ಬರ್ಮಿಂಗ್ಹ್ಯಾಮ್, ಜುಲೈ 02: ಕಳಪೆ ಫಾರ್ಮ್ ಸಮಸ್ಯೆಯಿಂದಾಗಿ ಅಜಿಂಕ್ಯ ರಹಾನೆ ಟೀಮ್ ಇಂಡಿಯಾದಿಂದ ಹೊರಬಿದ್ದ ದಿನದಿಂದಲೂ ಭಾರತ ತಂಡದಲ್ಲಿ 4ನೇ ಕ್ರಮಾಂಕದಲ್ಲಿ ಯಾರು ಆಡಬೇಕೆಂಬ ಗೊಂದಲ ಕಾಡುತ್ತಲೇ ಇದೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ತಂಡಕ್ಕೆ ಆಧಾರವಾಗಿ ನಿಲ್ಲಬಲ್ಲ ಸಮರ್ಥ ಆಟಗಾರನ ಹುಡುಕಾಟದಲ್ಲಿ ಟೀಮ್ ಇಂಡಿಯಾ ಸಾಕಷ್ಟು ಪ್ರಯೋಗಗಳನ್ನು ನಡೆಸಿದೆ. ಆದರೆ, ಈವರೆಗೆ 4ನೇ ಕ್ರಮಾಂಕದ ಬ್ಯಾಟಿಂಗ್ಗೆ ಖಾಯಂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಇದೀಗ ಈ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದು 2011ರ ವಿಶ್ವಕಪ್ ವಿನ್ನರ್ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಮಂಗಳವಾರ ಹೇಳಿದ್ದಾರೆ.
ಟೀಮ್ ಇಂಡಿಯಾದ ಬ್ಯಾಟಿಂಗ್ ಸುಧಾರಣೆಗೆ ಕ್ಲೈವ್ ಲಾಯ್ಡ್ ಸಲಹೆ!
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಗಾಯಗೊಂಡು ಟೂರ್ನಿಯಿಂದಲೇ ನಿರ್ಗಮಿಸಿದ ಬಳಿಕ ಬದಲಿ ಆಟಗಾರನಾಗಿ ತಂಡ ಸೇರಿಕೊಂಡಿರುವ ರಿಷಭ್ ಪಂತ್ ಕಳೆದ ಎರಡು ಪಂದ್ಯಗಳಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಭರ್ಜರಿಯಾಗಿ ಬ್ಯಾಟ್ ಬೀಸಿದ್ದಾರೆ. ಅದರಲ್ಲೂ ಮಂಗಳವಾರ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 41 ಎಸೆತಗಳಲ್ಲಿ 48 ರನ್ಗಳನ್ನು ಚೆಚ್ಚಿದ್ದರು. ಇದಕ್ಕೂ ಮುನ್ನ ಇಂಗ್ಲೆಂಡ್ ಎದುರು 32 ರನ್ಗಳನ್ನುಗಳಿಸಿ ಗಮನಸೆಳೆದಿದ್ದರು.
ಲಾರಾ, ತೆಂಡೂಲ್ಕರ್ಗೆ ಸಡ್ಡು ಹೊಡೆದ ಹಿಟ್ಮ್ಯಾನ್ ರೋಹಿತ್ ಶರ್ಮಾ!
ಇದರ ಬೆನ್ನಲ್ಲೇ ಪಂತ್ ಪರವಾಗಿ ಬ್ಯಾಟ್ ಬೀಸಿರುವ ಯುವರಾಜ್ ಸಿಂಗ್, ಟೀಮ್ ಇಂಡಿಯಾದ 4ನೇ ಕ್ರಮಾಂಕದ ಬ್ಯಾಟಿಂಗ್ ಗೊಂದಲಕ್ಕೆ ಪಂತ್ ಮೂಲಕ ಪರಿಹಾರ ಸಿಕ್ಕಿದೆ ಎಂದು ಟ್ವೀಟ್ ಮಾಡಿದ್ದಾರೆ.
"ಟೀಮ್ ಇಂಡಿಯಾ ಕೊನೆಗೂ ತನ್ನ 4ನೇ ಕ್ರಮಾಂಕದ ಬ್ಯಾಟ್ಸ್ಮನ್ ಕಂಡುಕೊಂಡಿದೆ. ಅವರನ್ನು ಈ ಕ್ರಮಾಂಕದಲ್ಲಿ ಭದ್ರವಾಗಿ ಬೆಳೆಯುವಂತೆ ಮಾಡೋಣ!,'' ಎಂದು ಯುವರಾಜ್ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. 2011ರ ವಿಶ್ವಕಪ್ ಟೂರ್ನಿಯಲ್ಲಿ ಟೂರ್ನಿ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ ಯುವರಾಜ್ ಸಿಂಗ್ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು.