
ಬೆಂಗಳೂರು, ಸೆಪ್ಟೆಂಬರ್ 9: ಭಾರತ ಕ್ರಿಕೆಟ್ ತಂಡದಲ್ಲಿ ಪ್ರತಿಭಾವಂತ ಬ್ಯಾಟ್ಸ್ಮನ್ ಗಳಿದ್ದಾರೆ, ಬೌಲರ್ ಗಳಿದ್ದಾರೆ. ಆದರೆ ಅಂತಾರಾಷ್ಟ್ರೀಯ ಮಟ್ಟದ ಸರಣಿಯೊಂದರಲ್ಲಿ ಆಡುವಾಗ ಟೀಮ್ ಇಂಡಿಯಾ ಮಾನಸಿಕವಾಗಿ ಗಟ್ಟಿಯಾಗಬೇಕಾದ ಅನಿವಾರ್ಯತೆಯಿದೆ ಎಂದು ಆಸ್ಟ್ರೇಲಿಯಾ ಮಾಜಿ ಆಟಗಾರ ಆ್ಯಡಮ್ ಗಿಲ್ ಕ್ರಿಸ್ಟ್ ಹೇಳಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಚಲನ ಚಿತ್ರ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಗಿಲ್ ಕ್ರಿಸ್ಟ್, ಟೀಮ್ ಇಂಡಿಯಾ vs ಇಂಗ್ಲೆಂಡ್ ಟೆಸ್ಟ್ ಸರಣಿಯ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಗಿಲ್ ಕ್ರಿಸ್ಟ್ ಅವರು ಕೆಸಿಸಿಯಲ್ಲಿ ಶಿವರಾಜ್ ಕುಮಾರ್ ನಾಯಕತ್ವದ ವಿಜಯನಗರ ಪೇಟ್ರಿಯಾಟ್ಸ್ ತಂಡದ ಸ್ಟಾರ್ ಆಟಗಾರ.
'ಅಂತಾರಾಷ್ಟ್ರೀಯ ಸರಣಿಯೊಂದರಲ್ಲಿ ಪಾಲ್ಗೊಳ್ಳೋದು ಸವಾಲಿನ ಕೆಲಸ ಅಂತ ನಾನು ಭಾವಿಸಿದ್ದೇನೆ. ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ ಕೊಹ್ಲಿಯನ್ನು ಸೇರಿಸಿ ಭಾರತ ತಂಡದಲ್ಲಿ ಇನ್ನೂ ಪ್ರತಿಭಾನ್ವಿತ ಬ್ಯಾಟ್ಸ್ಮನ್, ಬೌಲರ್ ಗಳಿದ್ದಾರೆ. ಹಾಗಾಗಿ ಪಂದ್ಯ ಗೆಲುವಿನ ನಿಟ್ಟಿನಲ್ಲಿ ತಂಡ ಮಾನಸಿಕವಾಗಿ ಗಟ್ಟಿಯಾಗಬೇಕಷ್ಟೇ. ಯಾಕೆಂದರೆ ಕೆಲವೊಮ್ಮೆ ಮನಸ್ಸಿನ ಸ್ಪಂದನೆ ದೇಹದ ಸ್ಪಂದನೆಗಿಂತ ಪ್ರಮುಖವಾಗಿರುತ್ತದೆ' ಎಂದು ಗಿಲ್ಲಿ ತಿಳಿಸಿದರು.
ಯುವ ಆಟಗಾರ ರಿಶಬ್ ಪಂತ್ ಬಗ್ಗೆ ಆ್ಯಡಮ್, 'ಟೆಸ್ಟ್ ಗೆ ಪಾದಾರ್ಪಣೆ ಮಾಡಿದ ಪಂತ್ ಮೊದಲ ಇನ್ನಿಂಗ್ಸ್ ನಲ್ಲಿ 24 ರನ್ ಮತ್ತು 7 ಕ್ಯಾಚ್ ಗಳನ್ನು ಪಡೆದು ಗಮನ ಸೆಳೆದಿದ್ದರು. ಆದರೆ ಮುಂದಿನ ನಾಲ್ಕು ಇನ್ನಿಂಗ್ಸ್ ಗಳಲ್ಲಿ ಪಂತ್ ಕೊಂಚ ಪರದಾಡಿದ್ದು ಕಂಡು ಬಂತು. ಹಾಗಿದ್ದೂ ರಿಷಬ್ ಗೆ ಉತ್ತಮ ಭವಿಷ್ಯವಿದೆ. ಆಸ್ಟ್ರೇಲಿಯ ಸರಣಿಯಲ್ಲಿ ಪಂತ್ ಚೆನ್ನಾಗಿ ಆಡಲಿ' ಎಂದು ಹಾರೈಸಿದರು.