ಪಾಕ್ ವಿರುದ್ಧ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ಕ್ರಿಕೆಟಿಗ ಈಗ ದಿನಗೂಲಿ ನೌಕರ!

ಸದ್ಯ ಟೋಕಿಯೋ ಒಲಿಂಪಿಕ್ಸ್ 2020ಕ್ಕೆ ಭಾನುವಾರ ತೆರೆ ಬಿದ್ದಿದ್ದು ಪದಕ ಗೆದ್ದ ಭಾರತದ ವಿವಿಧ ಕ್ರೀಡಾ ಪಟುಗಳಿಗೆ ದೊಡ್ಡ ಮಟ್ಟದಲ್ಲಿ ಮನ್ನಣೆ ಮತ್ತು ಗೌರವ ಸಿಕ್ಕಿದೆ. ದೇಶದಾದ್ಯಂತ ಈ ಕ್ರೀಡಾಪಟುಗಳಿಗೆ ಗೌರವ ಸೂಚಿಸುವುದು ಮಾತ್ರವಲ್ಲದೆ ವಿವಿಧ ರಾಜ್ಯ ಸರಕಾರಗಳು ಮತ್ತು ಖಾಸಗಿ ಸಂಸ್ಥೆಗಳು ಕೋಟ್ಯಂತರ ರೂಪಾಯಿಗಳನ್ನು ಗೌರವಧನವಾಗಿ ನೀಡಿವೆ ಮತ್ತು ವಿವಿಧ ಹುದ್ದೆಗಳ ಅವಕಾಶವನ್ನು ಸಹ ಮುಂದಿಟ್ಟಿವೆ.
ಹೀಗೆ ಒಲಿಂಪಿಕ್ಸ್ನಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸಿಗುತ್ತಿರುವ ದೊಡ್ಡ ಮಟ್ಟದ ಗೌರವ ಮತ್ತು ಮನ್ನಣೆ ಈ ಹಿಂದೆ ವಿಶ್ವಕಪ್ ಟೂರ್ನಿಯೊಂದರ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಭಾರತಕ್ಕೆ ಪ್ರಶಸ್ತಿ ಸಿಗುವಂತೆ ಮಾಡಿದ್ದ ಕ್ರಿಕೆಟಿಗನಿಗೆ ಸಿಕ್ಕಿಲ್ಲ. ಹೌದು 2018ರಲ್ಲಿ ನಡೆದಿದ್ದ ಅಂಧರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಅಂಧರ ಕ್ರಿಕೆಟ್ ತಂಡ ಫೈನಲ್ ಪಂದ್ಯದಲ್ಲಿ ಜಯ ಸಾಧಿಸುವುದರ ಮೂಲಕ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.
ವಿಶ್ವಕಪ್ ಗೆದ್ದ ಈ ಭಾರತದ ಅಂಧರ ತಂಡದ ಪ್ರಮುಖ ಆಟಗಾರನಾಗಿದ್ದ ಗುಜರಾತ್ ಮೂಲದ ನರೇಶ್ ತುಮ್ದಾ ಇದೀಗ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದಾರೆ. ವಿಶ್ವಕಪ್ ಗೆದ್ದ ಸಮಯದಲ್ಲಿ ಸಾಕಷ್ಟು ಪ್ರಶಂಸೆ ಮತ್ತು ಭರವಸೆಗಳನ್ನು ಪಡೆದುಕೊಂಡಿದ್ದ ನರೇಶ್ ತುಮ್ದಾ ಸದ್ಯ ಯಾವುದೇ ಕೆಲಸವಿಲ್ಲದೇ ಜೀವನೋಪಾಯಕ್ಕಾಗಿ ಇಟ್ಟಿಗೆ ಹೊರುತ್ತಾ ಕೂಲಿ ಕೆಲಸ ಮಾಡುತ್ತಿದ್ದಾರೆ. ದಿನಕ್ಕೆ 250 ರೂ. ಕೂಲಿ ಮೊತ್ತ ಸಿಗಲಿದ್ದು ಅದನ್ನೇ ಅವಲಂಬಿಸಿ ಜೀವನವನ್ನು ಕಷ್ಟದಿಂದ ಸಾಗಿಸುತ್ತಿದ್ದಾರೆ. ವಿಶ್ವಕಪ್ ಗೆದ್ದ ಸಮಯದಲ್ಲಿ ನಿಜವಾದ ಹೀರೋಗಳೆಂದು ಸುದ್ದಿಯಾಗಿದ್ದ ಅಂಧರ ಕ್ರಿಕೆಟಿಗರ ತಂಡದ ಆಟಗಾರ ಈ ಪರಿಸ್ಥಿತಿಯಲ್ಲಿರುವುದು ನಿಜಕ್ಕೂ ಬೇಸರದ ಸಂಗತಿ.

ಸರ್ಕಾರಗಳ ನಿರ್ಲಕ್ಷ್ಯ
2018ರಲ್ಲಿ ಭಾರತದ ಬದ್ಧವೈರಿ ಪಾಕಿಸ್ತಾನದ ವಿರುದ್ಧ ಅಂಧರ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ 308 ರನ್ ಚೇಸ್ ಮಾಡುವುದರ ಮೂಲಕ ಭಾರತ ತಂಡ ವಿಶ್ವಕಪ್ ಗೆದ್ದಿತ್ತು. ಹೀಗೆ ಪಾಕಿಸ್ತಾನದ ವಿರುದ್ಧ ಫೈನಲ್ ಪಂದ್ಯದಲ್ಲಿ ಗೆಲ್ಲುವುದರ ಮೂಲಕ ಐತಿಹಾಸಿಕ ದಾಖಲೆ ಮಾಡಿದ ಅಂಧರ ತಂಡದ ಆಟಗಾರನೋರ್ವ ಈ ರೀತಿ ಕೂಲಿ ಕೆಲಸ ಮಾಡಿ ಬದುಕುತ್ತಿರುವುದು ಸದ್ಯ ಅಂಧ ಕ್ರಿಕೆಟಿಗರ ಕುರಿತು ಕ್ರೀಡಾ ಇಲಾಖೆ ಮತ್ತು ಸರಕಾರಗಳು ತೋರುತ್ತಿರುವ ಅಸಹಾಯಕತೆಯ ಸಂಕೇತವಾಗಿದೆ.

ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಸಿಗುವ ಬೆಲೆ ಇವರಿಗೇಕಿಲ್ಲ?
ಸದ್ಯ ಭಾರತದ ಅಂಧರ ವಿಶ್ವಕಪ್ ವಿಜೇತ ತಂಡದ ಆಟಗಾರನಾಗಿದ್ದ ನರೇಶ್ ತುಮ್ದಾ ಕೂಲಿ ಕೆಲಸ ಮಾಡುತ್ತಿರುವುದರ ಕುರಿತು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದು ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಸಿಗುವ ಮನ್ನಣೆ, ಗೌರವ ಮತ್ತು ಉದ್ಯೋಗಾವಕಾಶಗಳು ಅಂಧರ ಕ್ರಿಕೆಟ್ ವಿಶ್ವಕಪ್ ತಂದುಕೊಟ್ಟ ಆಟಗಾರರಿಗೆ ಯಾಕಿಲ್ಲ? ಎಂದು ಕ್ರೀಡಾ ಇಲಾಖೆ ಮತ್ತು ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ.

ಅಂಧರಿಗೆ ಬದುಕುವುದು ಕಷ್ಟವಾದರೂ ನಿರ್ಲಕ್ಷ್ಯ
ಮೊದಲೇ ಅಂಧರಾಗಿರುವ ಈ ಆಟಗಾರರು ಸಾಮಾನ್ಯ ಆಟಗಾರರ ರೀತಿ ಇತರ ಕೆಲಸಗಳನ್ನು ಮಾಡಿ ಬದುಕು ಕಟ್ಟಿಕೊಳ್ಳಲು ಕೂಡ ಅಸಾಧ್ಯ. ಕಣ್ಣೇ ಇಲ್ಲದೆ ಐತಿಹಾಸಿಕ ಸಾಧನೆ ಮಾಡಿರುವ ಇಂಥವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳನ್ನು ಕಲ್ಪಿಸಿ, ಸಮಾಜದಲ್ಲಿ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡದ ಕ್ರೀಡಾ ಇಲಾಖೆ ಮತ್ತು ಕೇಂದ್ರ ಸರ್ಕಾರ ಇರುವುದು ವ್ಯರ್ಥ ಎಂದು ಕ್ರೀಡಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2018ರಲ್ಲಿ ಅಂಧರ ವಿಶ್ವಕಪ್ ಗೆದ್ದಾಗ ಇದೇ ಆಟಗಾರರಿಗೆ ಸಾಲು ಸಾಲು ಶುಭಾಶಯಗಳ ಸುರಿಮಳೆಗಳೇ ಸುರಿದಿದ್ದವು, ನಗದು ಪುರಸ್ಕಾರಗಳ ಆಶ್ವಾಸನೆ ಘೋಷಣೆಯಾಗಿದ್ದವು ಮತ್ತು ಇಂತಹ ಆಟಗಾರರ ಬೆಂಬಲಕ್ಕೆ ಸದಾ ನಿಲ್ಲುತ್ತೇವೆ ಎಂದು ಹಲವಾರು ಮಂದಿ ಹೇಳಿಕೆಗಳನ್ನು ನೀಡಿದ್ದರು. ಆದರೆ ಅಂದು ನೀಡಿದ್ದ ಹೇಳಿಕೆಗಳು ಮತ್ತು ಆಶ್ವಾಸನೆಗಳು ಈಗ ಯಾವುದೂ ಸಹ ನಿಜವಾಗಿಲ್ಲ, ಹೀಗಾಗಿಯೇ ಇಂದು ನರೇಶ್ ತುಮ್ದಾ ಇಟ್ಟಿಗೆ ಹೊರುವಂತಹ ಪರಿಸ್ಥಿತಿಗೆ ಬಂದು ನಿಂತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications