ಭಾರತ ತಂಡಕ್ಕೆ 2025 ಉತ್ತಮ ವರ್ಷವಾಗಿದೆ. ಸಾಲು ಸಾಲು ಟ್ರೋಫಿಗಳನ್ನು ಗೆದ್ದು ಬೀಗಿದೆ. ವರ್ಷದ ಆರಂಭದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪ್ರಶಸ್ತಿ ಗೆದ್ದಿದ್ದ ಭಾರತ, ಏಷ್ಯಾ ಕಪ್ ಟಿ20 ಟೂರ್ನಿಗೂ ಮುತ್ತಿಟ್ಟಿದೆ. ಆದರೆ ಟೆಸ್ಟ್ ಕ್ರಿಕೆಟ್ನಲ್ಲಿ ಮಾತ್ರ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಸೋಲು ಹಾಗೂ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ತಂಡವನ್ನು ಬಹುವಾಗಿ ಕಾಡಿದೆ. ಹೀಗಾಗಿ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರ ಕಾರ್ಯದ ಮೇಲೆ ಪ್ರಶ್ನೆಗಳು ಏಳುವಂತೆ ಮಾಡಿದೆ.
ಕಳೆದ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಸೋತ ಬಳಿಕ ಗಂಭೀರ್ ಅವರ ಕೋಚಿಂಗ್ ಬಗ್ಗೆ ಪ್ರಶ್ನೆಗಳು ಎದ್ದಿವೆ. ಇನ್ನು ಮೂಲಗಳ ಪ್ರಕಾರ ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟರ್ ವಿವಿಎಸ್ ಲಕ್ಷ್ಮಣ್ ಅವರಿಗೆ ಟೆಸ್ಟ್ ಕೋಚ್ ಆಗಿ ನೇಮಿಸುವ ಬಗ್ಗೆ ಒಲವು ಹೊಂದಿದೆ. ಈ ಬಗ್ಗೆ ಬಿಸಿಸಿಐ ವಿವಿಎಸ್ ಲಕ್ಷ್ಮಣ್ ಅವರನ್ನು ಸಂರ್ಪಕಿಸಿದೆ ಎಂದು ತಿಳಿದು ಬಂದಿದೆ.

ಸದ್ಯ ವಿವಿಎಸ್ ಲಕ್ಷ್ಮಣ್ ಅವರು ಬೆಂಗಳೂರಿನಲ್ಲಿರು ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಈ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಇನ್ನು ಮೂಲಗಳ ಪ್ರಕಾರ ಗೌತಮ್ ಗಂಭೀರ್ ಅವರ ಕೋಚ್ ಸ್ಥಾನವು 2027ರ ವರೆಗೆ ಭದ್ರವಾಗಿದೆ. ಇನ್ನು ವಿವಿಎಸ್ ಲಕ್ಷ್ಮಣ್ ಅವರನ್ನು ಟೆಸ್ಟ್ ತಂಡದ ಕೋಚ್ ಆಗಿ ಮಾಡುವ ಬಗ್ಗೆ ಬಿಸಿಸಿಐ ಅಧಿಕೃತವಾಗಿ ಆಗಲಿ, ಅನಧಿಕೃತವಾಗಿ ಆಗಲಿ ಮಾತುಕತೆ ನಡೆಸಿಲ್ಲ ಎಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿವೆ. ಬಿಸಿಸಿಐ ಗೌತಮ್ ಗಂಭೀರ್ ಅವರ ಮೇಲೆ ನಂಬಿಕೆ ಇಟ್ಟಿದ್ದು, ಇವರನ್ನು ಬದಲಿಸುವ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ತಿಳಿದು ಬಂದಿದೆ.
ಗೌತಮ್ ಗಂಭೀರ್ ಅವರ ಕೋಚ್ ಅವಧಿ 2027ರ ವರೆಗೆ ಇರಲಿದೆ. ಕೋಚ್ ಗಂಭೀರ್ ಅವರ ಮುಂದಾಳತ್ವದಲ್ಲಿ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಕಣಕ್ಕೆ ಇಳಿಯಲಿದೆ. ಈ ವೇಳೆ ಭಾರತ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಪ್ರಯತ್ನ ಪಡುತ್ತಿದೆ. ಈ ವೇಳೆ ಭಾರತಕ್ಕೆ ಸುವರ್ಣ ಅವಕಾಶ ಸಹ ಕೂಡಿ ಬಂದಿದೆ. ಕೋಚ್ ಗಂಭೀರ್ ಅವರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾದ ಟೆಸ್ಟ್ನಲ್ಲಿ ಸ್ಥಿರ ಪ್ರದರ್ಶನ ನೀಡದ ಹಿನ್ನೆಲೆ ಇವರು ಈ ಸ್ಥಾನದಲ್ಲಿ ಮುಂದುಚರೆಯಬೇಕೆ ಬೇಡವೇ ಎಂಬ ಬಗ್ಗೆ ಚರ್ಚೆಗಳು ನಡೆದಿವೆ.

ಇಂಗ್ಲೆಂಡ್ ಪ್ರವಾಸದಲ್ಲಿ ನಡೆದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-2 ರಿಂದ ಸಮಬಲ ಸಾಧಿಸಿದ್ದು ಗಂಭೀರ್ ಕೋಚ್ ಅವಧಿಯಲ್ಲಿ ದೊಡ್ಡ ಸಾಧನೆ ಆಗಿದೆ. ಆದರೆ ತವರಿನಲ್ಲಿ ಸಾಲು ಸಾಲು ಸೋಲುಗಳು ಇವರನ್ನು ಅಪ್ಪಿಕೊಂಡಿವೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ 2025-27ರ ಸಾಲಿನಲ್ಲಿ ಚಾಂಪಿಯನ್ ಪಟ್ಟವನ್ನು ಭಾರತ ಅಲಂಕರಿಸಬೇಕಾದಲ್ಲಿ ಸ್ಥಿರ ಪ್ರದರ್ಶನ ನೀಡುವ ಅನಿವಾರ್ಯತೆ ಇದೆ.