ನವದೆಹಲಿ, ಫೆಬ್ರವರಿ 12: ಭಾರತ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಟೀಂ ಇಂಡಿಯಾದಲ್ಲಿ ಬದಲಾವಣೆಗಳು ನಿರೀಕ್ಷಿತವಾಗಿವೆ. ಭಾರತದ ಉಪ ನಾಯಕ ರೋಹಿತ್ ಶರ್ಮ ಅವರಿಗೆ ವಿಶ್ರಾಂತಿ ನೀಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಿರ್ಧರಿಸಿದೆ.
ಫೆಬ್ರವರಿ 24ರಿಂದ ಸರಣಿ ಆರಂಭಗೊಳ್ಳಲಿದ್ದು, ಲಭ್ಯ ಮಾಹಿತಿಯಂತೆ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ, ಐಸಿಸಿ ವಿಶ್ವಕಪ್ 2019ಕ್ಕೆ ಸಜ್ಜುಗೊಳಿಸುವುದು ಮಂಡಳಿಯ ಉದ್ದೇಶವಾಗಿದೆ.
ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಟೀಂ ಇಂಡಿಯಾ ಗೆದ್ದುಕೊಂಡಿತು. ನಂತರ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಗೆಲುವು ಸಾಧಿಸಿ, ಟಿ20 ಸರಣಿಯಲ್ಲಿ ಸೋಲು ಕಂಡಿದೆ.
ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಭಾರತ 2 ಟಿ20 ಪಂದ್ಯ ಹಾಗೂ 5 ಏಕದಿನ ಪಂದ್ಯಗಳನ್ನು ಆಡಲಿದೆ. ನ್ಯೂಜಿಲೆಂಡ್ ಸರಣಿಯಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದ ನಾಯಕ ವಿರಾಟ್ ಕೊಹ್ಲಿ, ತಂಡ ಸೇರಲಿದ್ದಾರೆ. ರೋಹಿತ್ ಶರ್ಮ ಬದಲಿಗೆ ಅಜಿಂಕ್ಯ ರಹಾನೆಗೆ ಸ್ಥಾನ ಸಿಗುವ ಸಾಧ್ಯತೆಯಿದೆ. ಕಳೆದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯವಾಡಿದ್ದ ರಹಾನೆ ಅವರು ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ.
ಟಿವಿ ಶೋವೊಂದರಲ್ಲಿ ನೀಡಿದ್ದ ಹೇಳಿಕೆಯಿಂದಾಗಿ ಅಮಾನತುಗೊಂಡಿದ್ದ ಕೆ.ಎಲ್. ರಾಹುಲ್ ಅವರು ನಿಷೇಧದಿಂದ ಹೊರ ಬಂದು, ಭಾರತ ಎ ಪರ ಆಡಿದ್ದರು. ಈಗ ಏಕದಿನ ಕ್ರಿಕೆಟ್ ತಂಡಕ್ಕೆ ಮರಳುವ ಸಾಧ್ಯತೆಯಿದೆ. ತಂಡದ ಪ್ರಮುಖ ವೇಗಿ ಜಸ್ಪ್ರಿತ್ ಬೂಮ್ರಾ ತಂಡಕ್ಕೆ ಮರಳಲಿದ್ದಾರೆ. ಆಸ್ಟ್ರೇಲಿಯಾ ಸರಣಿಗೆ ಭಾರತ ತಂಡವನ್ನು ಫೆಬ್ರವರಿ 15ರಂದು ಪ್ರಕಟಿಸುವ ಸಾಧ್ಯತೆಯಿದೆ.