ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು 337 ರನ್ಗಳ ಟಾರ್ಗೆಟ್ ನೀಡಿದೆ. ವಿಶ್ವ ಟೆಸ್ಟ್ ಚಾಪಿಯನ್ ಶಿಪ್ ಫೈನಲ್ ಪ್ರವೇಶಿಸುವ ದೃಷ್ಟಿಯಿಂದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವುದು ಅನಿವಾರ್ಯ. ಆದರೆ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ಗಳು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡದೇ ನಿರಾಸೆ ಮೂಡಿಸಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್ ಪಂದ್ಯದಲ್ಲಿ ಸೋಮವಾರ 9 ವಿಕೆಟ್ಗೆ 228 ರನ್ಗಳಿಂದ ಆಟ ಮುಂದುವರಿಸಿತು. 234 ರನ್ಗಳಿಗೆ ಆಲೌಟ್ ಆಯಿತು. ಟೀಮ್ ಇಂಡಿಯಾದ ಪರ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ್ ಬುಮ್ರಾ ಐದು ವಿಕೆಟ್ ಪಡೆದು ಸಾಧನೆ ಮಾಡಿದರು. ಟೀಮ್ ಇಂಡಿಯಾ ಸವಾಲಿನ ಗುರಿಯನ್ನು ಬೆನ್ನು ಹತ್ತುವ ಇರಾದೆಯೊಂದಿಗೆ ಕ್ರೀಸ್ಗೆ ಇಳಿಯಿತು. ಟೀಮ್ ಇಂಡಿಯಾದ ಆರಂಭಿಕ ಆಟಗಾರರು ಸಹ ಮೊದಲು ಉತ್ತಮ ರಕ್ಷಣಾತ್ಮಕ ಆಟವನ್ನು ಆಡಿದರು.

ಪ್ರಸಕ್ತ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವ ರೋಹಿತ್ ಶರ್ಮಾ, ನಾಲ್ಕನೇ ಟೆಸ್ಟ್ನ ಎರಡನೇ ಇನಿಂಗ್ಸ್ನಲ್ಲಿ ಕೊಂಚ ವಿಭಿನ್ನವಾಗಿ ಕಾಣಿಸಿಕೊಂಡರು. ಇವರು ಆರಂಭದಲ್ಲಿ ಎಚ್ಚರಿಕೆಯ ಆಟಕ್ಕೆ ಮಣೆ ಹಾಕಿದರು. ಇವರು ಇಂದು ಮಿಡ್ಲ್ ಸ್ಟಂಪ್ ಗಾರ್ಡ್ ತೆಗೆದುಕೊಂಡು, ಆಫ್ ಸ್ಟಂಪ್ ಆಚೆಯ ಚೆಂಡನ್ನು ಸರಿಯಾಗಿ ಗುರುತಿಸಿ ಆಡುತ್ತಿದ್ದರು. ಅಲ್ಲದೆ ರೋಹಿತ್ ತಮ್ಮ ನೈಜ ಆಟಕ್ಕೆ ವಿರುದ್ಧವಾಗಿ ಬ್ಯಾಟ್ ಮಾಡಿದರೂ ಸಹ, ಉತ್ತಮವಾಗಿ ಕಾಣಿಸಿಕೊಂಡರು. ಆದರೆ ತಾವು 40 ಎಸೆತಗಳನ್ನು ಎದುರಿಸಿ ಸೆಟಲ್ ಆಗಿದ್ದೇನೆ ಎಂದು ಹೇಳುವಾಗಲೇ ಆ ತಪ್ಪು ಮಾಡಿ ಬಿಟ್ಟರು.
ಪ್ಯಾಟ್ ಕಮಿನ್ಸ್ ಎಸೆತವನ್ನು ತಪ್ಪಾಗಿ ಅರ್ಥೈಸಿಕೊಂಡು ಫ್ಲಿಕ್ ಶಾಟ್ ಬಾರಿಸಲು ಮುಂದಾದರು. ಚೆಂಡು ಬ್ಯಾಟ್ನ ಅಂಚಿಗೆ ಬಡೆದು ಸ್ಲೀಪ್ ಫೀಲ್ಡರ್ ಕೈ ಸೇರಿತು. ಭಾರತ ದೊಡ್ಡ ಮೊತ್ತವನ್ನು ಹಿಂಬಾಲಿಸುತ್ತಿದ್ದಾಗ 25 ರನ್ ಆಗುವಷ್ಟರಲ್ಲಿ ಮೊದಲ ಪೆಟ್ಟು ಬಿದ್ದಿತು.

ಪ್ರಸಕ್ತ ಸರಣಿಯ ಮೂರು ಟೆಸ್ಟ್ ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ಕರ್ನಾಟಕದ ಕೆಎಲ್ ರಾಹುಲ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು. ಇವರು ಮೊದಲ ಇನಿಂಗ್ಸ್ನಲ್ಲಿ 24 ರನ್ ಬಾರಿಸಿ ಭರವಸೆ ಮೂಡಿಸಿದ್ದರು. ಆದರೆ ಎರಡನೇ ಇನಿಂಗ್ಸ್ನಲ್ಲಿ ಖಾತೆ ತೆರೆಯದೆ ಪೆವಿಲಿಯನ್ ಸೇರಿದರು. ರೋಹಿತ್ ಶರ್ಮಾ 17ನೇ ಓವರ್ನ ಮೊದಲ ಎಸೆತದಲ್ಲಿ ಔಟ್ ಆದರೆ, ಕೆಎಲ್ ರಾಹುಲ್ ಕೊನೆಯ ಎಸೆತದಲ್ಲಿ ಔಟ್ ಆಗಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು.
ಒತ್ತಡದ ಸನ್ನಿ ವೇಶಗಳಲ್ಲಿ ಆಡುವ ಕಲೆಯನ್ನು ಹೊಂದಿರುವ ವಿರಾಟ್ ಕೊಹ್ಲಿ ಸಹ ಬಿಗ್ ಇನಿಂಗ್ಸ್ ಕಟ್ಟಲಿಲ್ಲ. ಚೇಸಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ವಿರಾಟ್ ಅವರು ತಂಡಕ್ಕೆ ನೆರವಾಗುತ್ತಾರೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ವಿರಾಟ್ ತಮ್ಮ ಹಳೆಯ ಚಾಳಿ ಮುಂದುವರಿಸಿದರು. ವಿರಾಟ್ ಪದೇ ಪದೇ ಆಫ್ ಸ್ಟಂಪ್ ಆಚೆಯ ಚೆಂಡನ್ನು ಕೆಣಕಿ ಔಟ್ ಆಗುವಂತೆ ಈ ಬಾರಿಯೂ ಔಟ್ ಆದರು. ಅಲ್ಲದೆ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು.