ಲೀಡ್ಸ್, ಜುಲೈ 17: ಭಾರತ-ಇಂಗ್ಲೆಂಡ್ ಸರಣಿಯ ಮೂರನೇಯ ಹಾಗೂ ಕೊನೆಯ ಏಕದಿನ ಪಂದ್ಯ ಇಂದು ಲೀಡ್ಸ್ನ ಹೆಡಿಂಗ್ಲೇ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನ ಸಂಜೆ 5ಕ್ಕೆ ನಡೆಯಲಿದೆ.
ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಎರಡೂ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿದ್ದು ಮೂರನೇ ಪಂದ್ಯ ನಿರ್ಣಾಯಕ ಪಂದ್ಯವಾಗಿದೆ. ಈ ಪಂದ್ಯ ಗೆದ್ದವರಿಗೆ ಸರಣಿ ಕೈವಶವಾಗಲಿದೆ.
ಮೊದಲ ಪಂದ್ಯದಲ್ಲಿ 8 ವಿಕೆಟ್ಗಳಿಂದ ಭರ್ಜರಿ ಜಯ ಗಳಿಸಿದ್ದ ಭಾರತ ತಂಡ ಎರಡನೇ ಪಂದ್ಯದಲ್ಲಿ ಹೀನಾಯ ಸೋಲು ಕಂಡಿತ್ತು. ಇದೀಗ ಇತ್ತಂಡಗಳಿಗೂ ಈ ಪಂದ್ಯ ಅತ್ಯವಶ್ಯಕವಾಗಿದ್ದು ಗೆದ್ದ ತಂಡ ಸರಣಿ ಶ್ರೇಷ್ಠ ಪ್ರಶಸ್ತಿಗೆ ಮುತ್ತಿಕ್ಕಲಿದೆ.
ಮೊದಲ ಪಂದ್ಯವನ್ನು ಸೋತರು ಎರಡನೇ ಪಂದ್ಯದಲ್ಲಿ ಅಧಿಕಾರಯುತ ಗೆಲುವು ಕಂಡಿರುವ ಇಂಗ್ಲೆಂಡ್ ಆತ್ಮವಿಶ್ವಾಸದಿಂದೆ. ಭಾರತ ಕಳೆದ ಪಂದ್ಯದಲ್ಲಿ ಅನುಭವಿಸಿರುವ ಹಿನ್ನಡೆಯಿಂದ ಒತ್ತೊಡಕ್ಕೊಳಗಾಗಿದ್ದರೂ ಸಹ ಪುಟಿದೇಳುವ ವಿಶ್ವಾಸದಲ್ಲಿದೆ.
ಭಾರತದ ಪರ ಇಂದು ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಕಣ್ಕಿಳಿಯುವ ಸಾಧ್ಯತೆ ಇದೆ. ಗಾಯಾಳುವಾಗಿದ್ದ ಅವರು ಇಂದು ದೈಹಿಕ ಸಾಮರ್ಥ್ಯ ಪರೀಕ್ಷೆ ಎದುರಿಸುತ್ತಿದ್ದಾರೆ.
ಇಂಗ್ಲೆಂಡ್ ತಂಡದಲ್ಲಿ ಸಹ ಬದಲಾವಣೆ ಸಾಧ್ಯತೆ ಇದ್ದು ಜಾಸನ್ ರಾಯ್ ಬದಲಿಗೆ, ಸ್ಯಾಮ್ ಬಿಲ್ಲಿಂಗ್ಸ್ ಅಥವಾ ಜೇಮ್ಸ್ ವಿನ್ಸ್ ಕಣಕ್ಕಿಳಿಯಲಿದ್ದಾರೆ.
ಇಂಗ್ಲೆಂಡ್ ನೆಲದಲ್ಲೇ ಮುಂದಿನ ವರ್ಷಾಂತ್ಯದಲ್ಲಿ ವಿಶ್ವಕಪ್ ಪಂದ್ಯಾವಳಿ ನಡೆಯಲಿದ್ದು, ಆ ಕಾರಣಕ್ಕಾಗಿ ಭಾರತದ ಮಟ್ಟಿಗೆ ಇದು ಅತ್ಯಂತ ಮಹತ್ವವಾದ ಸರಣಿಯಾಗಿದೆ. ಈ ಸರಣಿಯ ಗೆಲುವು ವಿಶ್ವಕಪ್ ಆಡಲು ಇಂಗ್ಲೆಂಡ್ಗೆ ತೆರಳುವ ತಂಡಕ್ಕೆ ವಿಶ್ವಾಸ ತುಂಬುವುದರಲ್ಲಿ ಸಂಶಯವಿಲ್ಲ.