ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯವು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶದ ಮೇಲೆ ಟೀಮ್ ಇಂಡಿಯಾ ತನ್ನ ಪ್ರಾಬಲ್ಯ ಸಾಧಿಸಿದೆ.
ಎರಡನೇ ದಿನ ಮೊದಲ ಇನ್ನಿಂಗ್ಸ್ನಲ್ಲಿ ಭಾರತ 376 ರನ್ಗಳಿಗೆ ಆಲೌಟಾಗಿದೆ. ಬಾಂಗ್ಲಾದೇಶ ಪರ ಹಸನ್ ಮಹಮೂದ್ ಮತ್ತು ತಸ್ಕಿನ್ ಅಹ್ಮದ್ ಉರಿ ಬೌಲಿಂಗ್ ದಾಳಿ ನಡೆಸಿದರು. ಪರಿಣಾಮ ಎರಡನೇ ದಿನದಾಟದ ಆರಂಭದಲ್ಲೇ ಟೀಮ್ ಇಂಡಿಯಾ ಸರ್ವಪತನವಾಯಿತು.

ಇನ್ನೊಂದೆಡೆ ಟೆಸ್ಟ್ ಕ್ರಿಕೆಟ್ನಲ್ಲಿ ಐದನೇ ಶತಕ ದಾಖಲಿಸುವ ಕನಸು ಕಾಣುತ್ತಿದ್ದ ರವೀಂದ್ರ ಜಡೇಜಾ ನಿರಾಸೆ ಅನುಭವಿಸಿದರು. 86 ರನ್ ಗಳಿಸಿ ಅದ್ಭುತವಾಗಿ ಆಡುತ್ತಿದ್ದ ಅವರು ತಸ್ಕಿನ್ ಅಹ್ಮದ್ ಬೌಲಿಂಗ್ನಲ್ಲಿ ಔಟಾದರು. ಇದರೊಂದಿಗೆ ಭಾರತ 400 ರನ್ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ.
ಬಾಂಗ್ಲಾದೇಶ ಟಾಸ್ ಗೆದ್ದು ಭಾರತ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಅದರಂತೆ ಬ್ಯಾಟಿಂಗ್ ಶುರು ಮಾಡಿದ ಭಾರತ ಮೊದಲ ದಿನದ ಆರಂಭದಲ್ಲೇ ಟಾಪ್ ಆರ್ಡರ್ ಬ್ಯಾಟರ್ಗಳ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತ್ತು. ನಾಯಕ ರೋಹಿತ್ ಶರ್ಮಾ (6), ಶುಭ್ಮನ್ (0) ಮತ್ತು ವಿರಾಟ್ ಕೊಹ್ಲಿ (6) ಟೀಮ್ ಇಂಡಿಯಾ ಪರ ಬೃಹತ್ ರನ್ ಕಲೆ ಹಾಕಲು ಸಾಧ್ಯವಾಗದೆ ಔಟಾದರು.
ಈ ಸಂದರ್ಭದಲ್ಲಿ ಭಾರತ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು 34 ರನ್ಗಳನ್ನು ಗಳಿಸಿತ್ತು. ಇದಾದ ನಂತರ ಒಂದಾದ ಯಶಸ್ವಿ ಜೈಸ್ವಾಲ್ ಮತ್ತು ರಿಷಬ್ ಪಂತ್ ಬಾಂಗ್ಲಾ ಬೌಲರ್ಗಳ ಬೆವರಿಳಿಸಿ ಟೀಮ್ ಇಂಡಿಯಾಕ್ಕೆ ಉತ್ತಮ ಅಡಿಪಾಯ ಹಾಕಿದರು. ಜೈಸ್ವಾಲ್ (56) ಅರ್ಧಶತಕ ಬಾರಿಸಿ ಮಿಂಚಿದರೆ, ಪಂತ್ 39 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಈ ಇಬ್ಬರು ವಿಕೆಟ್ ಕಳೆದುಕೊಂಡ ಬಳಿಕ ಟೀಮ್ ಇಂಡಿಯಾ ಪರ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು.
ಉತ್ತಮ ರನ್ ಕಲೆ ಹಾಕಿದ ಈ ಜೋಡಿ ಟೀಮ್ ಇಂಡಿಯಾಕ್ಕೆ ನೆರವಾದರು. ಅಶ್ವಿನ್ ತಮ್ಮ ತವರಿನ ಪಿಚ್ ಅನುಭವದ ಲಾಭ ಪಡೆದು ಶತಕ ಬಾರಿಸಿದರು. ಇದಕ್ಕೂ ಮುನ್ನ ಕೆಎಲ್ ರಾಹುಲ್ (16) ಕೂಡ ತಂಡಕ್ಕೆ ಆಸೆಯಾಗಲಿಲ್ಲ. ಇದಾದ ಬಳಿಕ ಜಡೇಜಾ ಮತ್ತು ಅಶ್ವಿನ್ ಅಮೋಘ ಆಟದ ಪ್ರತಿಫಲ ಭಾರತ ಬೃಹತ್ ರನ್ ಗಳಿಸಿತು.
ಎರಡನೇ ದಿನದಂದು ಭಾರತ ಇನ್ನಷ್ಟು ಉತ್ತಮ ರನ್ ಗಳಿಸುವ ಕನಸು ಕಂಡಿತ್ತು. ಆದರೆ ಅಶ್ವಿನ್ ಮತ್ತು ಜಡೇಜಾ ಔಟಾಗುತ್ತಿದ್ದಂತೆ ಟೀಮ್ ಇಂಡಿಯಾ ಆಲೌಟಾಯಿತು. ಬಾಂಗ್ಲಾದೇಶದ ಪರ ಹಸನ್ ಮಹಮೂದ್ (5), ತಸ್ಕಿನ್ ಅಹ್ಮದ್ (3), ನಹಿದ್ ರಾಣಾ ಮತ್ತು ಮೆಹಿದಿ ಹಸನ್ ಮಿರಾಜ್ ತಲಾ ಒಂದೊಂದು ವಿಕೆಟ್ ಪಡೆದರು.