ನೀವು ಈ ತಪ್ಪನ್ನು ಮಾಡಿದರೆ ನ್ಯೂಜಿಲೆಂಡ್ ವಿರುದ್ಧ ಗೆಲುವು ಕಷ್ಟ; ರೋಹಿತ್ ಪಡೆಗೆ ಎಚ್ಚರಿಸಿದ ಸೆಹ್ವಾಗ್

ಟೀಮ್ ಇಂಡಿಯಾ ಐಸಿಸಿ ಟ್ರೋಫಿಯನ್ನು ಗೆದ್ದು 8 ವರ್ಷಗಳೇ ಕಳೆದಿವೆ. ಹೌದು, ಟೀಮ್ ಇಂಡಿಯಾ 2013ರಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಹಾಗೂ ಇದಾದ ಬಳಿಕ ಯಾವುದೇ ಐಸಿಸಿ ಟೂರ್ನಿಯಲ್ಲಿಯೂ ಟೀಮ್ ಇಂಡಿಯಾ ಗೆಲುವು ಸಾಧಿಸಿಲ್ಲ. ಇದಾದ ಬಳಿಕ ನಡೆದ ಎಲ್ಲ ಐಸಿಸಿ ಟೂರ್ನಿಗಳಲ್ಲಿಯೂ ಟೀಮ್ ಇಂಡಿಯಾ ಸಾಲುಸಾಲಾಗಿ ಸೋಲುತ್ತಾ ಬಂದಿದೆ.
ಅದೇ ರೀತಿ ಪ್ರಸ್ತುತ ಯುಎಇಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿಯೂ ಟೀಮ್ ಇಂಡಿಯಾ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬೀಳುವ ಮೂಲಕ ಮತ್ತೊಮ್ಮೆ ಐಸಿಸಿ ಸಮರದಲ್ಲಿ ಸೋಲುಂಡಿದೆ. ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗುವ ಮುನ್ನ ಟ್ರೋಫಿ ಗೆಲ್ಲಲಿರುವ ತಂಡಗಳಲ್ಲಿ ಗುರುತಿಸಿಕೊಂಡಿದ್ದ ಟೀಮ್ ಇಂಡಿಯಾ ಟೂರ್ನಿಯ ಪಂದ್ಯಗಳು ಆರಂಭವಾದ ನಂತರ ಹೀನಾಯ ಪ್ರದರ್ಶನವನ್ನು ನೀಡಿತ್ತು. ಟೂರ್ನಿಯಲ್ಲಿ ಆಡಿದ ತನ್ನ ಮೊದಲೆರಡು ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋತ ಟೀಂ ಇಂಡಿಯಾ ನಂತರ ನಡೆದ ಆಫ್ಘಾನಿಸ್ತಾನ, ಸ್ಕಾಟ್ಲೆಂಡ್ ಮತ್ತು ನಮೀಬಿಯಾ ವಿರುದ್ಧದ ಪಂದ್ಯಗಳಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವುದರ ಮೂಲಕ ಟೂರ್ನಿಯಲ್ಲಿನ ತನ್ನ ಪಯಣವನ್ನು ಮುಗಿಸಿತು.
ಹೀಗೆ ಲೀಗ್ ಹಂತದಲ್ಲಿನ 5 ಪಂದ್ಯಗಳ ಪೈಕಿ 3 ಪಂದ್ಯಗಳಲ್ಲಿ ಗೆದ್ದು, 2 ಪಂದ್ಯಗಳಲ್ಲಿ ಸೋತ ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸುವಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳಲಾಗದೇ ಟೂರ್ನಿಯಿಂದ ಹೊರಬಿದ್ದಿದೆ. ಈ ಮೂಲಕ ಈ ಬಾರಿಯೂ ಐಸಿಸಿ ಟ್ರೋಫಿ ಎತ್ತಿಹಿಡಿಯುವ ಟೀಮ್ ಇಂಡಿಯಾದ ಕನಸು ಕನಸಾಗಿಯೇ ಉಳಿದುಕೊಂಡಿದೆ. ಇನ್ನು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಯಶಸ್ವಿಯಾಗದೇ ಹೊರಬಿದ್ದಿರುವ ಟೀಮ್ ಇಂಡಿಯಾ ನವೆಂಬರ್ 17ರಿಂದ ನ್ಯೂಜಿಲೆಂಡ್ ವಿರುದ್ಧ ಟಿ ಟ್ವೆಂಟಿ ಮತ್ತು ಟೆಸ್ಟ್ ಸರಣಿಗಳಲ್ಲಿ ಕಣಕ್ಕಿಳಿಯಲಿದೆ. ಈ ಸರಣಿಗಳಲ್ಲಿ ಭಾಗವಹಿಸಲಿರುವ ಭಾರತದ ತಂಡದ ಕುರಿತು ಇದೀಗ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮಾತನಾಡಿದ್ದು ಗೆಲ್ಲಲು ಈ ಕೆಳಕಂಡ ಸಲಹೆಯೊಂದನ್ನು ನೀಡಿದ್ದಾರೆ.

ಇಂಗ್ಲೆಂಡ್, ನ್ಯೂಜಿಲೆಂಡ್ ನೋಡಿ ಕಲಿಯಿರಿ
"ಟೀಮ್ ಇಂಡಿಯಾ ಆಟಗಾರರು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಸೋಲಿಸುವಷ್ಟು ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ಟೀಮ್ ಇಂಡಿಯಾ ಆಟಗಾರರು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನೋಡಿ ಸಕಾರಾತ್ಮಕವಾಗಿ ಭಯಪಡದೇ ಹಾಗೂ ಒತ್ತಡಕ್ಕೊಳಗಾಗದೆ ಹೇಗೆ ಪ್ರದರ್ಶನ ನೀಡಬೇಕೆಂಬುದನ್ನು ಕಲಿಯಬೇಕಿದೆ. ಏಕೆಂದರೆ ಟಿ ಟ್ವೆಂಟಿ ಕ್ರಿಕೆಟ್ ಧೈರ್ಯವಂತ ಕ್ರಿಕೆಟಿಗರು ಆಡುವ ಆಟ. ಹೀಗಾಗಿ ಧೈರ್ಯದಿಂದ ಮುನ್ನುಗ್ಗಿ, ನಿಮ್ಮ ಪ್ರದರ್ಶನವನ್ನು ನೀವು ನೀಡಬೇಕಿದೆ" ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಧೈರ್ಯದಿಂದ ಆಡಿ
"ಟೀಮ್ ಇಂಡಿಯಾ ಈ ಹಿಂದೆ ಸಾಕಷ್ಟು ಬಾರಿ ಸೋಲುಂಡ ನಂತರ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಿದೆ. ಈಗ ಅದೇ ರೀತಿಯ ಸಮಯ ಪುನಃ ಬಂದಿದ್ದು, ನ್ಯೂಜಿಲೆಂಡ್ ಭಾರತ ಪ್ರವಾಸವನ್ನು ಕೈಗೊಂಡಾಗ ಟೀಮ್ ಇಂಡಿಯಾ ಆಟಗಾರರು ಧೈರ್ಯದಿಂದ ಆಟವನ್ನು ಆಡಬೇಕಿದೆ. ಫಲಿತಾಂಶದ ಕುರಿತಾಗಿ ತಲೆಕೆಡಿಸಿಕೊಳ್ಳದೇ ಧೈರ್ಯದಿಂದ ಆಡಿದರೆ ನಿಮ್ಮ ಇಚ್ಛೆಯಂತೆ ಉತ್ತಮ ಫಲಿತಾಂಶ ಹೊರಬೀಳಲಿದೆ" ಎಂದು ವಿರೇಂದ್ರ ಸೆಹ್ವಾಗ್ ಸಲಹೆ ನೀಡಿದ್ದಾರೆ.

ಭಾರತ vs ನ್ಯೂಜಿಲೆಂಡ್ ಟಿ20 ಮತ್ತು ಟೆಸ್ಟ್ ಸರಣಿಯ ವಿವರ
ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ನವೆಂಬರ್ 14ರಂದು ನಡೆಯಲಿದ್ದು, ನವೆಂಬರ್ 17ರಿಂದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಆರಂಭವಾಗಲಿದೆ. ಈ ಟಿ ಟ್ವೆಂಟಿ ಸರಣಿ ಮುಗಿದ ಕೂಡಲೇ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದ್ದು, ಮೊದಲನೇ ಟೆಸ್ಟ್ ನವೆಂಬರ್ 25ರಿಂದ ನವೆಂಬರ್ 29ರವರೆಗೆ ಕಾನ್ಪುರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ ಹಾಗೂ ದ್ವಿತೀಯ ಟೆಸ್ಟ್ ಪಂದ್ಯ ಡಿಸೆಂಬರ್ 3ರಿಂದ ಡಿಸೆಂಬರ್ 7ರವರೆಗೆ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications