ಗುವಾಹಟಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬಿಗಿ ಹಿಡಿತ ಸಾಧಿಸಿದೆ. ದಕ್ಷಿಣ ಆಫ್ರಿಕಾ ತಂಡ 549 ರನ್ ಗುರಿಯನ್ನು ಆತಿಥೇಯ ತಂಡಕ್ಕೆ ನೀಡಿದೆ. ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ನಾಲ್ಕನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಕೊನೆಯ ದಿನಕ್ಕೆ ಟೀಮ್ ಇಂಡಿಯಾ ಪಂದ್ಯ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಲು ಇನ್ನು 522 ರನ್ಗಳ ಅವಶ್ಯಕತೆ ಇದೆ. ದಕ್ಷಿಣ ಆಫ್ರಿಕಾ ಈ ಪಂದ್ಯವನ್ನು ಗೆಲ್ಲಲು 8 ವಿಕೆಟ್ ಅವಶ್ಯಕತೆ ಇದ್ದು, ಭಾರತ ಪವಾಡದ ನಿರೀಕ್ಷೆಯನ್ನು ಹೊಂದಿದೆ.
ದಕ್ಷಿಣ ಆಫ್ರಿಕಾ ತಂಡದ ಎದುರು ಪಂದ್ಯ ಗೆಲ್ಲಲೇ ಬೇಕಾದ ಒತ್ತಡದಲ್ಲಿರುವ ಟೀಮ್ ಇಂಡಿಯಾ ಎರಡನೇ ಇನಿಂಗ್ಸ್ನಲ್ಲೂ ಸ್ಥಿರ ಬ್ಯಾಟಿಂಗ್ ಮಾಡುವಲ್ಲಿ ವಿಫಲವಾಗಿದೆ. ದಕ್ಷಿಣ ಆಫ್ರಿಕಾ ತಂಡ ನೀಡಿರುವ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಟೀಮ್ ಇಂಡಿಯಾದ ಬ್ಯಾಟರ್ಗಳು ಒತ್ತಡವನ್ನು ಮೆಟ್ಟಿನಿಲ್ಲುವಲ್ಲಿ ವಿಫಲರಾದರು. ನಾಲ್ಕನೆ ದಿನದಾಟದಲ್ಲಿ ಟೀಮ್ ಇಂಡಿಯಾ ಕೇವಲ 15.5 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಒತ್ತಡದಲ್ಲಿದೆ. 2ನೇ ಟೆಸ್ಟ್ ಪಂದ್ಯ ಕೊನೆಯ ದಿನದಂದು ಟೀಮ್ ಇಂಡಿಯಾದ ಪರ ಸಾಯಿ ಸುದರ್ಶನ್, ನೈಟ್ವಾಚ್ಮನ್ ಕುಲ್ದೀಪ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಟೀಮ್ ಇಂಡಿಯಾದ ಆರಂಭಿಕರಿಬ್ಬರೂ ನೆಲಕಚ್ಚಿ ಬ್ಯಾಟ್ ಮಾಡುವಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದ ಯಶಸ್ವಿ ಜೈಸ್ವಾಲ್ ಎರಡನೇ ಇನಿಂಗ್ಸ್ನಲ್ಲಿ 17 ರನ್ಗಳಿಗೆ ಆಟ ಮುಗಿಸಿದರು. ಇವರು 1 ಬೌಂಡರಿ, 1 ಸಿಕ್ಸರ್ ಸಹಾಯದಿಂದ 13 ರನ್ ಬಾರಿಸಿ ಮಾರ್ಕೊ ಜಾನ್ಸನ್ ತೋಡಿದ ಖೆಡ್ಡಾಗೆ ಬಲಿಯಾದರು. ಟೀಮ್ ಇಂಡಿಯಾದ ನುರಿತ ಟೆಸ್ಟ್ ಬ್ಯಾಟರ್ ಕೆಎಲ್ ರಾಹುಲ್ ಸಹ ಒತ್ತಡಕ್ಕೆ ಎದೆ ಕೊಟ್ಟು ಬ್ಯಾಟ್ ಮಾಡಲಿಲ್ಲ. 30 ಎಸೆತಗಳನ್ನು ಎದುರಿಸಿದರೂ ಸಹ ಪಿಚ್ ಮರ್ಮ್ ಅರಿಯುವಲ್ಲಿ ವಿಫಲರಾದರು. ಅಂತಿಮವಾಗಿ ರಾಹುಲ್ 6 ರನ್ ಬಾರಿಸಿದಾಗ ಹಾರ್ಮರ್ ಸ್ಪಿನ್ ಮೋಡಿಗೆ ಬಲಿಯಾದರು.
ಟೀಮ್ ಇಂಡಿಯಾ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಬೇಕಾದಲ್ಲಿ ಪವಾಡ ನಡೆಯುವುದು ಅನಿವಾರ್ಯವಾಗಿದೆ. ಐದನೇ ದಿನದಾಟದ ಮೊದಲ ಅವಧಿಯಲ್ಲಿ ಸಾಯಿ ಸುದರ್ಶನ್, ಕುಲ್ದೀಪ್ ಯಾದವ್ ಎಚ್ಚರಿಕೆಯ ಬ್ಯಾಟಿಂಗ್ ಮಾಡುವ ಅನಿವಾರ್ಯತೆ ಇದೆ. ಅಲ್ಲದೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಧ್ರುವ್ ಜುರೇಲ್, ದಕ್ಷಿಣ ಆಫ್ರಿಕಾ "ಎ" ವಿರುದ್ಧ ನೀಡಿದ್ದ ಪ್ರದರ್ಶನವನ್ನೇ ನೀಡುವ ಅನಿವಾರ್ಯತೆ ಇದೆ. ಇನ್ನು ರಿಷಭ್ ಪಂತ್ ತಮ್ಮ ನೈಜ್ಯ ಶೈಲಿಯ ಬ್ಯಾಟಿಂಗ್ನ್ನು ಬದಿಗಿಟ್ಟು, ತಾಳ್ಮೆಯಿಂದ ಬ್ಯಾಟ್ ಮಾಡಬೇಕಿದೆ. ಅಲ್ಲದೆ ಆಲ್ರೌಂಡರ್ಗಳಾದ ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕು. ಅಂದಾಗ ಮಾತ್ರ ತಂಡ ಡ್ರಾ ಕನಸು ಕಾಣಬಹುದಾಗಿದೆ. ಇಲ್ಲದಿದ್ದರೆ ತಂಡ ಮತ್ತೊಂದು ಸೋಲನ್ನು ಅನುಭವಿಸಲಿದೆ.