
ನವದೆಹಲಿ, ಜುಲೈ 13: ಭಾರತದ 4ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಅಜಿಂಕ್ಯ ರಹಾನೆಯಂತ ಬ್ಯಾಟ್ಸ್ಮನ್ನ ಅಗತ್ಯವಿದೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ (ಬಿಸಿಸಿಐ) ಮಾಜಿ ಕಾರ್ಯದರ್ಶಿ ಸಂಜಯ್ ಜಗದಾಳೆ ಹೇಳಿದ್ದಾರೆ. ಟೀಮ್ ಇಂಡಿಯಾದ 4ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಸೂಕ್ತ ಆಟಗಾರ ಇಲ್ಲದ ಸಮಸ್ಯೆಗೆ ಸಂಬಂಧಿಸಿ ಜಗದಾಳೆ ಈ ಸಲಹೆ ನೀಡಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಭಾರತ ಕ್ರಿಕೆಟ್ ತಂಡದಲ್ಲಿನ ಈ ಸಮಸ್ಯೆ ಬಗ್ಗೆ ಅರಿವಿರುವ ಜಗದಾಳೆ, 'ನನ್ನ ಅನಿಸಿಕೆಯಂತೆ, ಭಾರತದ 4ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಅಜಿಂಕ್ಯ ರಹಾನೆಯಂತ ಬ್ಯಾಟ್ಸ್ಮನ್ ಬೇಕು. ಕಳೆದ 3 ತಿಂಗಳಲ್ಲಿ ನಾವು ಈ ಬ್ಯಾಟಿಂಗ್ ಕ್ರಮಾಂಕ್ಕೆ ಅನೇಕ ಬ್ಯಾಟ್ಸ್ಮನ್ಗಳನ್ನು ತಂದು ನೋಡಿದ್ದಿದೆ. ಆದರೆ ವಿದೇಶದಲ್ಲಿ ಈ ಕ್ರಮಾಂಕದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಆಟಗಾರನ ದಾಖಲೆಯಿಲ್ಲ' ಎಂದಿದ್ದಾರೆ.
ಭಾರತ ತಂಡದ 4ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ತಂಡ ಸಮಿತಿ ಬಹಳಷ್ಟು ಆಟಗಾರರನ್ನು ತಂದು ಪರೀಕ್ಷಿಸಿತ್ತು. ಆಲ್ ರೌಂಡರ್ ವಿಜಯ್ ಶಂಕರ್, ರಿಷಬ್ ಪಂತ್ ಮತ್ತು ಕನ್ನಡಿಗ ಕೆಎಲ್ ರಾಹುಲ್ ಹೀಗೆ ಇನ್ನೊಂದಿಷ್ಟು ಮಂದಿ ಈ ನಿರ್ಣಾಯಕ ಕ್ರಮಾಂಕದಲ್ಲಿ ಆಡಿದ್ದಾಗಿದೆ. ಆದರೆ ಈಗಲೂ ಈ ಸ್ಥಾನಕ್ಕೆ ಸೂಕ್ತ ಆಟಗಾರ ದೊರೆತಂತಿಲ್ಲ.
ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲೂ ಭಾರತದ 4ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಒಂದಿಷ್ಟು ಬ್ಯಾಟ್ಸ್ಮನ್ಗಳನ್ನು ತಂದು ನೋಡಲಾಗಿತ್ತು. ಅಂಬಾಟಿ ರಾಯುಡು ಈ ಕ್ರಮಾಂಕದಲ್ಲಿ ಈ ಹಿಂದೆ ಕೊಂಚ ಉತ್ತಮ ರನ್ ಸಾಧನೆ ತೋರಿದ್ದರಾದರೂ ಪ್ರಕಟಿತ ವಿಶ್ವಕಪ್ ತಂಡದಲ್ಲಿ ರಾಯುಡು ಅವರೇ ಇರಲಿಲ್ಲ. ಹೀಗಾಗಿ ವಿಜಯ್, ರಾಹುಲ್, ಪಂತ್ 4ರಲ್ಲಿ ಆಡಿದ್ದರು.
ಅನುಭವಿ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್, ರಾಯಡು 2003ರಿಂದಲೂ ಆಡುತ್ತಿದ್ದರೂ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ನಾಲ್ಕನೇ ಕ್ರಮಾಂಕದಲ್ಲಿ ರಹಾನೆ ಅಗತ್ಯ ಎಂದು ಮೂರು ತಿಂಗಳಿಂದಲೂ ಸಲಹೆ ನೀಡುತ್ತಿದ್ದೇನೆ. ಮುಂದೊಮ್ಮೆ ಪಂತ್ ಕೂಡ ಈ ಕ್ರಮಾಂಕದಲ್ಲಿ ಆಡಲು ಸೂಕ್ತ ಬ್ಯಾಟ್ಸ್ ಮನ್ ಎಂದು ಜಗದಾಳೆ ತಿಳಿಸಿದ್ದಾರೆ.