ನ್ಯೂಜಿಲೆಂಡ್ ನಡವುಣ ಮೂರು ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡಿತು. ಆಡಿದ ಮೂರು ಪಂದ್ಯಗಳಲ್ಲಿ ಸೋಲು ಕಂಡಿರುವ ಭಾರತ ತಂಡ ಟೀಕೆಗೆ ಗುರಿಯಾಗಿತ್ತು. ಬೆಂಗಳೂರಿನಲ್ಲಿ 8 ವಿಕೆಟ್, ಪುಣೆಯಲ್ಲಿ 113 ರನ್, ಮುಂಬೈನಲ್ಲಿ 25 ರನ್ ಗಳಿಂದ ಸೋಲು ಕಂಡಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಹು ನಿರೀಕ್ಷಿತ ಬಾರ್ಡರ್ ಗವಾಸ್ಕರ್ ಟ್ರೋಫಿ ನಡೆಯಲಿದೆ. ಈ ಸರಣಿಯ ಮೇಲೆ ಕ್ರಿಕೆಟ್ ಪ್ರೇಮಿಗಳ ಚಿತ್ತ ನೆಟ್ಟಿದೆ.
ನವೆಂಬರ್ 22ರಿಂದ ಆರಂಭವಾಗಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಆಡಬೇಕಿದೆ. ಇನ್ನು ತವರಿನಲ್ಲಿ ಹೀನಾಯ ಸೋಲು ಕಂಡಿದ್ದು ಭಾರತದ ಆತ್ಮವಿಶ್ವಾಸಕ್ಕೆ ಪೆಟ್ಟು ಬಿದ್ದಿದೆ. ಈ ವೇಳೆ ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಜೋಶ್ ಹ್ಯಾಜಲ್ವುಡ್ ದೊಡ್ಡ ಹೇಳಿಕೆ ನೀಡಿದ್ದಾರೆ. ನ್ಯೂಜಿಲೆಂಡ್ ತಂಡದ ವಿರುದ್ಧ ಟೀಮ್ ಇಂಡಿಯಾ ಸೋಲು ಕಂಡಿದ್ದು, ಆಸೀಸ್ ತಂಡಕ್ಕೆ ಒಳ್ಳೆಯ ಸುದ್ದಿ ಎಂದು ತಿಳಿಸಿದ್ದಾರೆ.

ತವರಿನಲ್ಲಿ ಟೀಮ್ ಇಂಡಿಯಾ ಸೋಲಿನ ಬಳಿಕ ಆಸ್ಟ್ರೆಲಿಯಾ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಜೋಶ್ ಹ್ಯಾಜಲ್ವುಡ್, ಭಾರತದಲ್ಲೇ ಕ್ಲೀನ್ ಸ್ವೀಪ್ ಸೋಲು ನಿಶ್ಚಿತವಾಗಿಯೂ ಟೀಮ್ ಇಂಡಿಯಾ ಆಟಗಾರರ ಆತ್ಮವಿಶ್ವಾಸಕ್ಕೆ ಪೆಟ್ಟು ನೀಡಿರುತ್ತದೆ. ಪ್ರಕಟಿತ ಭಾರತ ತಂಡದಲ್ಲಿ ಇರುವ ಆಟಗಾರರು ಈ ಮೊದಲು ಆಸೀಸ್ ಅಂಗಳದಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ನಮ್ಮ ದೇಶದ ಪ್ರವಾಸವನ್ನು ಹಲವು ಆಟಗಾರರು ಮಾಡುತ್ತಿದ್ದಾರೆ. ನಾವು ಈ ಸರಣಿಯ ಬಗ್ಗೆ ಈಗಲೇ ಏನೂ ಊಹಿಸಲು ಸಾಧ್ಯವಿಲ್ಲ. ತವರಿನಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದ್ದು ನಮಗೆಲ್ಲಾ ಒಳ್ಳೆಯ ಸುದ್ದಿ ಆಗಿದೆ ಎಂದು ತಿಳಿಸಿದ್ದಾರೆ.
ನಾವು ಭಾರತದ ವಿರುದ್ಧ ಯಾವಾಗ ಆಡಿದರೂ ಸಹ ಆ ಟೆಸ್ಟ್ ಸರಣಿಯ ಮಹತ್ವ ಹೆಚ್ಚಾಗಿರುತ್ತದೆ. ಬಾರ್ಡರ್ ಗವಾಸ್ಕರ್ ಸರಣಿಯು, ಇಂಗ್ಲೆಂಡ್ ವಿರುದ್ಧದ ಆಷಸ್ ಸರಣಿಗೆ ಸಮನಾಗಿರಲಿದೆ. ಏಕೆಂದರೆ ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದಾರೆ. ಆಟಗಾರರನ್ನು ನೋಡಲು ಅಭಿಮಾನಿಗಳು ಬರುತ್ತಾರೆ. ಈ ಸರಣಿಯ ಟಿವಿ ರೇಟಿಂಗ್ ಸಹ ಹೆಚ್ಚಾಗಬಹುದು ಎಂದು ಭಾವಿಸುವೆ. ಹೀಗಾಗಿ ಈ ಸರಣಿಗೆ ಭಾರೀ ಪ್ರಾಮುಖ್ಯತೆ ಬಂದಿದೆ ಎಂದು ಜೋಶ್ ಹ್ಯಾಜಲ್ವುಡ್ ತಿಳಿಸಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್ ಗವಾಸ್ಕರ್ ಸರಣಿಯ ವೇಳೆ ಐದು ಪಂದ್ಯಗಳನ್ನು ಆಡಿಸಲಾಗುತ್ತಿದೆ. ಈ ಸರಣಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ದೃಷ್ಟಿಯಿಂದಲೂ ಮಹತ್ವ ಪಡೆದಿದೆ. ಭಾರತ ಈಗಾಗಲೇ ತವರಿನಲ್ಲಿ ಹೀನಾಯ ಸೋಲು ಕಂಡಿದ್ದು, ಆಸೀಸ್ ಪ್ರವಾಸದಲ್ಲಿ ಗೆಲುವಿನ ಒತ್ತಡಕ್ಕೆ ಸಿಲುಕಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಭರ್ಜರಿ ಫಾರ್ಮ್ಗೆ ಮರಳುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಗೆಲುವಿನ ಆಸೆ ಫಲಿಸುತ್ತದೆ. ಟೀಮ್ ಇಂಡಿಯಾ ಈ ಹಿಂದಿನ ಎರಡೂ ಪ್ರವಾಸದಲ್ಲಿ ಬಾರ್ಡರ್ ಗವಾಸ್ಕರ್ ಸರಣಿಯನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಈಗ ಮೂರನೇ ಬಾರಿ ಟ್ರೋಫಿಗೆ ಮುತ್ತಿಡುವ ಕನಸು ಕಾಣುತ್ತಿದೆ.