
ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡ ಗುರುವಾರ ಸಂಜೆ ದಕ್ಷಿಣ ಆಫ್ರಿಕಾದ ಜೋಹನ್ಸ್ಬರ್ಗ್ಗೆ ತಲುಪಿದೆ. ಡಿಸೆಂಬರ್ 26ರಿಂದ ಸೆಂಚೂರಿಯನ್ನಲ್ಲಿ ಆರಂಭವಾಗಲಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸೆಣೆಸಾಡಲಿದೆ. ಇಂದು ಬೆಳಿಗ್ಗೆ ಮುಂಬೈನಿಂದ ಟೀಮ್ ಇಂಡಿಯಾ ಸದಸ್ಯರನ್ನು ಹೊತ್ತ ಚಾರ್ಟರ್ಡ್ ಫ್ಲೈಟ್ ದಕ್ಷಿಣ ಆಫ್ರಿಕಾಗೆ ಪ್ರಯಾಣ ಬೆಳೆಸಿತ್ತು.
ದಕ್ಷಿಣ ಆಫ್ರಿಕಾಗೆ ಹಾರಾಟ ನಡೆಸುವುದಕ್ಕೂ ಮುನ್ನ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದ ಎಲ್ಲಾ ಸದಸ್ಯರು ಹಾಗೂ ಸಹಾಯಕ ಸಿಬ್ಬಂದಿಗಳು ಮುಂಬೈನಲ್ಲಿ ಮುರು ದಿನಗಳ ಕಾಲ ಕ್ವಾರಂಟೈನ್ಗೆ ಒಳಗಾಗಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಒಂದು ದಿನ ಹೋಟೆಲ್ ಕ್ವಾರಂಟೈನ್ಗೆ ಒಳಗಾಗಲಿರುವ ಭಾರತೀಯ ತಮಡದ ಸದಸ್ಯರು ನಂತರ ಕೋವಿಡ್ ವರದಿ ಬಂದ ನಂತರ ತಮ್ಮ ಅಭ್ಯಾಸವನ್ನು ಆರಂಭಿಸಲಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದಲ್ಲಿ ಕೊರೊನಾವೈರಸ್ನ ಒಮಿಕ್ರಾನ್ ದೊಡ್ಡ ಪ್ರಮಾಣದಲ್ಲಿ ಹರಡುತ್ತಿರುವ ಕಾರಣದಿಂದಾಗಿ ಕಠಿಣ ಬಯೋಬಬಲ್ನಲ್ಲಿ ಈ ಸರಣಿ ಆಯೋಜನೆಯಾಗಲಿದೆ.
ಇನ್ನು ಭಾರತ ದಕ್ಷಿಣ ಆಫ್ರಿಕಾದಲ್ಲಿ ಈವರೆಗೆ ಟೆಸ್ಟ್ ಸರಣಿಯನ್ನು ಗೆಲ್ಲುವಲ್ಲಿ ಸಫಲವಾಗಿಲ್ಲ. ಹೀಗಾಗಿ ಈ ಬಾರಿ ದಕ್ಷಿಣ ಆಫ್ರಿಕಾವನ್ನು ಅದರದ್ದೇ ನೆಲದಲ್ಲಿ ಮಣಿಸಿ ಐತಿಹಾಸಿಕ ಸರಣಿ ಗೆಲುವು ಸಾಧಿಸುವ ಹುಮ್ಮಸ್ಸು ಟೀಮ್ ಇಂಡಿಯಾ ಆಟಗಾರರಲ್ಲಿದೆ. ಮೊದಲ ಪಂದ್ಯ ಬಾಕ್ಸಿಂಗ್ ಡೇಯಂದು ಆರಂಭವಾಗಲಿದ್ದು ಆ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದಾರೆ ಭಾರತೀಯ ತಂಡದ ಆಟಗಾರರು. ಈ ಸರಣಿಯ ಮೂರು ಟೆಸ್ಟ್ ಪಂದ್ಯಗಳು ಕ್ರಮವಾಗಿ ಸೆಂಚೂರಿಯನ್, ಜೋಹನ್ಸ್ಬರ್ಗ್ ಹಾಗೂ ಕೇಪ್ಟೌನ್ನಲ್ಲಿ ನಡೆಯಲಿದೆ.
ಇನ್ನು ಈ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಟೆಸ್ಟ್ಗೆ ನೂತನ ಉಪನಾಯಕನಾಗಿ ಆಯ್ಕೆಯಾಗಿರುವ ರೋಹಿತ್ ಶರ್ಮಾ ಅಲಭ್ಯವಾಗಿದ್ದಾರೆ. ಟೆಸ್ಟ್ ಸರಣಿಗೆ ಸಿದ್ಧತೆಯನ್ನು ನಡೆಸುತ್ತಿದ್ದ ರೋಹಿತ್ ಶರ್ಮಾ ಗಾಯಗೊಂಡ ಕಾರಣದಿಂದಾಗಿ ಈ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಅಲ್ಲದೆ ಟೀಮ್ ಇಂಡಿಯಾ ಈ ಸರಣಿಯಲ್ಲಿ ತಂಡದ ಇಬ್ಬರು ಪ್ರಮುಖ ಸ್ಪಿನ್ನರ್ಗಳಾದ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಕೂಡ ಈ ಸರಣಿಗೆ ಅಲಭ್ಯವಾಗಿದ್ದಾರೆ.
ಟೀಮ್ ಇಂಡಿಯಾದ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾರತೀಯ ತಂಡದ ಸದಸ್ಯರು ದಕ್ಷಿಣ ಆಫ್ರಿಕಾದ ಜೋಹನ್ಸ್ಬರ್ಗ್ನಲ್ಲಿ ಬಂದಿಳಿದ ಫೋಟೋವನ್ನು ಹಂಚಿಕೊಂಡಿದೆ.
ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮರುದಿನ ಭಾರತೀಯ ತಂಡ ದಕ್ಷಿಣ ಆಫ್ರಿಕಾಗೆ ಪ್ರಯಾಣವನ್ನು ಬೆಳೆಸಿದೆ. ಈ ಮಾಧ್ಯಮಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ತಮ್ಮ ಹಾಗೂ ರೋಹಿತ್ ಶರ್ಮಾ ಮಧ್ಯೆ ಯಾವುದೇ ರೀತಿಯ ಬಿರುಕುಂಟಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಅವರು ಏಕದಿನ ನಾಯಕತ್ವವನ್ನು ಬದಲಾವಣೆ ಮಾಡುವ ಸಂದರ್ಭದಲ್ಲಿ ಬಿಸಿಸಿಐ ಸೂಕ್ತವಾಗಿ ಸಂವಹನವನ್ನು ನಡೆಸಿಲ್ಲ ಎಂಬ ಅಂಶವನ್ನು ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ತಾನು ಟಿ20 ನಾಯಕತ್ವದಿಮದ ಕೆಳಕ್ಕಿಳಿದ ಸಂದರ್ಭದಲ್ಲಿ ಯಾರೂ ಕೂಡ ಈ ನಿರ್ಧಾರವನ್ನು ಮರು ಪರಿಶೀಲಿಸುವಂತೆ ತನಗೆ ಒತ್ತಾಯವನ್ನು ಮಾಡಿಲ್ಲ ಎಂದು ಕೂಡ ಹೇಳಿದರು. ಈ ಮೂಲಕ ಇತ್ತೀಚೆಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೀಡಿದ್ದ ಹೇಳಿಕೆಗೆ ವಿರುದ್ಧವಾದ ಪ್ರತಿಕ್ರಿಯೆ ನೀಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಭಾರತದ ಟೆಸ್ಟ್ ಸ್ಕ್ವಾಡ್ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಜಯಂತ್ ಯಾದವ್, ಇಶಾಂತ್ ಶರ್ಮಾ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬೂಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಪ್ರಿಯಾಂಕ್ ಪಾಂಚಾಲ್
ಮೀಸಲು ಆಟಗಾರರು: ನವದೀಪ್ ಸೈನಿ, ಸೌರಭ್ ಕುಮಾರ್, ದೀಪಕ್ ಚಾಹರ್, ಅರ್ಜನ್ ನಾಗ್ವಾಸ್ವಾಲ್ಲಾ