ್ಲಿ ಕಂಡು ಬಂತು. ಅವರೊಬ್ಬರು ಬಿಟ್ಟು ಇನ್ನಾವ ಬ್ಯಾಟ್ಸ್ಮನ್ ಸಹ ಸಫಲರಾಗದಿರುವುದು ಎರಡೂ ಟೆಸ್ಟ್ ವಿಶೇಷವಾಗಿ ಮೊದಲ ಟೆಸ್ಟ್ ಸೋಲಲು ಪ್ರಮುಖ ಕಾರಣ. ಕೊಹ್ಲಿ ಔಟಾದರೆ ಭಾರತದ ಇನ್ನಿಂಗ್ಸ್ ಮುಗಿದಂತೆ ಎಂಬ ಸ್ಥಿತಿ ಈಗ ನಿರ್ಮಾಣವಾಗಿದೆ.
ಬೌಲಿಂಗ್ನಲ್ಲಿಯೂ ಸಮಸ್ಯೆ
ಮೊದಲ ಟೆಸ್ಟ್ ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ್ದ ಭಾರತದ ಬೌಲರ್ಗಳು ಎರಡನೇ ಟೆಸ್ಟ್ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಬೌಲರ್ಗಳಿಗೆ ಸಹಕಾರಿಯಾದ ಪಿಚ್ನ ಸರಿಯಾದ ಉಪಯೋಗ ಮಾಡಿಕೊಳ್ಳಲು ಎರಡನೇ ಟೆಸ್ಟ್ನಲ್ಲಿ ನಮ್ಮ ಬೌಲರ್ಗಳು ವಿಫಲರಾದರು ಆದರೆ ಇಂಗ್ಲೆಂಡ್ ಬೌಲರ್ಗಳು ಪಿಚ್ನ ಸರಿಯಾದ ಉಪಯೋಗ ಮಾಡಿಕೊಂಡು ಭಾರತ ಗಂಟು-ಮೂಟೆ ಕಟ್ಟುವಂತೆ ಮಾಡಿದರು.
ಇದು ಮಾಡು ಇಲ್ಲವೆ ಮಡಿ ಪಂದ್ಯ
ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇದು ಮೂರನೇ ಪಂದ್ಯವಾಗಿದ್ದು ಈ ಪಂದ್ಯ ಗೆದ್ದರೆ ಭಾರತವು ಸರಣಿಯ ರೇಸ್ನಲ್ಲಿ ಉಳಿಯಲಿದೆ. ಈ ಟೆಸ್ಟ್ ಪಂದ್ಯ ಗೆದ್ದು ಸರಣಿ ತನ್ನದಾಗಿಸಿಕೊಳ್ಳುವ ಪ್ರಯತ್ನದಲ್ಲಿ ಇಂಗ್ಲೆಂಡ್ ಇದೆ. ಭಾರತವು ಈ ಪಂದ್ಯದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಟ್ಟು ಕನಿಷ್ಟ ಡ್ರಾಗಾದರೂ ಪ್ರಯತ್ನ ಪಡಲಿದೆ.
ಟಾಸ್ ಗೆದ್ದರೆ ಬೌಲಿಂಗ್ ಆಯ್ಕೆ
ಈ ಪಿಚ್ ವೇಗಿಗಳಿಗೆ ಹೆಚ್ಚಿನ ನೆರವು ನೀಡಲಿದೆ. ಅದರಲ್ಲಿಯೂ ಕಳೆದ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಲೈನ್ಅಪ್ನ ಸೊಂಟ ಮುರಿದ ವೇಗಿ ಜೇಮ್ಸ್ ಆಂಡರ್ಸನ್ ಗೆ ಇಲ್ಲಿನ ಪಿಚ್ ಅಚ್ಚು ಮೆಚ್ಚು. ಮೊದಲ ದಿನ ಹಸಿರಾಗಿರುವ ಪಿಚ್ ಕೊನೆಯ ದಿನದ ವೇಳೆಗೆ ಸ್ವಿಂಗ್ ಗುಣ ಕಳೆದುಕೊಳ್ಳುತ್ತದೆ ಎನ್ನುತ್ತಾರೆ ವಿಶ್ಲೇಷಕರು, ಹಾಗಾಗಿ ಟಾಸ್ ಗೆದ್ದವರು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ.
ಆಟಗಾರರ ಬದಲಾವಣೆ
ಭಾರತ ತಂಡಕ್ಕೆ ಈ ಪಂದ್ಯದಿಂದ ರಿಷಬ್ ಪಂತ್ ಪಾದಾರ್ಪಣೆ ಮಾಡುವ ಸಾಧ್ಯತೆ ಇದೆ. ಕೆಟ್ಟ ಫಾರ್ಮ್ನಲ್ಲಿರುವ ದಿನೇಶ್ ಕಾರ್ತಿಕ್ ಹೊರ ಉಳಿಯಲಿದ್ದಾರೆ. ಜಸ್ಪ್ರಿತ್ ಬುಮ್ರಾ ಫಿಟ್ ಆಗಿದ್ದು ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ಅವರಿಗೆ ಸ್ಥಾನ ದೊರೆತರೆ ಕುಲದೀಪ್ ಯಾದವ್ ಹೊರಗುಳಿಯುತ್ತಾರೆ.