ಮಂಗಳವಾರ, ಸೆಪ್ಟೆಂಬರ್ 12ರಂದು ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಪಂದ್ಯದಲ್ಲಿ ಭಾರತ ತಂಡ ಸಾಧಾರಣ ಮೊತ್ತ ಗಳಿಸಿಯೂ ಅದನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಆತಿಥೇಯ ಶ್ರೀಲಂಕಾ ತಂಡವನ್ನು 41 ರನ್ಗಳಿಂದ ಮಣಿಸಿತು.
ಗಮನಾರ್ಹವಾಗಿ, ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ 2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಫೈನಲ್ ತಲುಪಿದ ಮೊದಲ ತಂಡವಾಯಿತು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ 49.1 ಓವರ್ಗಳಲ್ಲಿ ಕೇವಲ 213 ರನ್ಗಳಿಗೆ ಆಲೌಟ್ ಆಯಿತು. 214 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ 41.3 ಓವರ್ಗಳಲ್ಲಿ 172 ರನ್ಗಳಿಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿತು.
ಒಂದು ಹಂತದಲ್ಲಿ ಶ್ರೀಲಂಕಾ ಗೆಲುವಿನ ಕಡೆ ಮುಖ ಮಾಡಿತ್ತು. ಬೌಲಿಂಗ್ನಲ್ಲಿ 5 ವಿಕೆಟ್ ಪಡೆದು ಮಿಂಚಿದ್ದ ದುನಿತ್ ವೆಲ್ಲಾಲಗೆ ಬ್ಯಾಟಿಂಗ್ನಲ್ಲಿಯೂ ಭಾರತದ ಬೌಲರ್ಗಳನ್ನು ಕಾಡಿದರು. ಇವರಿಗೆ ಧನಂಜಯ್ ಡಿ ಸಿಲ್ವಾ ಕೂಡ ಸಾಥ್ ನೀಡಿದ್ದರು. ಈ ಜೋಡಿ 7ನೇ ವಿಕೆಟ್ಗೆ 63 ರನ್ಗಳ ಜೊತೆಯಾಟ ನೀಡಿ ಗೆಲುವಿಗೆ ಹತ್ತಿರವಾಗುತ್ತಿತ್ತು.
ಆದರೆ, ರವೀಂದ್ರ ಜಡೇಜಾ ಅವರು ಈ ಜೋಡಿಯನ್ನು ಬೇರ್ಪಡಿಸುವ ಮೂಲಕ ಭಾರತಕ್ಕೆ ವಿಜಯಲಕ್ಷ್ಮಿ ಒಲಿಯಲು ನೆರವಾದರು. 41 ರನ್ ಗಳಿಸಿದ್ದ ಧನಂಜಯ್ ಡಿ ಸಿಲ್ವಾ ಅವರ ವಿಕೆಟ್ ಬೀಳುತ್ತಿದ್ದಂತೆಯೇ ಶ್ರೀಲಂಕಾದ ಗೆಲುವಿನ ಆಸೆ ಕಮರಿತು.

214 ರನ್ಗಳ ಸುಲಭ ಗುರಿ ಚೇಸಿಂಗ್ನಲ್ಲಿ ಶ್ರೀಲಂಕಾ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಪಾಥುಮ್ ನಿಸ್ಸಾಂಕ 6 ರನ್ ಗಳಿಸಿದ್ದಾಗ ಜಸ್ಪ್ರೀತ್ ಬುಮ್ರಾಗೆ ವಿಕೆಟ್ ಒಪ್ಪಿಸಿದರೆ, ದುಮುತ್ ಕರುಣಾರತ್ನೆ 2 ರನ್ ಗಳಿಸಿ ಆಡುತ್ತಿದ್ದಾಗ ಮೊಹಮ್ಮದ್ ಸಿರಾಜ್ಗೆ ಔಟಾದರು.
ನಂತರ ಬಂದ ಕುಸಾಲ್ ಮೆಂಡೀಸ್ 16 ಎಸೆತಗಳಲ್ಲಿ 15 ರನ್, ಸದೀರ್ ಸಮರವಿಕ್ರಮ 31 ಎಸೆತಗಳಲ್ಲಿ 17 ರನ್ ಗಳಿಸಿ ಔಟಾದರು. ಇನ್ನು ಚರಿತ್ ಅಸಲಂಕಾ 35 ಎಸೆತಗಳಲ್ಲಿ 22 ರನ್ ಗಳಿಸಿ ಹೋರಾಟದ ಸೂಚನೆ ನೀಡಿದ್ದರು.
ಆ ಬಳಿಕ ಧನಂಜಯ್ ಡಿ ಸಿಲ್ವಾ 66 ಎಸೆತಗಳಲ್ಲಿ 5 ಬೌಂಡರಿ ಸಮೇತ 41 ರನ್ ಗಳಿಸಿ ಭಾರತಕ್ಕೆ ಬೆದರಿಕೆ ಒಡ್ಡಿದ್ದರು. ರವೀಂದ್ರ ಜಡೇಜಾ ಬೌಲಿಂಗ್ನಲ್ಲಿ ಶುಭ್ಮನ್ ಗಿಲ್ಗೆ ಕ್ಯಾಚ್ ನೀಡಿ ಹೊರನಡೆದರು. ನಾಯಕ ದಸುನ್ ಶನಕ 9 ರನ್ ಗಳಿಸಿದರು.
ಇನ್ನು ಬೌಲಿಂಗ್ನಲ್ಲಿ ಭಾರತದ ಅಗ್ರ ಕ್ರಮಾಂಕವನ್ನು ಕೆಡವಿದ್ದ ದುನಿತ್ ವೆಲ್ಲಾಲಗೆ ಬ್ಯಾಟಿಂಗ್ನಲ್ಲಿಯೂ ಮಿಂಚಿ 46 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ ಅಜೇಯ 42 ರನ್ ಬಾರಿಸಿದರು. ನಂತರ ಬಂದ ಯಾವ ಬ್ಯಾಟರ್ಗಳು ವೆಲ್ಲಾಲಗೆ ಅವರಿಗೆ ಸಾಥ್ ನೀಡದೆ ತರಗಲೆಯಂತೆ ಉರುಳಿದರು.

ಬೌಲಿಂಗ್ನಲ್ಲಿ ಭಾರತ ತಂಡದ ಪರ ಕುಲದೀಪ್ ಯಾದವ್ ಮತ್ತೆ ಮಿಂಚಿ 9.3 ಓವರ್ಗಳಲ್ಲಿ 43 ರನ್ ನೀಡಿ 4 ವಿಕೆಟ್ ಕಬಳಿಸಿ ಭಾರತದ ಗೆಲುವಿಗೆ ಕಾರಣರಾದರು. ವೇಗಿ ಜಸ್ಪ್ರೀತ್ ಬುಮ್ರಾ 7 ಓವರ್ಗಳಲ್ಲಿ 30 ರನ್ ನೀಡಿ 2 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 10 ಓವರ್ಗಳಲ್ಲಿ 33 ರನ್ ನೀಡಿ 3 ವಿಕೆಟ್ ಕಬಳಿಸಿದರು. ಉಳಿದಂತೆ ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ನಾಯಕ ರೋಹಿತ್ ಶರ್ಮಾ 48 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಮೂಲಕ 53 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದರು. ಶುಭ್ಮನ್ ಗಿಲ್ 25 ಎಸೆತಗಳಲ್ಲಿ 19 ರನ್, ಕಳೆದ ಪಂದ್ಯದ ಶತಕವೀರ ವಿರಾಟ್ ಕೊಹ್ಲಿ 3 ರನ್ ಗಳಿಸಿ ಔಟಾದರು.
ಇಶಾನ್ ಕಿಶನ್ 33 ಮತ್ತು ಕೆಎಲ್ ರಾಹುಲ್ 39 ರನ್ ಗಳಿಸಿದರೆ, ಅಲ್ರೌಂಡರ್ ಅಕ್ಷರ್ ಪಟೇಲ್ 26 ರನ್ ಕಲೆಹಾಕಿದರು. ಉಳಿದ ಯಾವ ಬ್ಯಾಟರ್ಗಳು ಶ್ರೀಲಂಕಾ ಸ್ಪಿನ್ನರ್ ವಿರುದ್ಧ ರನ್ ಗಳಿಸಲು ಪರದಾಡಿದರು.
ಬೌಲಿಂಗ್ನಲ್ಲಿ ಶ್ರೀಲಂಕಾ ಪರ ದುನಿತ್ ವೆಲ್ಲಾಲಗೆ 10 ಓವರ್ಗಳಲ್ಲಿ 40 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಚರಿತ್ ಅಸಲಂಕಾ 9 ಓವರ್ಗಳಲ್ಲಿ 18 ರನ್ ನೀಡಿ 4 ವಿಕೆಟ್ ಪಡೆದರು. ಉಳಿದಂತೆ ಮಹೀಶ್ ತೀಕ್ಷಣ 9.1 ಓವರ್ಗಳಲ್ಲಿ 41 ರನ್ ನೀಡಿ 1 ವಿಕೆಟ್ ಪಡೆದರು.