ಗಾಲೆ, ಜುಲೈ 29: ಸ್ಪಿನ್ನರ್ ರವೀಂದ್ರ ಜಡೇಜಾ ಅವರ ಮಿಂಚಿನ ಎರಡು ವಿಕೆಟ್ ಸಾಧನೆಯು ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಪಡೆಯನ್ನು ಸೋಲಿನತ್ತ ವಾಲುವಂತೆ ಮಾಡಿದೆ.
ದಿನದಾಟದಲ್ಲಿ ಮಿಂಚಿದ್ದ ಜಡೇಜಾ, ಪ್ರಮುಖ ಆಟಗಾರರಾದ ಕುಸಲ್ ಮೆಂಡಿಸ್ (36), ಏಂಜಲೋ ಮ್ಯಾಥ್ಯೂಸ್ (2) ಅವರು ಬೇಗನೇ ಪೆವಿಲಿಯನ್ ಸೇರುವಂತೆ ಮಾಡಿದ್ದು, ಭಾರತಕ್ಕೆ ವರದಾನವಾಗಿದೆ.

ಇದಕ್ಕೂ ಮುನ್ನ, ಪಂದ್ಯ ಗೆಲ್ಲಲು ಭಾರತ ನೀಡಿದ್ದ 550 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿರುವ ಶ್ರೀಲಂಕಾ, ಶನಿವಾರ ಮಧ್ಯಾಹ್ನದ ಹೊತ್ತಿಗೆ 161 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಶ್ರೀಲಂಕಾ ತಂಡದ ಪಾಲಿಗೆ ಇನ್ನೂ ಹೆಚ್ಚೂಕಡಿಮೆ ಒಂದೂವರೆ ದಿನ ಬಾಕಿಯಿದೆ. ಅಷ್ಟರೊಳಗೆ ಆ ತಂಡದ ಗೆಲುವು ಪಡೆಯಬೇಕೆಂದರೆ ಏನಾದರೂ ಚಮತ್ಕಾರ ನಡೆಯಬೇಕಷ್ಟೆ.
ಶನಿವಾರದ ದಿನದಾಟ ಆರಂಭವಾದ ಕೆಲವೇ ನಿಮಿಷಗಳಲ್ಲಿ ವೇಗಿ ಮೊಹಮ್ಮದ್ ಶಮಿ ಅವರು, ಅಪಾಯಕಾರಿ ಬ್ಯಾಟ್ಸ್ ಮನ್ ಉಪುಲ್ ತರಂಗಾ (10) ಅವರನ್ನು ಬೇಗನೇ ಪೆವಿಲಿಯನ್ ಗೆ ಅಟ್ಟಿ ವಿಕೆಟ್ ಪತನಕ್ಕೆ ಶ್ರೀಕಾರ ಹಾಕಿದರು. ಆನಂತರ, ಮತ್ತೊಬ್ಬ ವೇಗಿ ಉಮೇಶ್ ಯಾದವ್, ಮೂರನೇ ಕ್ರಮಾಂಕದ ಗುಣ ತಿಲಕ (2) ಅವರನ್ನು ಕ್ರೀಸ್ ನಿಂದ ಆಚೆ ದೂಡಿದರು.
ಆದರೆ, ಆರಂಭಿಕರಾಗಿ ಕಣಕ್ಕಿಳಿದಿದ್ದ ದಿಮುಶ್ ಕರುಣಾರತ್ನೆ ಮಾತ್ರ ಅರ್ಧಶತಕ ಸಿಡಿಸಿ ಆಟ ಮುಂದುವರಿಸಿದ್ದಾರೆ.