
ಸಿಡ್ನಿ, ಮೇ 9: ಬೇರೆ ದೇಶಗಳಲ್ಲಿ ಆಡೋದು ಅಷ್ಟೊಂದು ಕಷ್ಟವಲ್ಲ, ಆದರೆ ಭಾರತದಲ್ಲಿ ಆಡೋದು ಬಲು ಕಷ್ಟಕರ. ಯಾಕೆಂದರೆ ಕ್ರಿಕೆಟ್ನಲ್ಲಿ ಭಾರತ ಬಲಿಷ್ಠವಾಗಿದೆ. ಇದಕ್ಕಾಗಿಯೇ ಭಾರತದಲ್ಲಿ ಆಡೋದೆಂದರೆ ನನಗಿಷ್ಟ ಎಂದು ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್ಮನ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ, ಸನ್ ರೈಸರ್ಸ್ ಹೈದರಾಬಾದ್ನ ನಾಯಕ ಡೇವಿಡ್ ವಾರ್ನರ್ ಹೇಳಿದ್ದಾರೆ.
'ಭಾರತದ ಪರಿಸ್ಥಿತಿಯಲ್ಲಿ ಆಡೋದಂದ್ರೆ ನನಗಿಷ್ಟ. ಯಾಕೆಂದರೆ ಅಲ್ಲಿ ಎಲ್ಲರೂ ನಿಮ್ಮ ವಿರುದ್ಧವಿರುತ್ತಾರೆ. ನಮಗೆ ಆಡಲು ಬಲು ಕಷ್ಟದ ವಾತಾವರಣವೆಂದರೆ ಭಾರತ. ಅಲ್ಲಿ ಗೆಲ್ಲಬೇಕಾದರೆ ನಿಮಗೆ ಹೆಚ್ಚಿನ ಪ್ರೇರಣೆ ಬೇಕಾಗುತ್ತದೆ,' ಎಂದು ಹಿಟ್ಮ್ಯಾನ್ ರೋಹಿತ್ ಶರ್ಮಾ ಜೊತೆ ಇನ್ಸ್ಟಾಗ್ರಾಮ್ ಲೈವ್ನಲ್ಲಿ ಪಾಲ್ಗೊಂಡಿದ್ದ ವಾರ್ನರ್ ನುಡಿದಿದ್ದಾರೆ.
ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ, ಐಪಿಎಲ್ ಟೂರ್ನಿಯಿಂದ ಆಟಗಾರರಿಗೆ ಅಭಿಸುತ್ತಿರುವ ಅವಕಾಶ, ಟೂರ್ನಿಯಿಂದಾಗುತ್ತಿರುವ ಸಕಾರಾತ್ಮಕ ಪರಿಣಾಮಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 'ವಿಶ್ವಕ್ರಿಕೆಟ್ಗೆ ಐಪಿಎಲ್ ಅದ್ಭುತವನ್ನು ನೀಡಿದೆ,' ಎಂದು ಶರ್ಮಾ ಹೇಳಿಕೊಂಡಿದ್ದಾರೆ.
'ಐಪಿಎಲ್ ವಿಶ್ವ ಕ್ರಿಕೆಟ್ನ ಆಟಗಾರರು ಒಬ್ಬರನ್ನೊಬ್ಬರು ಹೆಚ್ಚು ಅರ್ಥ ಮಾಡಿಕೊಳ್ಳುವಲ್ಲಿ ನೆರವು ನೀಡಿದೆ. ಅದರಲ್ಲೂ ನಿಮ್ಮಂತ ಶ್ರೇಷ್ಠ ಕ್ರಿಕೆಟಿಗರು ಪಾಲ್ಗೊಳ್ಳುವುದರಿಂದ ಭಾರತದ ಆಟಗಾರರಿಗೂ ಬಹಳಷ್ಟು ಕಲಿಯೋಕೆ ಅವಕಾಶ ಲಭಿಸುತ್ತಿದೆ,' ಎಂದು ರೋಹಿತ್ ಅಭಿಪ್ರಾಯಿಸಿದ್ದಾರೆ.