ರಾಜ್ಕೋಟ್ನಲ್ಲಿ ಮಂಗಳವಾರ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟಿ20 ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯನ್ನು ಇನ್ನು ಎರಡೂ ಪಂದ್ಯಗಳು ಬಾಕಿ ಇರುವಂತೆ ಜಯಿಸಲು ಟೀಮ್ ಇಂಡಿಯಾ ಪ್ಲ್ಯಾನ್ ಮಾಡಿಕೊಂಡಿದೆ. ಇನ್ನು ಇಂಗ್ಲೆಂಡ್ ಮಹತ್ವದ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಪುಟಿದೇಳುವ ಆಸೆಯನ್ನು ಹೊಂದಿದೆ. ಉಭಯ ತಂಡಗಳು ಬಲಾಢ್ಯವಾಗಿದ್ದು, ಎಲ್ಲರ ಚಿತ್ತ ಕದ್ದಿದೆ.
ಭಾರತ ಈಗಾಗಲೇ ಕೋಲ್ಕತ್ತಾ ಹಾಗೂ ಚೆನ್ನೈನಲ್ಲಿ ನಡೆದ ಟಿ20 ಪಂದ್ಯದಲ್ಲಿ ಜಯ ಸಾಧಿಸಿದೆ. ಈಗ ಮೂರನೇ ಟಿ20 ಪಂದ್ಯ ಗೆದ್ದು ಸರಣಿಯನ್ನು ವಶಕ್ಕೆ ಪಡೆಯುವ ಕನಸಿನಲ್ಲಿದೆ. ಟೀಮ್ ಇಂಡಿಯಾದ ಯುವ ಆಟಗಾರರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇನ್ನು ಟೀಮ್ ಇಂಡಿಯಾದಲ್ಲಿ ಮೂರನೇ ಪಂದ್ಯಕ್ಕೆ ಮೊಹಮ್ಮದ್ ಶಮಿ ಮೈದಾನಕ್ಕೆ ಇಳಿಯುತ್ತಾರಾ ಎಂಬ ಪ್ರಶ್ನೆ ಮೂಡಿದೆ.

ರಾಜ್ಕೋಟ್ನ ಪಿಚ್ನಲ್ಲಿ ಬೌನ್ಸ್ ಇರಲಿದ್ದು, ಇನ್ನೊಬ್ಬ ವೇಗದ ಬೌಲರ್ ಟೀಮ್ ಇಂಡಿಯಾ ಪರ ಕಣಕ್ಕೆ ಇಳಿಯಬಹುದು. ಅದು ಮೊಹಮ್ಮದ್ ಶಮಿ ಆದರೆ ಅಭಿಮಾನಿಗಳಲ್ಲಿ ಡಬಲ್ ಖುಷಿ. ಇಲ್ಲಾ ಆಲ್ರೌಂಡರ್ಗೆ ಸೂರ್ಯ ಮಣೆ ಹಾಕಿದರೆ, ನಿತೀಶ್ ಕುಮಾರ್ ರೆಡ್ಡಿಗೆ ಒಂದು ಚಾನ್ಸ್ ನೀಡುವ ಸಾಧ್ಯತೆ ಇದೆ. ಉಳಿದಂತೆ ತಂಡದಲ್ಲಿ ಹೆಚ್ಚಿನ ಬದಲಾವಣೆಗಳು ಕಾಣಿಸಿಕೊಳ್ಳುವುದು ಕಡಿಮೆ. ವೇಗದ ಬೌಲಿಂಗ್ ವಿಭಾಗದಲ್ಲಿ ಅರ್ಷದೀಪ್ ಸಿಂಗ್ ಅವರಿಗೆ ಶಮಿ ಸಾಥ್ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.
ಟೀಮ್ ಇಂಡಿಯಾ ಪರ ಕಣಕ್ಕೆ ಇಳಿಯುವ ಟಾಪ್ ಆರ್ಡರ್ ಬ್ಯಾಟರ್ಗಳ ಮೇಲೆ ಎಲ್ಲರ ಕಣ್ಣು ನೆಟ್ಟಿರಲಿದೆ. ಇವರು ಈಗಾಗಲೇ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ತಮ್ಮ ಬ್ಯಾಟಿಂಗ್ ಕ್ಷಮತೆಯನ್ನು ಸಾಬೀತು ಪಡಿಸಿದ್ದಾರೆ. ಸಂಜು ಸ್ಯಾಮ್ಸನ್ಗೆ ಈ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್ ಆಡುವ ಅನಿವಾರ್ಯತೆ ಇದೆ. ಇನ್ನು ಕಳೆದ ಬಾರಿ ಈ ಮೈದಾನದಲ್ಲಿ ಪಂದ್ಯ ನಡೆದಾಗ ಸೂರ್ಯಕುಮಾರ್ ಯಾದವ್ ಶತಕ ಬಾರಿಸಿ ಅಬ್ಬರಿಸಿದರು. ಮೂರನೇ ಪಂದ್ಯದಲ್ಲೂ ಇಂತಹದ್ದೇ ಏನಾದ್ರೂ ಸಾಧನೆ ಮಾಡ್ತಾರಾ ಎಂದು ಅಭಿಮಾನಿಗಳು ಕಾದು ನೋಡ್ತಾ ಇದ್ದಾರೆ.
ಟೀಮ್ ಇಂಡಿಯಾದ ಪರ ಆಲ್ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ತಂಡಕ್ಕೆ ನೆರವಾಗಬೇಕಿದೆ.

ಇಂಗ್ಲೆಂಡ್ ತಂಡ ಪ್ಲೇಯಿಂಗ್ ಇಲೆವೆನ್ ಅನ್ನು ಈಗಾಗಲೇ ಘೋಷಿಸಿದೆ. ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನ ಕನಸು ಕಾಣುತ್ತಿದೆ. ಈಗಾಗಲೇ ಎರಡು ಪಂದ್ಯಗಳಲ್ಲಿ ಸೋತು ಸುಣ್ಣವಾಗಿರುವ ಪ್ರವಾಸಿ ತಂಡ, ಮೂರನೇ ಪಂದ್ಯದಲ್ಲಿ ಗೆಲುವು ದಾಖಲಿಸಿ ಸರಣಿಯಲ್ಲಿ ಪುಟಿದೇಳುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ. ಇನ್ನು ತಂಡದಲ್ಲಿ ಅನುಭವಿ ಆಟಗಾರರ ದಂಡೇ ಇದೆ. ಈ ಸ್ಟಾರ್ ಪ್ಲೇಯರ್ಗಳು ತಮ್ಮ ಜವಾಬ್ದಾರಿಯನ್ನು ಅರಿತು ಆಡಬೇಕಿದೆ. ಇನ್ನು ಕಳೆದ ಪಂದ್ಯದಲ್ಲಿ ಬೌಲರ್ಗಳು ನೀಡಿದ ಪ್ರದರ್ಶನ ಪುನರಾವರ್ತಿಸಬೇಕಿದೆ. ಅಂದಾಗ ಗೆಲುವಿನ ಆಸೆ ಈಡೇರುತ್ತದೆ.