ದುಬೈ: ಮಹಿಳಾ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ, ತನ್ನ ಲೀಗ್ ಹಂತದ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಕನಸನ್ನು ಟೀಮ್ ಇಂಡಿಯಾ ಹೊಂದಿದೆ.
ಈಗಾಗಲೇ ಭಾರತ ಆಡಿರುವ ಎರಡು ಪಂದ್ಯಗಳಲ್ಲಿ ಒಂದು ಗೆಲುವು, ಒಂದು ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 58 ರನ್ಗಳಿಂದ ಸೋಲು ಕಂಡಿತು. ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್ ತಂಡವನ್ನು ಆರು ವಿಕೆಟ್ ಗಳಿಂದ ಮಣಿಸಿ, ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿತು. ಇನ್ನು ಶ್ರೀಲಂಕಾ ಪಾಕ್ ವಿರುದ್ಧದ ಮೊದಲ ಪಂದ್ಯದಲ್ಲಿ 31 ರನ್ಗಳಿಂದ ಸೋಲು ಕಂಡಿತ್ತು. ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಅಘಾತ ಕಂಡಿತ್ತು.

ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ಗೆ ಹತ್ತಿರವಾಗುವ ಕನಸು ಕಾಣುತ್ತಿದೆ. ಉಭಯ ತಂಡಗಳು ಈಗಾಗಲೇ 14 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಟೀಮ್ ಇಂಡಿಯಾ 12 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, 2 ಪಂದ್ಯದಲ್ಲಿ ಸೋಲು ಕಂಡಿದೆ.
ಟೀಮ್ ಇಂಡಿಯಾದ ಪರ ಸ್ಟಾರ್ ಆಟಗಾರ್ತಿಯರಾದ ಹರ್ಮನ್ ಪ್ರೀತ್ ಕೌರ್, ಜೆಮಿಮಾ ರೋಡ್ರಿಗಾಸ್, ಶಫಾಲಿ ವರ್ಮಾ ಅವರು ರನ್ ಕಲೆ ಹಾಕಿ ಭರವಸೆ ಮೂಡಿಸಿದ್ದಾರೆ. ಈ ಆಟಗಾರ್ತಿಯರು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ಇನ್ನು ಆರಂಭಿಕ ಆಟಗಾರ್ತಿ ಸ್ಮೃತಿ ಮಂದನಾ ರನ್ ಕಲೆ ಹಾಕುವಲ್ಲಿ ಎಡವುತ್ತಿರುವುದು ತಂಡದ ಚಿಂತೆಯನ್ನು ದ್ವಿಗುಣ ಗೊಳಿಸಿದೆ. ಇಂದಿನ ಪಂದ್ಯದಲ್ಲಿ ಸ್ಮೃತಿ ಭರ್ಜರಿ ಲಯಕ್ಕೆ ಬಂದು ಎದುರಾಳಿಗಳನ್ನು ಕಾಡುವ ಅನಿವಾರ್ಯತೆ ಇದೆ.

ಭಾರತದ ಬಳಿ ಸ್ಟಾರ್ ಬೌಲರ್ಗಳು ಸಹ ಇದ್ದಾರೆ. ಇವರು ಪರಿಸ್ಥಿತಿಗೆ ಅನುಗುಣವಾಗಿ ಬೌಲಿಂಗ್ ನಡೆಸಿ ಎದುರಾಳಿಗಳನ್ನು ಕಟ್ಟಿ ಹಾಕಬಲ್ಲರು. ಪಾಕ್ ವಿರುದ್ಧ ಅಮೋಘ ಪ್ರದರ್ಶನ ನೀಡಿದ್ದ ಅರುಂಧತಿ ರೆಡ್ಡಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇವರಿಗೆ ಉಳಿದ ಬೌಲರ್ಗಳು ಉತ್ತಮ ಸಾಥ್ ನೀಡುವ ಅನಿವಾರ್ಯತೆ ಇದೆ. ರೆಣುಕಾ ಸಿಂಗ್, ಶ್ರೇಯಾಂಕಾ ಪಾಟೀಲ, ಆಶಾ ಶೋಭನಾ ಬಿಗುವಿನ ದಾಳಿ ನಡೆಸಿ ತಂಡಕ್ಕೆ ನೆರವಾಗಬೇಕಿದೆ.
ಎದುರಾಳಿ ಶ್ರೀಲಂಕಾ ಆಟಗಾರ್ತಿಯರಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಈ ಪಂದ್ಯದಲ್ಲಿ ಜಯ ಸಾಧಿಸಿ ಸೆಮಿಫೈನಲ್ ಕನಸನ್ನು ಜೀವಂತವಾಗಿರಿಸಿಕೊಳ್ಳುವ ಆಸೆಯನ್ನು ಹೊಂದಿದ್ದಾರೆ. ಲಂಕಾ ಪರ ಬ್ಯಾಟಿಂಗ್ನಲ್ಲಿ ನೀಲಾಕ್ಷಿಕಾ ಸಿಲ್ವಾ, ಹರ್ಷಿತಾ ಸಮರವಿಕ್ರಮ, ಅನುಷ್ಕಾ ಸಂಜೀವನಿ ತಂಡಕ್ಕೆ ಆಧಾರವಾಗಬೇಕಿದೆ. ಇನ್ನು ಬೌಲಿಂಗ್ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಸುಗಂದಿಕಾ ಕುಮಾರಿ, ಉದೇಶಿಕಾ ಪ್ರಬೋಧನಿ, ಚಾಮರಿ ಅಥಾಪತ್ತು ಅವರ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.