ಆಗಸ್ಟ್ 7 ಬುಧವಾರ, ಶ್ರೀಲಂಕಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಟಿ20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿತ್ತು. ನಂತರ ಆರಂಭವಾದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಗೆಲುವಿಗಾಗಿ ಪರದಾಡುತ್ತಿದೆ.
ಈಗಾಗಲೇ ಎರಡು ಪಂದ್ಯಗಳು ನಡೆದಿವೆ. ಮೊದಲ ಏಕದಿನ ಪಂದ್ಯದಲ್ಲಿ ಗೆಲ್ಲುವ ಪಂದ್ಯವನ್ನು ಭಾರತ ಟೈ ಮಾಡಿಕೊಂಡಿತ್ತು. ಎರಡನೇ ಪಂದ್ಯದಲ್ಲಿ ಕಡಿಮೆ ಸ್ಕೋರ್ ಪಂದ್ಯವನ್ನು ಗೆಲ್ಲಲು ಭಾರತ ತಂಡದಿಂದ ಸಾಧ್ಯವಾಗಲಿಲ್ಲ. ಇದಕ್ಕೆ ಬ್ಯಾಟಿಂಗ್ ವೈಫಲ್ಯವೇ ಮುಖ್ಯ ಕಾರಣವಾಯಿತು.

ಸದ್ಯ ಶ್ರೀಲಂಕಾ ತಂಡವು ಸರಣಿಯಲ್ಲಿ 1-0 ರಲ್ಲಿ ಮುನ್ನಡೆ ಸಾಧಿಸಿದ್ದು, ಕೊನೆಯ ಪಂದ್ಯವನ್ನೂ ಗೆಲ್ಲುವ ಲೆಕ್ಕಚಾರದಲ್ಲಿದೆ. ಇನ್ನೊಂದೆಡೆ ರೋಹಿತ್ ಶರ್ಮಾ ಪಡೆ ಏಕದಿನ ಸರಣಿಯಲ್ಲಿ ಸಮಬಲ ಸಾಧಿಸಲು ಭರ್ಜರಿ ತಯಾರಿ ನಡೆಸಿದೆ.
ಹೀಗಾಗಿ ಇಂದು (ಬುಧವಾರ) ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿರುವ ಕೊನೆಯ ಏಕದಿನ ಪಂದ್ಯದಲ್ಲಿ ಉಭಯ ತಂಡಗಳು ಪರಸ್ಪರ ಪೈಪೋಟಿ ನಡೆಸಲಿವೆ. ಈ ಪಂದ್ಯದಲ್ಲಿ ಟಾಸ್ ಪ್ರಮುಖ ಪಾತ್ರ ವಹಿಸಲಿದ್ದು, ರೋಹಿತ್ ಶರ್ಮಾ ಪರ ನಾಣ್ಯ ಬಿದ್ದರೆ ಟೀಮ್ ಇಂಡಿಯಾ ಗೆಲುವು ಖಚಿತ.
ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಇಲ್ಲಿಯವರೆಗೆ ಭಾರತ ಒಂದೇ ಒಂದು ಪಂದ್ಯದಲ್ಲೂ ಟಾಸ್ ಗೆದ್ದಿಲ್ಲ. ಕಳೆದ ಎರಡು ಪಂದ್ಯಗಳಲ್ಲಿ ಶ್ರೀಲಂಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದೆ. ಎರಡೂ ಪಂದ್ಯಗಳಲ್ಲಿ ಈ ಪಿಚ್ನಲ್ಲಿ ಸ್ಪಿನ್ನರ್ಗಳ ಪ್ರಾಬಲ್ಯ ಮುಂದುವರೆದಿದೆ.
ಎರಡನೇ ಪಂದ್ಯದಲ್ಲಿ ಶ್ರೀಲಂಕಾದ ಮಿಸ್ಟರಿ ಸ್ಪಿನ್ನರ್ ಜೆಫ್ರಿ ವಾಂಡರ್ಸೆ ಟೀಮ್ ಇಂಡಿಯಾ ಬ್ಯಾಟರ್ಸ್ ಅನ್ನು ಮಂಡಿಯೂರುವಂತೆ ಮಾಡಿದರು. ಹೀಗಿರುವಾಗ ಟೀಮ್ ಇಂಡಿಯಾದ ಸ್ಪಿನ್ನರ್ ಗಳು ಕೂಡ ಸಂಪೂರ್ಣ ಪ್ಲಾನಿಂಗ್ ಮಾಡಿಕೊಂಡು ಮೂರನೇ ಏಕದಿನ ಪಂದ್ಯವನ್ನಾಡಬೇಕಿದೆ. ಇದಕ್ಕಾಗಿ ಟೀಮ್ ಇಂಡಿಯಾ ಮೊದಲು ಟಾಸ್ ಗೆಲ್ಲುವುದು ಸೂಕ್ತ.
ಮೂರನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಟಾಸ್ ಗೆಲ್ಲುವುದ ಅತ್ಯಂತ ಮಹತ್ವದ್ದಾಗಿದೆ. ಕಳೆದೆರಡು ಪಂದ್ಯಗಳಲ್ಲಿ ಭಾರತ ತಂಡ ಟಾಸ್ ಸೋತಿದ್ದು, ಬಳಿಕ ನಿಧಾನಗತಿಯ ಪಿಚ್ ನಿಂದಾಗಿ ಭಾರತದ ಬ್ಯಾಟರ್ಸ್ಗಳು ರನ್ ಗಳಿಸಲು ಪರದಾಡುವಂತಾಗಿದೆ.
ಯಾವ ತಂಡ ಟಾಸ್ ಗೆದ್ದರೂ ಮೊದಲು ಬ್ಯಾಟಿಂಗ್ ಮಾಡುವ ಮೂಲಕ ಸ್ಕೋರ್ಬೋರ್ಡ್ನಲ್ಲಿ ದೊಡ್ಡ ಸ್ಕೋರ್ ಮಾಡಲು ಪ್ರಯತ್ನಿಸುತ್ತದೆ. ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ಸ್ ಶ್ರೀಲಂಕಾ ತಂಡವನ್ನು ಸುಲಭವಾಗಿ ಕಟ್ಟಿ ಹಾಕಬಹುದು.
ಪ್ರಸ್ತುತ ಶ್ರೀಲಂಕಾ ತಂಡ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಆತಿಥೇಯ ತಂಡ ಕೊನೆಯ ಪಂದ್ಯದಲ್ಲಿ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಇದೇ ವೇಳೆ 27 ವರ್ಷಗಳ ಹಳೆಯ ದಾಖಲೆಯನ್ನು ಭಾರತದ ವಿರುದ್ಧ ಶ್ರೀಲಂಕಾ ಮುರಿಯಲಿದೆ.
1997ರಲ್ಲಿ ಶ್ರೀಲಂಕಾ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಸೋಲಿಸಿತ್ತು. ಆಗ ಭಾರತ ತಂಡದ ನಾಯಕ ಸಚಿನ್ ತೆಂಡೂಲ್ಕರ್ ಆಗಿದ್ದರು. ಈಗ ರೋಹಿತ್ ಶರ್ಮಾ ಮತ್ತು ಹೊಸ ಕೋಚ್ ಗೌತಮ್ ಗಂಭೀರ್ ಖಂಡಿತವಾಗಿಯೂ ಶ್ರೀಲಂಕಾ ದಾಖಲೆ ಮಾಡುವುದನ್ನು ತಪ್ಪಿಸಲು ದೊಡ್ಡ ಪ್ಲಾನ್ ಮಾಡಿದ್ದಾರೆ. ಟೀಮ್ ಇಂಡಿಯಾ ಪ್ಲೇಯಿಂಗ್-11 ಬದಲಾವಣೆ ಆದರೂ ಅಚ್ಚರಿಪಡುವಂತಿಲ್ಲ.