ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಭರ್ಜರಿ ಆರಂಭವನ್ನು ಮಾಡಿದೆ. ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸಿದೆ. ಈ ಮೂಲಕ 4 ಪಂದ್ಯಗಳ ಟಿ20 ಸರಣಿಯಲ್ಲಿ ಮುನ್ನಡೆ ಸಾಧಿಸುವ ಕನಸನ್ನು ಭಾರತ ತಂಡ ಕಾಣುತ್ತಿದೆ. ಸೂರ್ಯಕುಮಾರ್ ಯಾದವ್ ಪಡೆ ಆತ್ಮವಿಶ್ವಾಸದಲ್ಲಿದ್ದು, ಮತ್ತೊಂದು ಗೆಲುವಿನ ಆಸೆ ಕಾಣುತ್ತಿದೆ. ಇನ್ನು ಟೀಮ್ ಇಂಡಿಯಾದ ಪರ ಎರಡನೇ ಟಿ20 ಪಂದ್ಯದಲ್ಲಿ ಆರ್ಸಿಬಿ ತಂಡದ ಸ್ಟಾರ್ ಬೌಲರ್ ಯಶ್ ದಯಾಳ್ ಪದಾರ್ಪಣೆ ಮಾಡುವ ಸಾಧ್ಯತೆ ಇದೆ.
ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾವನ್ನು 61 ರನ್ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಪೂರ್ಣ 20 ಓವರ್ಗಳನ್ನು ಆಡಲು ಸಾಧ್ಯವಾಗಿರಲಿಲ್ಲ. ಮೊದಲ ಟಿ20 ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಶತಕ ಬಾರಿಸಿ ಭರವಸೆ ಮೂಡಿಸಿದ್ದರು. ಈಗ ಇವರ ಮೇಲೆ ಭರವಸೆ ಹೆಚ್ಚಿದೆ.

ಟೀಮ್ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿದ್ದಾರೆ. ಈ ಚಿಂತೆ ಟೀಮ್ ಮ್ಯಾನೇಜ್ಮೆಂಟ್ಗೆ ಕಾಡುತ್ತಿದೆ. ಅಭಿಷೇಕ್ ಸತತ ಐದು ಪಂದ್ಯಗಳಲ್ಲಿ ರನ್ ಕಲೆ ಹಾಕುವಲ್ಲಿ ಎಡವುತ್ತಿದ್ದಾರೆ. ಇದುವರೆಗೆ ಇವರು ಆಡಿದ 8 ಇನ್ನಿಂಗ್ಸ್ ಗಳಲ್ಲಿ 1 ಶತಕ ಸಿಡಿಸಿದ್ದಾರೆ. ಉಳಿದ 7 ಇನ್ನಿಂಗ್ಸ್ಗಳಲ್ಲಿ ಅವರ ಉತ್ತಮ ಸ್ಕೋರ್ 16 ರನ್ ಆಗಿದೆ. ಆದ್ದರಿಂದ ಅಭಿಷೇಕ್ ಶರ್ಮಾ ತಮ್ಮ ಫಾರ್ಮ್ಗೆ ಮರಳುವ ಅನಿವಾರ್ಯತೆ ಇದೆ.
ನಿಜಕ್ಕೂ ಅಭಿಷೇಕ್ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವುದು ದೊಡ್ಡ ಚಿಂತೆ ಆಗಿದೆ. ಆದರೆ ಎರಡನೇ 20 ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಪ್ರಯೋಗಕ್ಕೆ ಟೀಮ್ ಮ್ಯಾನೇಜ್ಮೆಂಟ್ ಮಣೆ ಹಾಕುತ್ತಿಲ್ಲ. ತಮ್ಮ ಮೇಲಿನ ಒತ್ತಡವನ್ನು ಅಭಿಷೇಕ್ ಮೆಟ್ಟಿನಿಂತು ಬ್ಯಾಟ್ ಮಾಡಬೇಕಿದೆ.

ಟೀಮ್ ಇಂಡಿಯಾದ ಪರ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ರಿಂಕು ಸಿಂಗ್ ಸ್ಥಿರ ಆಟದ ಪ್ರದರ್ಶನವನ್ನು ನೀಡಬೇಕಿದೆ. ಆಲ್ ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ತಮ್ಮ ಕ್ಷಮತೆಯನ್ನು ಪ್ರದರ್ಶಿಸಿದರೆ, ಗೆಲುವು ಸಾಧ್ಯ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಕಾಣಿಸಿಕೊಳ್ಳುವುದು ಡೌಟ್. ಯಶ್ ದಯಾಳ್ ಪದಾರ್ಪಣೆಗಾಗಿ ಇನ್ನು ಕಾಯಬೇಕಾಗಬಹುದು. ಮೊದಲ ಪಂದ್ಯದಲ್ಲಿ ಮೊನಚಾದ ದಾಳಿ ಸಂಘಟಿಸಿದ ಅರ್ಷದೀಪ್ ಸಿಂಗ್ ಹಾಗೂ ಆವೀಶ್ ಖಾನ್ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ.
ಸಂಭವ್ಯ ಭಾರತ ತಂಡ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಆವೀಶ್ ಖಾನ್/ ಯಶ್ ದಯಾಳ್.